Satyajith Suratkal, MP eleecitons, Mangalore: ಲೋಕಸಭೆಗೆ ಬಂಡಾಯದ ಸುಳಿವಿತ್ತ ಸತ್ಯಜಿತ್ ಸುರತ್ಕಲ್ ; ಯಾವುದೋ ಪಕ್ಷದಲ್ಲಿದ್ದವರಿಗೆ ಶಾಸಕ ಸ್ಥಾನ ನೀಡಿದ್ದಾರೆ, 15 ವರ್ಷಗಳ ಬಳಿಕ ಮತ್ತೆ ಅವಕಾಶ ಕೇಳುತ್ತಿದ್ದೇನೆ, ಅನ್ಯಾಯ ಸಹಿಸಿಕೊಂಡಿರಲು ಸಾಧ್ಯವಿಲ್ಲ !

25-02-24 09:22 pm       Mangalore Correspondent   ಕರಾವಳಿ

ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿ ಹಿಂದು ಜಾಗರಣ ವೇದಿಕೆಯ ಮಾಜಿ ಮುಖಂಡ ಸತ್ಯಜಿತ್ ಸುರತ್ಕಲ್ ಪರವಾಗಿ ಬಂಟ್ವಾಳದ ತುಂಬೆಯ ಬಂಟರ ಭವನದಲ್ಲಿ ಸಮಾವೇಶ ನಡೆಸಲಾಯಿತು. ಸ

ಮಂಗಳೂರು, ಫೆ.25: ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿ ಹಿಂದು ಜಾಗರಣ ವೇದಿಕೆಯ ಮಾಜಿ ಮುಖಂಡ ಸತ್ಯಜಿತ್ ಸುರತ್ಕಲ್ ಪರವಾಗಿ ಬಂಟ್ವಾಳದ ತುಂಬೆಯ ಬಂಟರ ಭವನದಲ್ಲಿ ಸಮಾವೇಶ ನಡೆಸಲಾಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆಯಿಂದ ಬಂದಿದ್ದ ಎರಡು ಸಾವಿರದಷ್ಟು ಕಾರ್ಯಕರ್ತರು ಸೇರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದವರು ಸತ್ಯಜಿತ್ ಗುಣಗಾನ ಮಾಡಿದ್ದಲ್ಲದೆ, ಲೋಕಸಭೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಸಭೆಯ ಕೊನೆಯಲ್ಲಿ ಮಾತನಾಡಿದ ಸತ್ಯಜಿತ್ ಸುರತ್ಕಲ್, 15 ವರ್ಷಗಳ ಹಿಂದೆಯೇ ಸಂಸತ್ತಿಗೆ ಹೋಗಬೇಕಾಗಿದ್ದ ವ್ಯಕ್ತಿ ನಾನು. ಆದರೆ ಅವಕಾಶ ತಪ್ಪಿ ಹೋಯ್ತು. 15 ವರ್ಷಗಳ ಬಳಿಕ ಲೋಕಸಭೆ ಟಿಕೆಟ್ ಕೊಡುವಂತೆ ಕೇಳುತ್ತಿದ್ದೇನೆ. 37 ವರ್ಷ ಸುದೀರ್ಘ ಕಾಲದಿಂದ ಹಿಂದು ಸಮಾಜಕ್ಕಾಗಿ ಜೀವನ ಅರ್ಪಿಸಿದ್ದೇನೆ. ಹಿಂದುತ್ವಕ್ಕಾಗಿ ದುಡಿದಿದ್ದಕ್ಕಾಗಿ ನನಗೆ ಅವಕಾಶ ನೀಡಬೇಕು. ಹಾಗಂತ, ಅನ್ಯಾಯ ಸಹಿಸಿಕೊಂಡು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಸದ್ಯದಲ್ಲೇ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಗೆ ಬಂಡಾಯದ ಸುಳಿವು ನೀಡಿದ್ದಾರೆ.

