Kota Srinivas Poojary Mangalore, Cafe Blast: ಭಯೋತ್ಪಾದಕರಿಗೆ ತಮ್ಮ ಸರ್ಕಾರ ಇದೆಯೆಂಬ ವಿಶ್ವಾಸ ಬಂದಿದೆ, ರಾಜ್ಯದಲ್ಲಿ ಅರಾಜಕ ಸ್ಥಿತಿ ಎದುರಾಗಿದೆ ; ಕೋಟ ಶ್ರೀನಿವಾಸ ಪೂಜಾರಿ

04-03-24 06:25 pm       Mangalore Correspondent   ಕರಾವಳಿ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭಯೋತ್ಪಾದಕರಿಗೆ, ದೇಶದ್ರೋಹಿಗಳಿಗೆ ತಮ್ಮ ಪರ ಸರ್ಕಾರ ಇದೆಯೆಂಬ ವಿಶ್ವಾಸ ಬಂದಿದೆ. ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ಎಫ್ಎಸ್ಎಲ್ ವರದಿ ಕೊಟ್ಟರೂ ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ.

ಮಂಗಳೂರು, ಮಾ.4: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭಯೋತ್ಪಾದಕರಿಗೆ, ದೇಶದ್ರೋಹಿಗಳಿಗೆ ತಮ್ಮ ಪರ ಸರ್ಕಾರ ಇದೆಯೆಂಬ ವಿಶ್ವಾಸ ಬಂದಿದೆ. ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ಎಫ್ಎಸ್ಎಲ್ ವರದಿ ಕೊಟ್ಟರೂ ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬಾಂಬ್ ಸ್ಫೋಟ ಕೃತ್ಯದ ಆರೋಪಿ ರಾಜಾರೋಷ ಅಡ್ಡಾಡುವಂತಹ ಸ್ಥಿತಿ ಬಂದಿದೆ. ದೇಶದ ಹಿತ ಬದಿಗೊತ್ತಿ ದೇಶದ್ರೋಹಿಗಳ ಬಗ್ಗೆ ಮೃದು ಧೋರಣೆ ತಾಳಿದರೆ ಘೋರ ಪರಿಣಾಮ ಎದುರಾಗಬಹುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವಿಧಾನಸೌಧ ಅಂದರೆ ಇಡೀ ರಾಜ್ಯದ ಜನರ ಪಾಲಿಗೆ ಆತ್ಮ ಇದ್ದಂತೆ. ಅಂತಹ ಜಾಗದಲ್ಲೇ ಪಾಕ್ ಪರ ಘೋಷಣೆ ಕೂಗಿದರೂ ಅದು ನಡೆದೇ ಇಲ್ಲವೆಂದು ಸಮರ್ಥನೆ ಮಾಡುವುದನ್ನು ರಾಜ್ಯ ಸರಕಾರ ದೇಶ ವಿರೋಧಿ ಕೃತ್ಯದ ಪರ ಇರುವಂತೆ ಕಾಣುತ್ತಿದೆ. ಸಿದ್ದರಾಮಯ್ಯ ನಾವು ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂದು ಹೇಳಿರುವುದರಲ್ಲಿ ಹೊಟೇಲ್ ಒಳಗಡೆ ಬಾಂಬ್ ಇಡುವುದು, ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗುವುದು ಬರುತ್ತಾ ಎಂದು ಕೇಳಬೇಕಾಗಿದೆ ಎಂದು ಹೇಳಿದರು.

