ಬ್ರೇಕಿಂಗ್ ನ್ಯೂಸ್
26-08-24 06:20 pm Giridhar Shetty, Mangaluru Corresopondent ಕರಾವಳಿ
ಮಂಗಳೂರು, ಆಗಸ್ಟ್ 26: ಒಂದು ಕಾಲದಲ್ಲಿ ಇಡೀ ರಾಜ್ಯದಲ್ಲೇ ಪ್ರತಿಷ್ಠಿತ ಎಂದು ಹೆಸರು ಮಾಡಿದ್ದ ಮಂಗಳೂರು ಯುನಿವರ್ಸಿಟಿಗೆ ಗ್ರಹಣ ಬಡಿದಿದೆ. ಒಂದೆಡೆ ಆರ್ಥಿಕ ಸಂಕಷ್ಟದಿಂದ ಅತಿಥಿ ಉಪನ್ಯಾಸಕರಿಗೆ ಸಂಬಳ ಕೊಡಲು ಹಣ ಇಲ್ಲದ ಸ್ಥಿತಿ. ಮತ್ತೊಂದೆಡೆ, ಈ ಬಾರಿ ಅಡ್ಮಿಶನ್ ಮಾಡೋದಕ್ಕೂ ಕಟ್ಟುನಿಟ್ಟು ಮಾಡಿದ್ದು, ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ನಡೆಯುತ್ತಿದ್ದ ಸಂಧ್ಯಾ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಅಡ್ಮಿಶನ್ ಮಾಡಿಯೇ ಇಲ್ಲ. ಆಮೂಲಕ ಬಡವರ ಪಾಲಿಗೆ ಆಶಾಕಿರಣ ಆಗಿದ್ದ ಸಂಧ್ಯಾ ಕಾಲೇಜನ್ನು ಮುಚ್ಚುತ್ತಾರಾ ಎನ್ನುವ ಶಂಕೆ ಮೂಡಿದೆ.
ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಲ್ಲಿ ಪದವಿ ತರಗತಿಗಳಿಗೆ ಕನಿಷ್ಠ 20 ಮತ್ತು ಸ್ನಾತಕೋತ್ತರ ಪದವಿ ತರಗತಿಗೆ ಕನಿಷ್ಠ 15 ಪ್ರವೇಶಾತಿ ಇರಲೇಬೇಕು ಎನ್ನುವ ನಿರ್ಬಂಧ ಹಾಕಿದ್ದಾರೆ. ಯುನಿವರ್ಸಿಟಿಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದ್ದು, ನಿಗದಿಗಿಂತ ಕಡಿಮೆ ಪ್ರವೇಶಾತಿ ಇರುವ ವಿಭಾಗವನ್ನು ಮುಚ್ಚುವಂತೆ ಸೂಚಿಸಲಾಗಿದೆ. ಇದರಂತೆ, ಮಂಗಳೂರಿನ ಯುನಿವರ್ಸಿಟಿ ಕಾಲೇಜು ಹಂಪನಕಟ್ಟೆ, ಬನ್ನಡ್ಕ ಮತ್ತು ನೆಲ್ಯಾಡಿಯ ಘಟಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ತೊಂದರೆ ಆಗಿಲ್ಲವಾದರೂ, ಯುನಿವರ್ಸಿಟಿ ಕಾಲೇಜಿನಲ್ಲಿರುವ ಸಂಧ್ಯಾ ಕಾಲೇಜಿಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬಾರಿ ಪದವಿ ವಿಭಾಗಕ್ಕೆ ಪ್ರವೇಶಾತಿಯನ್ನೇ ಮಾಡದೆ ಖಾಲಿ ಬಿಡಲಾಗಿದೆ.
ಈ ಬಗ್ಗೆ ಸಂಧ್ಯಾ ಕಾಲೇಜಿನ ಪ್ರಿನ್ಸಿಪಾಲ್ ಲಕ್ಷ್ಮಿದೇವಿ ಅವರಲ್ಲಿ ಕೇಳಿದಾಗ, ಬಿಎ, ಬಿಕಾಂ ಪದವಿಗೆ ಹೆಚ್ಚು ಮಕ್ಕಳು ಬಂದಿರಲಿಲ್ಲ. ಬಿಸಿಎಗೆ 11 ಮಕ್ಕಳು ಬಂದಿದ್ದರು. ಯುನಿವರ್ಸಿಟಿ ಆಡಳಿತದ ಸೂಚನೆ ಪ್ರಕಾರ, 20 ಮಕ್ಕಳು ಇಲ್ಲದೆ ಪ್ರವೇಶಾತಿ ಮಾಡುವಂತಿಲ್ಲ. ಹೀಗಾಗಿ ಈ ಬಾರಿ ಪದವಿ ತರಗತಿಗೆ ಯಾವುದೇ ಅಡ್ಮಿಶನ್ ಮಾಡಿಕೊಂಡಿಲ್ಲ. ಬಂದಿದ್ದ ಮಕ್ಕಳನ್ನು ಬೆಸೆಂಟ್ ಮತ್ತು ಕಾರ್ ಸ್ಟ್ರೀಟ್ ನಲ್ಲಿರುವ ಸಂಧ್ಯಾ ಕಾಲೇಜಿಗೆ ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ನಾತಕೋತ್ತರ ವಿಭಾಗಕ್ಕೆ ಈಗಷ್ಟೇ ಪ್ರವೇಶಾತಿ ಆಗುತ್ತಿದ್ದು, ಕಡಿಮೆ ಬಂದರೆ ವಿಭಾಗ ಮುಂದುವರಿಸುವುದು ಕಷ್ಟವಾಗಲಿದೆ ಎಂದಿದ್ದಾರೆ.
