ಬಂದ್ ಬಂದ್ ಅನ್ನುತ್ತೀರಲ್ಲಾ.. ಕರ್ನಾಟಕ ಏನ್ ನಿಮ್ಮಪ್ಪನ ಆಸ್ತೀನಾ.. ಬಂದ್ ಮಾಡಲು ಬಂದರೆ ಕಲ್ಲು ಹೊಡೆಯಿರಿ..!!   

23-11-20 07:42 pm       Mangaluru Correspondant   ಕರಾವಳಿ

ಇಂಥ ಸಂದರ್ಭದಲ್ಲಿ ಬಂದ್ ಜಪ ಮಾಡುತ್ತೀರಲ್ಲಾ.. ಯಾರೇ ಆಗಲಿ, ಬಂದ್ ಮಾಡಬೇಕು ಅಂತ ನಿಮ್ಮ ಅಂಗಡಿ ಮುಂದೆ ಬಂದರೆ ಅವರ ಮೇಲೆ ಕಲ್ಲು ಹೊಡೆದು ಓಡಿಸಿ ಎಂದು ರಿಷಿಕುಮಾರ ಸ್ವಾಮೀಜಿ ಕರೆ ನೀಡಿದ್ದಾರೆ.

ಮಂಗಳೂರು, ನವೆಂಬರ್ 23: ಮರಾಠಿ ಸಮುದಾಯಕ್ಕೆ ನಿಗಮ ಮಾಡಿದ್ದನ್ನು ವಿರೋಧಿಸಿ ಡಿಸೆಂಬರ್ 5ರಂದು ರಾಜ್ಯ ಬಂದ್ ಮಾಡಲು ಕರೆ ಕೊಟ್ಟಿರುವ ಕನ್ನಡ ಸಂಘಟನೆಗಳ ವಿರುದ್ಧ ಕಾಳಿಕಾ ಶ್ರೀ ರಿಷಿಕುಮಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ರಾಮ್ ಸೇನಾ ಸಂಘಟನೆಯ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ರಿಷಿಕುಮಾರ ಸ್ವಾಮೀಜಿ ಮಾತನಾಡಿದ್ದಾರೆ. ಮರಾಠಿ ಸಮುದಾಯದವ್ರಿಗೆ ನಿಗಮ ಕೊಟ್ಟಷ್ಟಕ್ಕೆ ಇವ್ರಿಗೇನ್ರೀ... ಪ್ರತಿ ಒಂದಕ್ಕೂ ಬಂದ್ ಬಂದ್ ಅನ್ನುತ್ತೀರಲ್ಲಾ... ಕರ್ನಾಟಕವೇನು ನಿಮ್ಮ ಅಪ್ಪನ ಮನೆಯ ಆಸ್ತಿಯಾ.. ಕೊರೊನಾದಿಂದಾಗಿ ವ್ಯಾಪಾರಿಗಳು ಕಂಗೆಟ್ಟು ಹೋಗಿ ಈಗಷ್ಟೇ ಮೇಲೆ ಬರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬಂದ್ ಜಪ ಮಾಡುತ್ತೀರಲ್ಲಾ.. ಯಾರೇ ಆಗಲಿ, ಬಂದ್ ಮಾಡಬೇಕು ಅಂತ ನಿಮ್ಮ ಅಂಗಡಿ ಮುಂದೆ ಬಂದರೆ ಅವರ ಮೇಲೆ ಕಲ್ಲು ಹೊಡೆದು ಓಡಿಸಿ ಎಂದು ರಿಷಿಕುಮಾರ ಸ್ವಾಮೀಜಿ ಕರೆ ನೀಡಿದ್ದಾರೆ.

ಇವ್ರು ಕನ್ನಡದ ಹೆಸರೇಳಿ ಕಿಡಿಗೇಡಿ ಕೆಲಸ ನಡೆಸುತ್ತಿದ್ದಾರೆ. ಇವರು ಶಾಸಕರನ್ನು, ಮುಖ್ಯಮಂತ್ರಿಗಳನ್ನು ಸಿಕ್ಕಿಸಿಕೊಂಡು ಕರ್ನಾಟಕಕ್ಕೆ ಅವಮಾನ ಮಾಡುತ್ತಿದ್ದಾರೆ. ಮರಾಠಿಗರಿಗೆ ಪ್ರಾಧಿಕಾರ ಕೊಟ್ಟರೆ ನಿಮಗೇನ್ರೀ..? ಅವರೇನು ಈ ರಾಜ್ಯದಲ್ಲಿ ತೆರಿಗೆ ಕಟ್ಟುತ್ತಿಲ್ಲವಾ, ಅವರಿಗೇನಾದ್ರೂ ಕೊಟ್ಟರೆ ನೀವ್ಯಾರ್ರೀ ಕೇಳೋದಕ್ಕೇ.. ಎಂದು ಪ್ರಶ್ನೆ ಮಾಡಿದ ಸ್ವಾಮೀಜಿ, ನೀವು 20 ಮಂದಿ ಸೇರಿದ್ರಷ್ಟೇ ಕರ್ನಾಟಕನಾ? ನೀವು ಹೇಳೋ ಮಾತನ್ನು ಆರೂವರೆ ಕೋಟಿ ಜನ ಕುಳಿತು ಕೇಳಬೇಕಾ? ಅವನ್ಯಾವನೋ ಕತ್ತೆ, ನರಿ ನಾಯಿ ತಗೊಂಡು ಬಂದು ಕೂಗಾಡ್ತಾನೆ. ರಸ್ತೆಯಲ್ಲಿ ಉರುಳಾಡುತ್ತಾರೆ ಎಂದು ಕನ್ನಡ ಪಕ್ಷದ ವಾಟಾಳ್ ನಾಗರಾಜ್ ಹೆಸರೇಳದೆ ವ್ಯಂಗ್ಯವಾಡಿದ್ದಾರೆ.