ಮೊನ್ನೆ ಸರ್ಕಾರದ ದುಡ್ಡಿನಲ್ಲಿ ಸಂವಿಧಾನ ಉಳಿಸಿ ಕಾರ್ಯಕ್ರಮ ಏರ್ಪಡಿಸಿ, ಎಥಿನ್ ಕೌಲ್ ಎಂಬ ದೇಶ ವಿರೋಧಿ ಭಾವನೆ ಬಿತ್ತುವ ಲೇಖಕಿಯನ್ನು ಅತಿಥಿಯಾಗಿ ಕರೆದಿದ್ದು ಇವರ ನಡೆಯನ್ನು ಸೂಚಿಸುತ್ತದೆ. ಸಂವಿಧಾನ ರಕ್ಷಣೆ, ಅಂಬೇಡ್ಕರ್ ಹೆಸರಿನಲ್ಲಿ ಇವರು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಕಾಶ್ಮೀರದಲ್ಲಿ 370 ಕಾಯ್ದೆ ರದ್ದು ಮಾಡಿ ಅಲ್ಲಿನ ಜನರಿಗೆ ಮೊದಲ ಬಾರಿಗೆ ಮೀಸಲಾತಿ ಭಾಗ್ಯ ಕಲ್ಪಿಸಿದ್ದು ಪ್ರಧಾನಿ ಮೋದಿ. ಕಾಂಗ್ರೆಸಿನವರು 370 ಕಾಯ್ದೆ ರದ್ದು ಮಾಡಿದ್ದನ್ನೇ ವಿರೋಧಿಸಿದ್ದಾರೆ. ಕಾಶ್ಮೀರದ ಅಭಿವೃದ್ಧಿಗೆ ಮೋದಿ 32 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಅಲ್ಲೀಗ ಭಯೋತ್ಪಾದನೆ ಮಟ್ಟ ಹಾಕಿದ್ದಲ್ಲದೆ, ಶಾಂತಿ ಸ್ಥಾಪನೆ ಮಾಡುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡಲು ಸಾಧ್ಯವಾಗದಿದ್ದರೆ, ಅರಾಜಕ ಸ್ಥಿತಿ ತಂದೊಡ್ಡುವುದಾದರೆ ಸಿದ್ದರಾಮಯ್ಯ ಕೂಡಲೇ ರಾಜಿನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸಿದರು.

ಎಫ್ಎಸ್ಎಲ್ ವರದಿ ಖಾಸಗಿ ಸಂಸ್ಥೆಯದ್ದಲ್ಲವೇ, ಸರಕಾರದ್ದು ಬಂದಿಲ್ಲ ಎನ್ನುತ್ತಿದ್ದಾರಲ್ಲಾ ಎಂದು ಕೇಳಿದ ಪ್ರಶ್ನೆಗೆ, ಖಾಸಗಿ ಸಂಸ್ಥೆಯ ವರದಿಗಳನ್ನೂ ನಾವು ಕೆಲವು ಬಾರಿ ಒಪ್ಪಿಕೊಳ್ಳುವ ಸ್ಥಿತಿ ಬಂದಿದೆ. ಇದನ್ನು ನಂಬೋದಿಲ್ಲ ಅಂದರೆ, ಸರಕಾರದ ವರದಿ ತರಿಸಿಕೊಡಲಿ. ಯಾಕೆ ವಿಳಂಬ ಮಾಡುತ್ತಿದ್ದಾರೆ. ಒಂದು ವಾರ ಕಳೆದರೂ ಎಫ್ಎಸ್ಎಲ್ ರಿಪೋರ್ಟ್ ಬಂದಿಲ್ಲ ಎಂದರೆ ಅದನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನರಿಲ್ಲ ಎಂದರು.

ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸಿಗೆ ಹೋಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಹೆಗ್ಡೆಯವರು ಗೌರವಾನ್ವಿತ ವ್ಯಕ್ತಿ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷತೆ ಎನ್ನುವ ಹುದ್ದೆ ಪಕ್ಷಾತೀತ. ಮೊನ್ನೆಯ ವರೆಗೂ ಅದರ ಅಧ್ಯಕ್ಷರಾಗಿದ್ದರು. ಈಗ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ಸೇರುವುದೂ ಗೊತ್ತಿಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುಳಾ ರಾವ್, ವಸಂತ ಪೂಜಾರಿ, ಕದ್ರಿ ಮನೋಹರ್ ಇದ್ದರು.

Terrorist have got more confidence over Congress government to create terror activities in karnataka says Kota Srinivas Poojari in Mangalore.