ಇದೇ ವಿಚಾರದ ಬಗ್ಗೆ ಯುನಿವರ್ಸಿಟಿ ಕಾಲೇಜಿನ ಪ್ರಿನ್ಸಿಪಾಲ್ ಗಣಪತಿ ಗೌಡ ಅವರಲ್ಲಿ ಕೇಳಿದಾಗ, ಸಂಧ್ಯಾ ಕಾಲೇಜನ್ನು ನಮ್ಮ ಡೇ ಕಾಲೇಜಿನ ಮ್ಯಾನೇಜ್ಮೆಂಟ್ ಒಳಗಡೆ ತರಲಾಗಿದೆ. ಈ ಬಾರಿ ಸಂಧ್ಯಾ ಕಾಲೇಜಿನಲ್ಲಿ ಪದವಿಗೆ ಪ್ರವೇಶಾತಿ ಆಗಿಲ್ಲ. ಹಗಲಿನ ಕಾಲೇಜುಗಳಿಗೆ ಡಿಗ್ರಿ ವಿಭಾಗದಲ್ಲಿ ಅಡ್ಮಿಶನ್ ಫುಲ್ ಆಗಿದೆ. ಸ್ನಾತಕೋತ್ತರ ವಿಭಾಗದಲ್ಲಿ ಯೋಗಿಕ್ ಸೈನ್ಸ್, ಇಕನಾಮಿಕ್ಸ್ ಮತ್ತು ಹಿಸ್ಟರಿ ಅಂಡ್ ಆರ್ಕಿಯೋಲಜಿ ವಿಷಯದಲ್ಲಿ ಅಡ್ಮಿಶನ್ ಮುಂದುವರಿಸದಿರುವ ನಿರ್ಧಾರ ಮಾಡಲಾಗಿದೆ. ಉಳಿದಂತೆ, ಎಲ್ಲ ಸ್ನಾತಕ ಪದವಿಗಳಿಗೆ ಪ್ರವೇಶಾತಿ ಕರೆಯಲಾಗಿದೆ. ಎಷ್ಟು ಅಡ್ಮಿಶನ್ ಆಗುತ್ತೆ ಎಂದು ನೋಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಇನ್ನೊಂದು ಮೂಲದ ಪ್ರಕಾರ, ಸ್ನಾತಕ ಪದವಿ ತರಗಳಿಗೆ ಮಂಗಳೂರು ವಿವಿಯ ಕೋಣಾಜೆ ಕ್ಯಾಂಪಸಿನಲ್ಲಿ ಅಡ್ಮಿಶನ್ ತೀವ್ರ ಇಳಿಕೆಯಾಗಿದೆ. ಹೀಗಾಗಿ ಮಂಗಳೂರು ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜಿನಲ್ಲಿರುವ ಸ್ನಾತಕ ತರಗತಿಗಳನ್ನು ಕೋಣಾಜೆಗೆ ಸ್ಥಳಾಂತರ ಮಾಡುವ ಇಂಗಿತವನ್ನು ಸಿಂಡಿಕೇಟ್ ಸದಸ್ಯರು ಹೊಂದಿದ್ದಾರೆ. ಈ ಬಗ್ಗೆ ಕಳೆದ ತಿಂಗಳು ನಡೆದ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾಗಿದೆ ಎನ್ನುವ ಮಾಹಿತಿ ಇದೆ. ಇದೇ ವೇಳೆ, ಅಡ್ಮಿಶನ್ ತುಂಬ ಕಡಿಮೆ ಇರುವ ವಿಭಾಗವನ್ನು ಮುಚ್ಚುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ.
