Mangalore, Rani Abbakka awards 2024; ಪದ್ಮಶ್ರೀ ಪುರಸ್ಕೃತ ವಿಕಲಚೇತನ‌ ಕ್ರೀಡಾಪಟು ಮಾಲತಿ ಹೊಳ್ಳ, ಸಾಹಿತಿ ಪ್ರಮೀಳಾ ಮಾಧವ್ ಅವರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಘೋಷಣೆ 

18-02-24 05:06 pm       Mangalore Correspondent   ಕರಾವಳಿ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಮಟ್ಟದ ವಿಕಲಚೇತನ ಕ್ರೀಡಾಪಟು ಮಾಲತಿ ಹೊಳ್ಳ ಮತ್ತು ಖ್ಯಾತ ಸಾಹಿತಿ ಪ್ರಮೀಳಾ ಮಾಧವ್ ಅವರಿಗೆ 2024 ರ ಸಾಲಿನ ಉಳ್ಳಾಲ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ತಿಳಿಸಿದ್ದಾರೆ.

ಉಳ್ಳಾಲ, ಫೆ.18:  ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಮಟ್ಟದ ವಿಕಲಚೇತನ ಕ್ರೀಡಾಪಟು ಮಾಲತಿ ಹೊಳ್ಳ ಮತ್ತು ಖ್ಯಾತ ಸಾಹಿತಿ ಪ್ರಮೀಳಾ ಮಾಧವ್ ಅವರಿಗೆ 2024 ರ ಸಾಲಿನ ಉಳ್ಳಾಲ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ತಿಳಿಸಿದ್ದಾರೆ.

ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ನೆರಳಲ್ಲಿ "ವೀರರಾಣಿ ಅಬ್ಬಕ್ಕ ಉತ್ಸವ"ವು 1997ರಲ್ಲಿ ಆರಂಭವಾಗಿದ್ದು, ಪ್ರತೀ ವರ್ಷವೂ ಉತ್ಸವದಲ್ಲಿ ಇಬ್ಬರು ಮಹಿಳಾ ಸಾಧಕರನ್ನ ಗುರುತಿಸಿ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನ ನೀಡಲಾಗುತ್ತಿದೆ ಎಂದರು.

ಪದ್ಮಶ್ರೀ ಪುರಸ್ಕೃತೆ ಮಾಲತಿ ಹೊಳ್ಳ (ಕ್ರೀಡಾ ಕ್ಷೇತ್ರ) 

ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಹೊಳ್ಳ ಅವರು 14 ತಿಂಗಳ ಮಗು ಇರುವಾಗಲೇ ಪೋಲಿಯೋ ಕಾಯಿಲೆಗೆ ತುತ್ತಾಗಿದ್ದರು. ಕುತ್ತಿಗೆಯಿಂದ ಕೆಳಗಿನ ಶರೀರವು ಸ್ವಾಧೀನವನ್ನು ಕಳೆದುಕೊಂಡಿತ್ತು. ಛಲ ಬಿಡದ ಮಾಲತಿಯವರು ಪದವಿ ಶಿಕ್ಷಣದಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿ ಜಾವೆಲಿನ್, ಶಾಟ್ ಪುಟ್, ಡಿಸ್ಕಸ್ ತ್ರೋ ,ವೀಲ್‌ಚೇರ್ ರೇಸಿಂಗ್‌ಳಲ್ಲಿ ಕಠಿಣ ಅಭ್ಯಾಸವನ್ನು ನಡೆಸಿದರು. ಅಲ್ಲದೆ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಅಶಕ್ತ ಮತ್ತು ವಿಕಲಚೇತನರಿಗಾಗಿ ಇರುವ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಾ ಬಂದರು. ಪ್ಯಾರಾ ಒಲಂಪಿಕ್ಸ್‌ ನಲ್ಲಿ 5 ಬಾರಿ, ಏಷ್ಯನ್ ಗೇಮ್ಸ್‌ನಲ್ಲಿ 5 ಬಾರಿ, ಜಾಗತಿಕ ಕ್ರೀಡೆಯಲ್ಲಿ 2 ಬಾರಿ ಹಾಗೂ ಡೆನ್ಮಾರ್ಕ್, ಆಸ್ಟ್ರೇಲಿಯಾ, ಸ್ಪೈನ್, ಚೀನಾ ಮೊದಲಾದ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಈತನಕ ಮಾಲತಿ ಹೊಳ್ಳರು 397 ಚಿನ್ನ, 27 ಬೆಳ್ಳಿ, 5 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಅವರು ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಗುಲ್ಬರ್ಗಾದ ಮಹಿಳಾ ವಿವಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಪುರಸ್ಕರಿಸಿದೆ. 

ಪ್ರಮೀಳಾ ಮಾಧವ್ (ಸಾಹಿತ್ಯ ಕ್ಷೇತ್ರ) 

ಮೂಲತಃ ಕಾಸರಗೋಡಿನವರಾದ ಪ್ರಮೀಳಾ ಮಾಧವ್ -ಹಿರಿಯ ಲೇಖಕಿ ಹಾಗೂ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು. ಅವರು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಬೆಳ್ಳಿಯ ಪಾರಿತೋಷಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 'ಕುಮಾರಸಂಭವ ಹಾಗೂ ಗಿರಿಜಾ ಕಲ್ಯಾಣ – ಒಂದು ತೌಲನಿಕ ಅಧ್ಯಯನ' ಎಂಬ ಸಂಶೋಧನೆಗೆ ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. 

ಉತ್ಸವ ಸಮಿತಿಯ ಪದಾಧಿಕಾರಿಗಳಾದ ಜಯರಾಮ ಶೆಟ್ಟಿ, ಧನಲಕ್ಷ್ಮಿ ಗಟ್ಟಿ, ಸದಾನಂದ ಬಂಗೇರ, ಆನಂದ ಅಸೈಗೋಳಿ, ದೇವಕಿ ಉಳ್ಳಾಲ್, ಕೆ.ಎಮ್.ಕೆ ಮಂಜನಾಡಿ, ಯು.ಪಿ ಆಲಿಯಬ್ಬ, ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Mangalore sports player Malathi holla, Pramila nominated for rani Abbakka  awards 2024.