Mangalore news, smart City project: ಹಂಪನಕಟ್ಟೆ ಬಹುಮಹಡಿ ಪಾರ್ಕಿಂಗ್ ಯೋಜನೆ ; ಸ್ಮಾರ್ಟ್ ಸಿಟಿ ಕಾಮಗಾರಿಗೆ ನಿರಂತರ ಕಂಟಕ, ಗುಳಿಗನ ದೃಷ್ಟಿಗೆ ಕೆಲಸಗಾರರು ಕಂಗಾಲು, ಗಂಡಾಂತರದ ಸುಳಿವಿತ್ತಿದ್ಯಂತೆ ದೈವ !

18-06-24 11:02 pm       Mangalore Correspondent   ಕರಾವಳಿ

ನಗರದ ಹಂಪನಕಟ್ಟೆಯಲ್ಲಿ ಐದು ಅಂತಸ್ತಿನ ಕಾರು ಪಾರ್ಕಿಂಗ್ ನಿರ್ಮಾಣ ಕಾಮಗಾರಿಯನ್ನು ಮೂರೂವರೆ ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿದ್ದರೂ, ಅದು ಕುಂಟುತ್ತಾ ಸಾಗಿದೆ. ಒಂದಿಲ್ಲೊಂದು ಅಡಚಣೆ, ಕಾಮಗಾರಿ ಸ್ಥಳದಲ್ಲಿ ಪದೇ ಪದೇ ಕುಸಿತ, ಡ್ರಿಲ್ಲಿಂಗ್ ಸಾಧ್ಯವಾಗದೇ ಇರುವುದರಿಂದ ಇನ್ನೂ ತಳಪಾಯದ ಕಾಮಗಾರಿಯೇ ನಡೆದಿಲ್ಲ.

ಮಂಗಳೂರು, ಜೂನ್ 18: ನಗರದ ಹಂಪನಕಟ್ಟೆಯಲ್ಲಿ ಐದು ಅಂತಸ್ತಿನ ಕಾರು ಪಾರ್ಕಿಂಗ್ ನಿರ್ಮಾಣ ಕಾಮಗಾರಿಯನ್ನು ಮೂರೂವರೆ ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿದ್ದರೂ, ಅದು ಕುಂಟುತ್ತಾ ಸಾಗಿದೆ. ಒಂದಿಲ್ಲೊಂದು ಅಡಚಣೆ, ಕಾಮಗಾರಿ ಸ್ಥಳದಲ್ಲಿ ಪದೇ ಪದೇ ಕುಸಿತ, ಡ್ರಿಲ್ಲಿಂಗ್ ಸಾಧ್ಯವಾಗದೇ ಇರುವುದರಿಂದ ಇನ್ನೂ ತಳಪಾಯದ ಕಾಮಗಾರಿಯೇ ನಡೆದಿಲ್ಲ. ಈ ನಡುವೆ, ಗುತ್ತಿಗೆ ವಹಿಸಿಕೊಂಡ ವ್ಯಕ್ತಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, ಇದಕ್ಕೆಲ್ಲ ಸ್ಥಳದ ಬಳಿಯಿರುವ ಶರವು ಗುಳಿಗನ ದೃಷ್ಟಿಯೇ ಕಾರಣ ಎನ್ನುವ ಶಂಕೆ ಮೂಡಿದೆ.

ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದ ಖಾಲಿ ಜಾಗದಲ್ಲಿ ಬಹುಮಹಡಿಯ ಕಾರು ಪಾರ್ಕಿಂಗ್ ಮಾಡಿದರೆ, ಮಂಗಳೂರು ನಗರ ಭಾಗದಲ್ಲಿ ಪಾರ್ಕಿಂಗ್ ಕೊರತೆ ನೀಗಬಹುದು ಅನ್ನುವ ದೂರಾಲೋಚನೆ ಆಡಳಿತಕ್ಕಿತ್ತು. ಇದಕ್ಕಾಗಿ ಸ್ಮಾರ್ಟ್ ಸಿಟಿಯಡಿ ಯೋಜನೆ ಹಮ್ಮಿಕೊಂಡು ಆರಂಭದಲ್ಲಿ 70 ಕೋಟಿ ವೆಚ್ಚದ ಕಾಮಗಾರಿಗೆ ಗುತ್ತಿಗೆ ನೀಡಲಾಗಿತ್ತು. ಯೋಜನೆಗೆ ಅನುಮೋದನೆ ಪಡೆದು ಮೂರು ವರ್ಷಗಳ ಹಿಂದೆ ಕಾಮಗಾರಿ ಎತ್ತಿಕೊಂಡಿದ್ದು, ಎಣಿಸಿದಂತೆ ಆಗುತ್ತಿದ್ದರೆ ಈಗಾಗಲೇ ಬಹುಮಹಡಿಯ ಕಾರು ಪಾರ್ಕಿಂಗ್ ತಲೆಯೆತ್ತಿ ನಿಂತಿರಬೇಕಿತ್ತು. ಯೋಜನೆಗೆ ಸಾಕಷ್ಟು ಅನುದಾನ ಬಿಡುಗಡೆ ಆಗಿರುವುದರಿಂದ ಇಲ್ಲಿ ಹಣದ ಕೊರತೆ ಬರುವ ಪ್ರಶ್ನೆ ಇಲ್ಲ. ಹಾಗಿದ್ದರೂ, ಕಾಮಗಾರಿಗೆ ಅಡಚಣೆ ಆಗುತ್ತಲೇ ಬಂದಿದ್ದು, ಸ್ಥಳದಲ್ಲಿ ಕೆಲಸ ನಿರ್ವಹಿಸುವ ಸೈಟ್ ಮ್ಯಾನೇಜರ್ ಮತ್ತು ಗುತ್ತಿಗೆದಾರರು ಚಿಂತೆಗೊಳಗಾಗಿದ್ದರು.

ಒಂದು ವರ್ಷದ ಹಿಂದೆಯೇ ಈ ಬಗ್ಗೆ ಸ್ಥಳೀಯರ ಮಾತಿನಂತೆ, ಕಾಮಗಾರಿ ನಡೆಯುವ ಜಾಗದಲ್ಲೇ ಎದುರು ಭಾಗದಲ್ಲಿರುವ ಶರವು ಗುಳಿಗನ ಸ್ಥಾನಕ್ಕೆ ಗುತ್ತಿಗೆದಾರರು ಮತ್ತು ಮ್ಯಾನೇಜರ್ ಹೋಗಿ ಕೈಮುಗಿದಿದ್ದರು. ಅಲ್ಲದೆ, ಪ್ರತಿ ಸಂಕ್ರಮಣದ ದಿನ ನಮಿಸುವ ಪದ್ಧತಿಯನ್ನೂ ಇಟ್ಟುಕೊಂಡಿದ್ದರು. ಆದರೂ, ಕಾಮಗಾರಿ ಪ್ರಗತಿ ಕಂಡಿರಲಿಲ್ಲ. ಕಳೆದ ಮೇ ತಿಂಗಳಲ್ಲಿ ಶರವು ಗುಳಿಗನಿಗೆ ವಾರ್ಷಿಕ ಕೋಲ ನಡೆದಿತ್ತು. ಈ ಸಂದರ್ಭದಲ್ಲಿ ಸೈಟ್ ಮ್ಯಾನೇಜರ್ ಆಗಿದ್ದ ವ್ಯಕ್ತಿ ಗುಳಿಗನಲ್ಲಿ ಕಾಮಗಾರಿ ಬಗ್ಗೆ ಕೋರಿಕೆ ಇಟ್ಟಿದ್ದರು. ಅದಕ್ಕೆ ನುಡಿ ಹೇಳಿದ್ದ ಗುಳಿಗನ ಪಾತ್ರಧಾರಿ, ಆ ಜಾಗದಲ್ಲಿ ಗಂಡಾಂತರ ಇರುವುದು ಸತ್ಯ. ಆದರೆ ಅದನ್ನು ನಿವಾರಣೆ ಮಾಡುತ್ತೇನೆ. ನೀವು ಮತ್ತು ನಿಮ್ಮ ಗುತ್ತಿಗೆ ವಹಿಸಿಕೊಂಡವರು ನಂಬಿಕೆ ಇಟ್ಟುಕೊಳ್ಳಿ. ಗುತ್ತಿಗೆಯವರನ್ನೇ ನನ್ನ ಮುಂದೆ ಬರಹೇಳಿ ಎಂದು ಅಭಯ ನೀಡಿದೆ. ತಪ್ಪಿದರೆ, ಗಂಡಾಂತರ ತಪ್ಪಿದ್ದಲ್ಲ ಎನ್ನುವ ಎಚ್ಚರಿಕೆಯನ್ನೂ ಕೊಟ್ಟಿದೆ.

