Cheating by GAIL company in Mangalore, MSE gate: ಗೇಲ್ ಕಂಪನಿಯಿಂದ ಮೋಸ, ಉದ್ಯೋಗ ನೀಡದೆ ವಂಚನೆ, ಜನಪ್ರತಿನಿಧಿಗಳ ಮೌನ ; ಎಂಎಸ್ಇಝೆಡ್ ಗೇಟ್ ಬಳಿ ರಸ್ತೆ ತಡೆದು ಪ್ರತಿಭಟನೆ 

26-02-24 09:57 pm       Mangalore Correspondent   ಕರಾವಳಿ

ಎಂಎಸ್ಇಝೆಡ್ (ಮಂಗಳೂರು ವಿಶೇಷ ಆರ್ಥಿಕ ವಲಯ) ಸ್ವಾಮ್ಯದ ಗೇಲ್ ಇಂಡಿಯಾ ಕಂಪೆನಿ ಉದ್ಯೋಗ ನೀಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿ ಜೆಬಿಎಫ್ ಕಂಪನಿಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ಉದ್ಯೋಗಿಗಳು ಎಂಎಸ್ಇಝೆಡ್ ಗೇಟ್ ಬಳಿ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಮಂಗಳೂರು, ಫೆ.26: ಎಂಎಸ್ಇಝೆಡ್ (ಮಂಗಳೂರು ವಿಶೇಷ ಆರ್ಥಿಕ ವಲಯ) ಸ್ವಾಮ್ಯದ ಗೇಲ್ ಇಂಡಿಯಾ ಕಂಪೆನಿ ಉದ್ಯೋಗ ನೀಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿ ಜೆಬಿಎಫ್ ಕಂಪನಿಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ಉದ್ಯೋಗಿಗಳು ಎಂಎಸ್ಇಝೆಡ್ ಗೇಟ್ ಬಳಿ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಎಂಎಸ್ಇಝೆಡ್ ಸಾಮ್ಯದ ಜೆಬಿಎಫ್ ಕಂಪೆನಿಯಲ್ಲಿ ಕಳೆದ 8 ವರ್ಷದಿಂದ ಖಾಯಂ ಉದ್ಯೋಗಿಗಳಾಗಿದ್ದೆವು. 2020ರಲ್ಲಿ ಆರ್ಥಿಕ ತೊಂದರೆಯಿಂದ ಈ ಕಂಪೆನಿ ಮುಚ್ಚಲ್ಪಟ್ಟು, ತದನಂತರ 2023ರಲ್ಲಿ ಗೇಲ್ ಇಂಡಿಯಾದವರು ಆ ಕಂಪನಿಯನ್ನು ಖರೀದಿಸಿದ್ದಾರೆ. ಜೆಬಿಎಫ್ ನಲ್ಲಿ ಖಾಯಂ ಉದ್ಯೋಗಿಗಳಾಗಿದ್ದ ನಮಗೆ ಗೇಲ್ ಇಂಡಿಯಾ ಕಂಪೆನಿ ಉದ್ಯೋಗ ನೀಡಲು ಹಿಂದೇಟು ಹಾಕುತ್ತಿದೆ. ಹಲವು ಬಾರಿ ಕಂಪೆನಿಯವರನ್ನು ಸಂಪರ್ಕಿಸಿದಾಗಲು ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರರು ಆರೋಪಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ 75 ಮಂದಿ ಸಂತ್ರಸ್ತ ಉದ್ಯೋಗಿಗಳು ಎಂಎಸ್ಇಝೆಡ್ ಮುಖ್ಯ ದ್ವಾರದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ, ಶಾಹುಲ್ ಹಮೀದ್ ಬಜ್ಪೆ, ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಲಾರೆನ್ಸ್, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಪೂಜಾರಿ, ಬಾಳ ಪಂಚಾಯತ್ ಅಧ್ಯಕ್ಷ ಶಂಕರ್ ಜೋಗಿ, ಸದಸ್ಯೆ ಸೌಮ್ಯಾ, ವಿಜಯ ಕಾನ, ರೈತ ಮೋರ್ಚಾ ಅಧ್ಯಕ್ಷ ರಾಜೇಶ್, ಮಾಜಿ ಸದಸ್ಯ ಆದಂ, ಸಂತೋಷ್ ಕೊರೆಯ, ಶಕ್ತಿ ಕೇಂದ್ರದ ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

Cheating by GAIL company in Mangalore, Protest held blocking the road near MSE gate.