Vande Bharat Express Mangalore: ತಿರುವನಂತಪುರ- ಕಾಸರಗೋಡು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಅಂತೂ ಮಂಗಳೂರಿಗೆ ವಿಸ್ತರಣೆ ; ಬೆಳಗ್ಗೆ ಕುಳಿತರೆ ಮಧ್ಯಾಹ್ನ ಕೇರಳ ರಾಜಧಾನಿಗೆ 

21-02-24 07:48 pm       Mangalore Correspondent   ಕರಾವಳಿ

ಕೇರಳದ ತಿರುವನಂತರಪುರ- ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿಯ ಮೇರೆಗೆ ಮಂಗಳೂರಿಗೆ ವಿಸ್ತರಣೆ ಮಾಡಲಾಗಿದೆ. 

ಮಂಗಳೂರು, ಫೆ.21: ಕೇರಳದ ತಿರುವನಂತರಪುರ- ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿಯ ಮೇರೆಗೆ ಮಂಗಳೂರಿಗೆ ವಿಸ್ತರಣೆ ಮಾಡಲಾಗಿದೆ. 

ಬುಧವಾರ ರೈಲ್ವೇ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದೆ‌. ಇದರ ಪ್ರಕಾರ ವಂದೇ ಭಾರತ್ ರೈಲು ನಂ. 20632/20631 ಇನ್ನು ಮುಂದೆ ತಿರುವನಂತಪುರ- ಮಂಗಳೂರು  ನಡುವೆ ಸಂಚರಿಸಲಿದೆ. ಹೊಸ ರೈಲ್ವೇ ವೇಳಾಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06.15ಕ್ಕೆ ಹೊರಟು ಅಪರಾಹ್ನ 3.05 ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05 ಕ್ಕೆ ಬಿಟ್ಟು ಮಂಗಳೂರನ್ನು ರಾತ್ರಿ 12.40ಕ್ಕೆ ತಲುಪಲಿದೆ. 

ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ. ಸಂಸದರ ಮನವಿ ಪುರಸ್ಕರಿಸಿ ವಂದೇ ಭಾರತ್ ರೈಲನ್ನು ಮಂಗಳೂರು ವರೆಗೆ ವಿಸ್ತರಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ. 

ಮಂಗಳೂರು ರೈಲು ನಿಲ್ದಾಣ ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ಸೇರಿದ್ದರೂ, ವಂದೇ ಭಾರತ್ ರೈಲನ್ನು ಕೇರಳಕ್ಕೆ ಮಾತ್ರ ಸೀಮಿತಗೊಳಿಸುವ ಲಾಬಿಯಿಂದಾಗಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ಆರಂಭಿಸಲಾಗಿತ್ತು. ಈ ರೀತಿಯ ನಿರ್ಧಾರದಿಂದ ರೈಲ್ವೇಗೆ ಲಾಭ ಇರಲಿಲ್ಲ. ಕೇರಳದ ಹೆಚ್ಚಿನ ಪ್ರಯಾಣಿಕರು ಮಂಗಳೂರಿಗೆ ಬರುತ್ತಿದ್ದರೇ ವಿನಾ ಕಾಸರಗೋಡು ವರೆಗೆ ಬರುವುದು ಕಡಿಮೆಯಿತ್ತು. ಕೇರಳದ ಸಂಸದರ ಲಾಬಿಯಿಂದಾಗಿ ಅಧಿಕಾರಿಗಳು ಮಂಗಳೂರು ನಿಲ್ದಾಣ ಬದಿಗಿಟ್ಟು ಕೇರಳಕ್ಕೆ ಆರು ತಿಂಗಳ ಮೊದಲೇ ವಂದೇ ಭಾರತ್ ರೈಲು ಓಡಾಟ ಆರಂಭಿಸಿದ್ದರು. ಇದೀಗ ಅದೇ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡಿದ್ದು ಪ್ರಯಾಣಿಕರಿಗೆ ಅನುಕೂಲ ಮಾಡಿದ್ದಾರೆ. 

ಇದೇ ವೇಳೆ, ಮಂಗಳೂರು - ಗೋವಾ ವಂದೇ ಭಾರತ್ ರೈಲನ್ನು ಕೋಜಿಕ್ಕೋಡ್ ವಿಸ್ತರಿಸಲು ಕೇರಳದ ಸಂಸದರು ಲಾಬಿ ಮಾಡಿದ್ದಾರೆ. ಈಗ ನಷ್ಟದಲ್ಲಿ ಓಡುತ್ತಿರುವ ಈ ರೈಲು ಮುಂಬೈಗೆ ವಿಸ್ತರಣೆ ಆಗಬೇಕೆಂದು ಮಂಗಳೂರು, ಉಡುಪಿ ಜನರ ಬಯಕೆ. ಈ ಬಗ್ಗೆ ಮಂಗಳೂರು ಸಂಸದರೂ ರೈಲ್ವೇ ಸಚಿವರಿಗೆ ಮನವಿ ಮಾಡಿದ್ದಾರೆ. ಯಾವ ಲಾಬಿ ವರ್ಕೌಟ್ ಆಗುತ್ತೆಂದು ನೋಡಬೇಕಷ್ಟೆ.

Vande Bharat Express Thiruvananthapuram kasaragod finally extended till Mangalore.