ಗುಳಿಗನ ಕೋಲದಲ್ಲಿ ಈ ರೀತಿಯ ನುಡಿ ಹೇಳಿರುವುದು ಸ್ಥಳೀಯರಲ್ಲಿ ಮತ್ತು ಗುತ್ತಿಗೆ ಕಾಮಗಾರಿ ನಡೆಸುತ್ತಿರುವವರಲ್ಲಿ ಆತಂಕ ಮೂಡಿಸಿದೆ. ಒಂದ್ಕಡೆ ಕೆಲಸ ಸಾಗುತ್ತಿಲ್ಲ, ಮೊದಲ ಮಳೆಯಲ್ಲೇ 2-3 ಬಾರಿ ಅಡಿಪಾಯ ಕುಸಿದು ಹೋಗಿದೆ. ಅಲ್ಲದೆ, ಸ್ಥಳದಲ್ಲಿ ನೀರು ಶೇಖರಣೆಗೊಂಡಿದ್ದು ಕಾಮಗಾರಿ ನಿರ್ವಹಿಸುವುದಕ್ಕೇ ಅಡ್ಡಿಯಾಗಿದೆ. ಇದೇ ವೇಳೆ, ಗುತ್ತಿಗೆ ವಹಿಸಿಕೊಂಡವರೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎನ್ನುವ ಮಾಹಿತಿಯಿದೆ. ಇದರಿಂದ ಸ್ಮಾರ್ಟ್ ಸಿಟಿ ಯೋಜನೆಗೆ ಗುಳಿಗನ ದೃಷ್ಟಿ ಬಿದ್ದಿದೆಯಾ ಎನ್ನುವ ಜಿಜ್ಞಾಸೆಯ ಪ್ರಶ್ನೆಗಳು ಸಾರ್ವಜನಿಕರಲ್ಲಿ ಎದ್ದಿದೆ.

ಪ್ರಸಿದ್ಧ ಶರವು ಮಹಾಗಣಪತಿ ದೇವಸ್ಥಾನದ ಸಮೀಪದಲ್ಲೇ ಇರುವ ಈ ಗುಳಿಗ ಸಾನಿಧ್ಯ ಶರವು ಗುಳಿಗನೆಂದೇ ಹೆಸರು ಪಡೆದಿದೆ. ಹಿಂದಿನ ಕಾಲದಲ್ಲಿ ಹಂಪನಕಟ್ಟೆ ಕಾಡು ಪೊದೆಗಳಿಂದ ಕೂಡಿದ ಅರಣ್ಯವಾಗಿದ್ದು, ಅದರ ನಡುವೆ ಗುಳಿಗನ ಸಾನ್ನಿಧ್ಯ ಇತ್ತೆಂದು ಸ್ಥಳೀಯರಾದ ಪ್ರಸನ್ನ ಹೇಳುತ್ತಾರೆ. ಆನಂತರ ನಗರ ಬೆಳೆಯುತ್ತಿದ್ದಂತೆ ಸುತ್ತಮುತ್ತ ಕಟ್ಟಡ ಮೇಲೆತ್ತಿದ್ದು, ಗುಳಿಗನ ನಡೆಗೆ ಅಡಚಣೆಯಾಗಿದೆ. ಇದರಿಂದಾಗಿ ಆಸುಪಾಸಿನಲ್ಲಿದ್ದ ಯಾವುದೇ ವ್ಯಾಪಾರ, ಸಂಕೀರ್ಣಗಳಿಗೂ ಸುಖ ಇಲ್ಲ. ಬಹಳಷ್ಟು ಮಂದಿ ನಷ್ಟಕ್ಕೀಡಾಗಿ ಜಾಗ ಬಿಟ್ಟು ಹೋಗಿದ್ದಾರೆ ಎನ್ನುವ ಮಾತನ್ನೂ ಹೇಳುತ್ತಾರೆ.

Mangalore Hampanakatta Multi Storey Parking Project under Smart City halts, contractor falls sick.