ಎಂಟು ವರ್ಷದ ಹಿಂದೆ ಹೋಮ್ ಸ್ಟೇ ಘಟನೆ ನಡೆದಾಗ, ನಮ್ಮವರೇ ನಮ್ಮ ವಿರುದ್ಧ ನಿಂತರು. ಅದರಿಂದಾಗಿ ತಿಂಗಳ ಕಾಲ ಜೈಲಿನಲ್ಲಿ ಕೂರುವಂತಾಯಿತು. ರಾಜಕೀಯ ಅಧಿಕಾರದಲ್ಲಿದ್ದವರು ನನ್ನ ಪರವಾಗಿ ನಿಲ್ಲದೇ ಇದ್ದುದರಿಂದ ಕಾರ್ಯಕರ್ತರು, ನೀವು ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸಿದರು. ಹಾಗಾಗಿ, ಸಂಘದ ಹಿರಿಯರಲ್ಲಿ ರಾಜಕೀಯದ ಅವಕಾಶ ಕೇಳಿದಾಗ ಪಕ್ಷದಲ್ಲಿ ಕೆಲಸ ಮಾಡುವಂತೆ ಹೇಳಿದರು. ಆದರೆ ಯಾವುದೋ ಪಕ್ಷದಲ್ಲಿದ್ದ ವ್ಯಕ್ತಿಗೆ ಶಾಸಕ ಸ್ಥಾನ ನೀಡಿದ್ದು ನೋವು ಕೊಟ್ಟಿತ್ತು ಎಂದು 2018ರ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ತಪ್ಪಿದ ವಿಚಾರವನ್ನು ಹೇಳಿಕೊಂಡರು.

ಹಿಂದುತ್ವಕ್ಕಾಗಿ ದುಡಿದಿದ್ದೇನೆ, ಶಾಸಕ ಸ್ಥಾನದ ಅವಕಾಶ ಕೇಳಿದಾಗ, ಹಿಂದುತ್ವ ಒಂದೇ ಮಾನದಂಡ ಅಲ್ಲ ಎಂದು ಹೇಳಿ ನಿರಾಕರಿಸಿದರು. ಆನಂತರ, ಯಡಿಯೂರಪ್ಪ ಅವರೇ ಸೂಕ್ತ ಸ್ಥಾನ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಯಡಿಯೂರಪ್ಪ ಕೂಡ ಮಾತು ಮರೆತರು. ನಂತರದ ದಿನಗಳಲ್ಲಿ ಸತ್ಯನನ್ನು ಮುಗಿಸಿದೆವು ಎಂದು ಕೆಲವು ನಾಯಕರು ಹೇಳಿಕೊಂಡು ತಿರುಗಿದರು. ಹಿಂದುತ್ವ ಬಲವಾಗಿದೆ, ಮೋದಿ ಅಲೆ ಇದೆಯೆಂದು ಹೇಳಿ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುವುದಿಲ್ಲ. 16 ವರ್ಷದಿಂದ ಇದ್ದ ಗನ್ ಮ್ಯಾನನ್ನು ಹಿಂದುತ್ವ ಹೇಳಿಕೊಂಡು ಬಂದ ಬಿಜೆಪಿ ಸರ್ಕಾರವೇ ಹಿಂತೆಗೆಯಿತು. ವಿಧಾನಸಭೆ ಚುನಾವಣೆಯ ಎರಡು ದಿನದ ಹಿಂದೆ ಬಂದವರಿಗೆ ಮಾರಾಟವಾಗುವ ವ್ಯಕ್ತಿಯಲ್ಲ. ಅವ್ಯವಸ್ಥೆ ಸರಿ ಮಾಡುವುದಕ್ಕಾಗಿ ನನ್ನ ಹೋರಾಟ ಇದ್ದೇ ಇದೆ ಎಂದು ಸತ್ಯಜಿತ್ ಹೇಳಿದರು.

ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ ಭಟ್ ಜೊತೆಗೆ ಮಾತುಕತೆ ಆದ ಫೋಟೊ ವೈರಲ್ ಆಗಿತ್ತು. ನಂತರ, ನಾನು ಅನಿವಾರ್ಯ ಅಲ್ಲ ಎಂದು ಹೇಳಿದವರು ನನ್ನ ಬೇಡಿಕೆ ಏನು ಅಂತ ಕೇಳಿದರು. ಲೋಕಸಭಾ ಚುನಾವಣಾ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಪಕ್ಷದ ಹಿರಿಯರಿಗೆ ತಿಳಿಸುವುದಾಗಿ ಹೇಳಿದ್ದರು. ನಂತರ, ಬೆಂಗಳೂರಿನಿಂದ ಕರೆ ಮಾಡಿದವರು ರಾಜ್ಯ ಕಾರ್ಯಕಾರಿಣಿ ಅಂತ ಹೇಳಿದರು. ಕಾರ್ಯಕಾರಿಣಿ ಸ್ಥಾನಕ್ಕೇನು ಬೆಲೆಯಿದೆ, ವರ್ಷದಲ್ಲಿ ನಾಲ್ಕು ಬಾರಿ ಮೀಟಿಂಗಲ್ಲಿ ಪಾಲ್ಗೊಂಡು ಚಹಾ ಕುಡಿದು ಬರಬೇಕು ಅಷ್ಟೇ. ನಮ್ಮ ಮಾತಿಗೂ ಅಲ್ಲಿ ಬೆಲೆ ಇರಲ್ಲ. ಹಾಗಾಗಿ, ಆ ಸ್ಥಾನ ಬೇಡ ಎಂದು ಹೇಳಿದ್ದೆ. ನಾವೆಲ್ಲ ಸಂಘಟನೆ ಕೆಲಸಕ್ಕೆ ಗುರುವೆಂದು ಭಾವಿಸುವ ಕಲ್ಲಡ್ಕ ಭಟ್ಟರಲ್ಲಿ ನನ್ನ ಸುದೀರ್ಘ ಕಾಲದ ಸಂಘಟನಾ ಕೆಲಸ, ಹಿಂದುತ್ವಕ್ಕಾಗಿ ಹೋರಾಡಿದ್ದಕ್ಕಾಗಿ ಸೂಕ್ತ ಸ್ಥಾನ ಕೊಡಿಯೆಂದು ಕೇಳಿದ್ದೇನೆ. ಲೋಕಸಭೆ ಟಿಕೆಟ್ ಬೇಡಿಕೆ ಇರಿಸಿದ್ದೇನೆ.

ಈಗ ಕಾರ್ಯಕರ್ತರ ಒತ್ತಾಯದಂತೆ, ಸಮಾವೇಶ ಮಾಡಿದ್ದೇವೆ. ಕಾರ್ಯಕರ್ತರ ಮೂಲಕ ಲೋಕಸಭೆ ಟಿಕೆಟ್ ಕೇಳುತ್ತಿದ್ದೇವೆ. ಎರಡು ಅವಧಿಗೆ ಸಂಸದ ಸ್ಥಾನದ ಅವಕಾಶ ಕೊಟ್ಟರೆ ಸಾಕು, ಸಂಸದ ಸ್ಥಾನಕ್ಕೆ ಬೆಲೆ ತರುತ್ತೇನೆ. ಒಳ ಒಪ್ಪಂದದ ರಾಜಕೀಯ ಮಾಡುವುದಿಲ್ಲ ಎಂದು ಹೇಳುತ್ತೇನೆ. ಈ ಬಾರಿ ಟಿಕೆಟ್ ಸಿಕ್ಕೇ ಸಿಗುತ್ತೆ ಎನ್ನುವ ವಿಶ್ವಾಸ ಇದೆ. ಟಿಕೆಟ್ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ವೇದಿಕೆಯಲ್ಲಿ ಕರಾವಳಿ ಭಾಗದ ಪ್ರಮುಖ ನಾಯಕರು ಯಾರೂ ಇರಲಿಲ್ಲ. ಕೊಡಗು, ಮೈಸೂರು, ದಾವಣಗೆರೆ ಭಾಗದವರು ವೇದಿಕೆಯಲ್ಲಿದ್ದರು. ಪುತ್ತೂರು, ಬಂಟ್ವಾಳ, ಮೂಡುಬಿದ್ರೆ, ಮಂಗಳೂರು ಭಾಗದಿಂದ ಕೇಸರಿ ಕಾರ್ಯಕರ್ತರು ಸೇರಿದ್ದರು.

Satyajith Suratkal likely to stand as independent candidate for the MP eleecitons from Mangalore.