Mp Anantkumar Hegde, BJP: ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಧಮ್ ಇದ್ದರೆ ಮುಂದೆ ಬನ್ನಿ.. ಬಿಜೆಪಿ ಕಾರ್ಯಕರ್ತರನ್ನೇ ಅಣಕಿಸಿದ ಸಂಸದ ಅನಂತ ಕುಮಾರ್ ಹೆಗಡೆ 

05-03-24 05:50 pm       Mangalore Correspondent   ಕರಾವಳಿ

ಚುನಾವಣೆಗೆ ಸ್ಪರ್ಧಿಸಲು ಯಾರಾದ್ರೂ ಯುವಕರು ತುಂಬ ಸಶಕ್ತರಾಗಿದ್ದರೆ ಬನ್ನಿ.. ಇಂದೇ ಕುರ್ಚಿ ಮುಂದೆ ಇಟ್ಟು ಹೊಗ್ತೇನಿ‌.  ಧಮ್ ಇದ್ರೆ ಮುಂದೆ ಬನ್ನಿ ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿದ್ದಾರೆ. 

ಕಾರವಾರ, ಮಾ.5: ಚುನಾವಣೆಗೆ ಸ್ಪರ್ಧಿಸಲು ಯಾರಾದ್ರೂ ಯುವಕರು ತುಂಬ ಸಶಕ್ತರಾಗಿದ್ದರೆ ಬನ್ನಿ.. ಇಂದೇ ಕುರ್ಚಿ ಮುಂದೆ ಇಟ್ಟು ಹೊಗ್ತೇನಿ‌.  ಧಮ್ ಇದ್ರೆ ಮುಂದೆ ಬನ್ನಿ ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿದ್ದಾರೆ. 

ಭಟ್ಕಳದ ಮಾವಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಟೇಬಲ್ ಮೇಲೆ ಕುರ್ಚಿ ಇಟ್ಟು  ಮುಕ್ತ ಪಂಥಾಹ್ವಾನ ಕೊಟ್ಟು ಕಾರ್ಯಕರ್ತರನ್ನೇ ಸಂಸದ ಅನಂತಕುಮಾರ ಹೆಗಡೆ ಅಣಕಿಸಿದ್ದಾರೆ. ಅನಿವಾರ್ಯವಾಗಿ ನಾನು ಈ ಬಾರಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬೇಕಿದೆ. ನಂಗೆ ರಾಜಕೀಯ ಬೇಡ, ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತಾ ನೇರವಾಗಿ ಹೇಳಿದ್ದೆ. ಆದ್ರೂ ಕೆಲವರು ನನ್ನ ಬಳಿ ಬಂದು ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ರು. ಹೇಗೋ ಯು ಟರ್ನ್ ಮಾಡ್ಕೊಂಡು ಮತ್ತೆ ರಾಜಕೀಯದಲ್ಲಿ ಮುಂದುವರೆಯುತ್ತಿದ್ದೇನೆ ಎಂದರು.‌

ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯುವುದಿಲ್ಲ. ರಾಜಕಾರಣದಲ್ಲಿ ಮುಂದುವರೆಯುವ ಅನಿವಾರ್ಯತೆಯೂ ನಮಗಿಲ್ಲ. ರಾಜಕಾರಣ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಹಾಗಾಗಿದ್ರೆ ಎಲ್ರೂ ರಾಜಕಾರಣ ಮಾಡುತ್ತಿದ್ರು. ನಾನು ಚಾಲೆಂಜ್ ಮಾಡುತ್ತೇನೆ, ಯಾರಾದ್ರೂ ಉತ್ತರ ಕುಮಾರರು ಸ್ಪರ್ಧೆಗೆ ರೆಡಿ ಇದ್ರೆ ಮುಂದೆ ಬನ್ನಿ. ಈ ಕ್ಷೇತ್ರದ ಅರಿವೇ ಇಲ್ಲದವರು ಪಾರ್ಲಿಮೆಂಟ್ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎಷ್ಟೋ ಜನರಿಗೆ ಕಿತ್ತೂರು, ಖಾನಾಪೂರ ಜಿಲ್ಲೆಯ ನಕ್ಷೆಯಲ್ಲಿ ಎಲ್ಲಿ ಬರುತ್ತೆ ಅನ್ನೋದೆ ಗೊತ್ತಿಲ್ಲ. ಅಂಥವರು ಸಂಸದ ಸ್ಥಾನದ ಬಗ್ಗೆ ಮಾತಾಡುತ್ತಾರೆ ಎಂದು ಪರೋಕ್ಷವಾಗಿ ಸಂಸದ ಸ್ಥಾನಕ್ಕೆ ಆಕಾಂಕ್ಷಿ ಎನ್ನುತ್ತಿರುವವರಿಗೆ ಟಾಂಗ್ ನೀಡಿದ್ದಾರೆ.

Mp Anantkumar Hegde slams BJP members, challenges of gut to stand against him.