ವರುಷಕ್ಕೆ 20 ರಷ್ಟು ಹಿಂದೂ ಸಂಘಟನೆ ಕಾರ್ಯಕರ್ತರು ಸಾಯುತ್ತಿದ್ದಾರೆ. ನಿಮ್ಮ ಕನ್ನಡ ಸಂಘಟನೆ ಅಂತ ಹೆಸರೇಳಿಕೊಂಡು ತಿರುಗಾಡುತ್ತಿರುವವರಲ್ಲಿ ಯಾವನೇ ಒಬ್ಬನಾದ್ರೂ ಸತ್ತಿದ್ದಾರಾ? ಇವ್ರು ಕನ್ನಡದ ಬಾವುಟದ ಶಾಲು ಹಾಕ್ಕೊಂಡು ಕಾರಿನಲ್ಲಿ ಕುಳಿತು ಪೋಸು ಕೊಡುತ್ತಾರೆ. ಕೊಲೆ ಮಾಡ್ತೀವಿ, ಮಸಿ ಬಳಿಯುತ್ತೀವಿ ಅಂತಾ ಹೇಳುತ್ತಾರಲ್ಲ.

ಸಿಎಂ ಯಡಿಯೂರಪ್ಪನವರೇ, ಇಂತವರನ್ನ ಯಾಕೆ ರಾಜ್ಯದ ಪ್ರಾಣ ತೆಗೀಲಿಕ್ಕೆ ಇಟ್ಟುಕೊಂಡಿದ್ದೀರಾ ? ಇವರನ್ನೆಲ್ಲಾ ಸರಕಾರ ಶೂಟ್ ಮಾಡಿ ಬಿಸಾಕಲಿ.. ಯೋಗಿ ಆದಿತ್ಯನಾಥ್ ಸರಕಾರ ಇಂಥವ್ರನ್ನು ಯಾರನ್ನೂ ಇಟ್ಟುಕೊಂಡಿಲ್ಲ. ಸಿಎಂ ಬಳಿ ಮನವಿ ಮಾಡ್ತೀನಿ, ಇವರನ್ನು ಉಳಿಸಬೇಡಿ, ಕೊಂದು ಬಿಸಾಕಿ ಎಂದು ಹೇಳಿದರು.

ನೀವು ಕಲ್ಲು ಹೊಡೆಯಿರಿ, ಶೂಟ್ ಮಾಡಿ ಅಂದರೆ ಪ್ರಚೋದನೆ ಆಗಲ್ವೇ ಅನ್ನುವ ಪ್ರಶ್ನೆಗೆ, ಶಾಸ್ತ್ರ ಮತ್ತು ಶಸ್ತ್ರ ಇವೆರಡೂ ನಮ್ಮ ಸಂಸ್ಕೃತಿ, ಶಾಸ್ತ್ರ ಉಳಿಯಬೇಕಿದ್ದರೆ ಶಸ್ತ್ರ ಹಿಡಿಯಲೇಬೇಕು ಎಂದು ರಿಷಿ ಕುಮಾರ ಸ್ವಾಮೀಜಿ ಹೇಳಿದರು. ಮೈಕ್ ಹಾಕ್ಕೊಂಡು ಆಜಾನ್ ಕೂಗುವುದರ ವಿರುದ್ಧ ಕೋರ್ಟ್ ತೀರ್ಪು ನೀಡಿದೆ. ನಿಮ್ಮ ಯಾವುದೇ ಸಂಘಟನೆ ಬೀದಿಗಿಳಿದು ಆಜಾನ್ ಕೂಗುವುದನ್ನು ನಿಲ್ಲಿಸುವಂತೆ ಒತ್ತಾಯ ಮಾಡಿದೆಯಾ ಎಂದು ಕೂಡ ಇದೇ ವೇಳೆ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ. 

Video:

Sri Rishi Kumar Swami of Kali Mutt in Arsikere on Monday, November 23, stirred a fresh controversy by asking the people to pelt stones on miscreants, who forcefully shut business establishment in the name of Karnataka Bandh.