VHP campaigns for Hanuman flag, Mangalore: ರಾಜ್ಯಾದ್ಯಂತ ಮನೆ ಮನೆಗಳಲ್ಲಿ ಹನುಮ ಧ್ವಜ ಅಭಿಯಾನ, ಕೆರಗೋಡು ಕೃತ್ಯದಿಂದ ಹಿಂದುಗಳ ಭಾವನೆಗೆ ಧಕ್ಕೆ, ಫೆ.10ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹನುಮಾನ್ ಚಾಲೀಸಾ ಪ್ರತಿಭಟನೆಗೆ ಕರೆ

02-02-24 08:32 pm       Mangalore Correspondent   ಕರಾವಳಿ

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಬಲವಂತದಿಂದ ತೆರವುಗೊಳಿಸಿದ್ದು ಹಿಂದುಗಳ ಭಾವನೆಗೆ ನೋವು ಕೊಟ್ಟಿದೆ. ಹೀಗಾಗಿ ಹಿಂದು ಸಮಾಜದಲ್ಲಿ ವಿಶ್ವಾಸ ತುಂಬಿಸಲು ರಾಜ್ಯಾದ್ಯಂತ ಹಿಂದು ಮನೆಗಳಲ್ಲಿ ಹನುಮ ಧ್ವಜ ಹಾಕಲು ಕರೆ ಕೊಟ್ಟಿದ್ದೇವೆ.

ಮಂಗಳೂರು, ಫೆ.2: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಬಲವಂತದಿಂದ ತೆರವುಗೊಳಿಸಿದ್ದು ಹಿಂದುಗಳ ಭಾವನೆಗೆ ನೋವು ಕೊಟ್ಟಿದೆ. ಹೀಗಾಗಿ ಹಿಂದು ಸಮಾಜದಲ್ಲಿ ವಿಶ್ವಾಸ ತುಂಬಿಸಲು ರಾಜ್ಯಾದ್ಯಂತ ಹಿಂದು ಮನೆಗಳಲ್ಲಿ ಹನುಮ ಧ್ವಜ ಹಾಕಲು ಕರೆ ಕೊಟ್ಟಿದ್ದೇವೆ. ಅಲ್ಲದೆ, ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಹನುಮ ಧ್ವಜ ಅಭಿಯಾನ ನಡೆಸುತ್ತೇವೆ. ಫೆ.9ರ ವರೆಗೆ ಹನುಮ ಧ್ವಜ ಅಭಿಯಾನ ನಡೆಯಲಿದ್ದು, ಫೆ.10ರಂದು ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿ ಪ್ರತಿಭಟನೆ ನಡೆಸಲಾಗುವುದು ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್ ಹೇಳಿದ್ದಾರೆ.

ಕದ್ರಿಯ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕೆರಗೋಡು ಗ್ರಾಮದಲ್ಲಿ ಗ್ರಾಮಸ್ಥರೇ ಹಣ ವ್ಯಯಿಸಿ ಹನುಮಧ್ವಜ ಸ್ಥಾಪನೆ ಮಾಡಿದ್ದರು. ರಾಜ್ಯದ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ನೋವಾಗುತ್ತೆ ಎಂದು ಹೇಳಿ ಧ್ವಜ ತೆರವು ಮಾಡಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದು, ಹಿಂದು ಸಮಾಜಕ್ಕೆ ನೋವು ಕೊಟ್ಟಿರುವುದನ್ನು ಸಹಿಸುವುದಿಲ್ಲ. ಇದನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಹಿಂದು ಮನೆಗಳಲ್ಲಿ ಸ್ವಯಂಪ್ರೇರಿತವಾಗಿ ಹನುಮ ಧ್ವಜ ಹಾಕಲಿದ್ದಾರೆ. ಫೆ.9 ಅಥವಾ 10ರಂದು ಸಾಮೂಹಿಕವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.

ಮಳಲಿ ಮಸೀದಿಯ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಈಗಾಗಲೇ ಕೋರ್ಟಿನಲ್ಲಿ ವಿಚಾರಣೆ ಆಗ್ತಾ ಇದೆ. ಅದು ನಮ್ಮ ಪರವಾಗಿಯೇ ತೀರ್ಪು ಬರುತ್ತೆ ಎನ್ನುವ ವಿಶ್ವಾಸದಲ್ಲಿದ್ದೇವೆ. ಜ್ಞಾನವಾಪಿ ಮಸೀದಿ ರೀತಿಯಲ್ಲೇ ಎಎಸ್ಐ ಸರ್ವೆ ಆಗಬೇಕೆಂದು ನಾವು ಒತ್ತಾಯ ಮಾಡುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ನೀಡಿರುವ ಪ್ರತ್ಯೇಕ ರಾಷ್ಟ್ರದ ಕುರಿತ ಪ್ರಶ್ನೆಗೆ, ನಾವು ಅಖಂಡ ಭಾರತದ ಸಂಕಲ್ಪ ಹೊಂದಿರುವವರು. ಬಜರಂಗದಳ ಸ್ಥಾಪನೆ ದಿನದಿಂದಲೇ ಪ್ರತಿವರ್ಷ ಆಗಸ್ಟ್ 14ರಂದು ಅಖಂಡ ಭಾರತ ಸಂಕಲ್ಪ ಮಾಡುತ್ತೇವೆ. ಅನುದಾನದ ವಿಚಾರದಲ್ಲಿ ಪ್ರಶ್ನೆ ಇದ್ದರೆ, ಅದನ್ನು ಕೇಳಬೇಕು ವಿನಾ ದೇಶ ಒಡೆಯುವ ಮಾತನ್ನಾಡಿದ್ದು ತಪ್ಪು. ನಾವದನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಪುರುಷೋತ್ತಮ್, ಭುಜಂಗ ಕುಲಾಲ್, ಪುನೀತ್ ಅತ್ತಾವರ್ ಮತ್ತಿತರರಿದ್ದರು.

VHP campaigns for Hanuman flag on every house in Mangalore.