2015ರಲ್ಲಿ ಯುನಿವರ್ಸಿಟಿ ಕಾಲೇಜು ಆವರಣದಲ್ಲಿ ಪ್ರತ್ಯೇಕ ಸಂಧ್ಯಾ ಕಾಲೇಜು ಆರಂಭಗೊಂಡಿದ್ದರೂ, ಅದಕ್ಕೆ ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಮಾನ್ಯತೆ ಸಿಕ್ಕಿಲ್ಲ. ಮಾನ್ಯತೆ ನೀಡಿದರೆ ಅಲ್ಲಿಗೆ ಪೂರ್ಣಾವಧಿ ಸಿಬಂದಿ ನೀಡಬೇಕಾಗುತ್ತೆ ಎನ್ನುವ ಕಾರಣಕ್ಕೆ ನೀಡಿರಲಿಲ್ಲ. ಹೀಗಾಗಿ ಅಲ್ಲಿಗೆ ಪ್ರಭಾರ ನೆಲೆಯಲ್ಲಿ ಪ್ರಾಂಶುಪಾಲರನ್ನು ಒದಗಿಸಿ ಕಾಲೇಜು ನಡೆಸುತ್ತಿದ್ದರು. ಇದಲ್ಲದೆ, 2019ರಲ್ಲಿ ಬನ್ನಡ್ಕ, 2017ರಲ್ಲಿ ನೆಲ್ಯಾಡಿಯಲ್ಲಿ ವಿವಿಯ ಘಟಕ ಕಾಲೇಜು ತೆರೆದಿದ್ದರೂ, ಅಲ್ಲಿ ಸ್ವಂತ ಕಟ್ಟಡ ಇಲ್ಲ. ಜೊತೆಗೆ, ಉನ್ನತ ಶಿಕ್ಷಣ ಇಲಾಖೆಯ ಪರವಾನಗಿಯೂ ಸಿಕ್ಕಿಲ್ಲ. ಗ್ರಾಮಾಂತರ ಪ್ರದೇಶದಲ್ಲಿರುವ ಈ ಘಟಕ ಕಾಲೇಜಿನಿಂದಾಗಿ ಬಡ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಪದವಿ ಪಡೆಯಲು ಸಾಧ್ಯವಾಗುತ್ತಿದೆ. ಇದೇ ಕಾರಣಕ್ಕೆ ಹೆಚ್ಚಿನ ಪ್ರವೇಶಾತಿಯೂ ಇದೆ ಎನ್ನುತ್ತಾರೆ, ಉಪನ್ಯಾಸಕರು.
ಆದರೆ ಸಂಧ್ಯಾ ಕಾಲೇಜಿಗೆ ಸುಸಜ್ಜಿತ ಕಟ್ಟಡ, ಕಚೇರಿ ಇದೆ. ಉಪನ್ಯಾಸಕರಿಗೆ ಪ್ರತ್ಯೇಕ ವಿಭಾಗವೂ ಇದೆ. ಆದರೂ, ವಿವಿ ಆಡಳಿತದ ನಿರಾಸಕ್ತಿ ಮತ್ತು ರಾಜ್ಯ ಸರ್ಕಾರದ ‘ಗ್ಯಾರಂಟಿ ಹೊಡೆತ’ದ ಬಿಸಿಯಿಂದಾಗಿ ಈ ಬಾರಿ ಅಡ್ಮಿಶನ್ನೇ ಮಾಡಿಕೊಂಡಿಲ್ಲ. ಪದವಿಗೆ ಪ್ರವೇಶಾತಿ ಮಾಡದೇ ಇದ್ದರೆ, ಅರ್ಧಕ್ಕರ್ಧ ಅತಿಥಿ ಉಪನ್ಯಾಸಕರಿಗೆ ಕೆಲಸ ಇಲ್ಲದಾಗುತ್ತೆ, ಅಷ್ಟು ಸಂಬಳ ಕೊಡುವ ಉಸಾಬರಿ ಕಡಿಮೆಯಾಗುತ್ತೆ ಎನ್ನುವ ಆಲೋಚನೆ ವಿವಿಯದ್ದು. ಎರಡು ತಿಂಗಳ ಹಿಂದೆ ಅತಿಥಿ ಉಪನ್ಯಾಸಕರಿಗೆ ನಾಲ್ಕು ತಿಂಗಳ ಸಂಬಳ ಆಗಿಲ್ಲವೆಂದು ವಿವಿಯ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾಗಿದ್ದು, ರಾಜ್ಯ ಸರಕಾರದಿಂದ ಅನುದಾನ ಕೇಳಿ ಪತ್ರ ಬರೆಯಲಾಗಿತ್ತು. ಆದರೆ ರಾಜ್ಯ ಸರಕಾರದಲ್ಲಿ ಹಣ ಇಲ್ಲವೆಂದು ಅನುದಾನ ಪ್ರಸ್ತಾಪವನ್ನೇ ಹಿಂದಕ್ಕೆ ಕಳಿಸಲಾಗಿದೆ ಎನ್ನುವ ಮಾಹಿತಿಯಿದೆ.
ಒಂದೆಡೆ ಹಿಂದಿನ ವಿವಿಯ ಆಡಳಿತದ ಅಸಡ್ಡೆಯಿಂದಾಗಿ ವಿವಿಗೆ ಬಿ ಗ್ರೇಡ್ ಸಿಕ್ಕಿದ್ದರಿಂದ ಯುಜಿಸಿ ಅನುದಾನ ಕಡಿತಗೊಂಡಿರುವುದು ಮತ್ತು ರಾಜ್ಯ ಸರಕಾರದ ಅನುದಾನವೂ ಇಲ್ಲದ್ದರಿಂದ ಮಂಗಳೂರು ವಿಶ್ವವಿದ್ಯಾನಿಲಯವನ್ನು ನಡೆಸಿಕೊಂಡು ಹೋಗುವುದೇ ಕಷ್ಟವಾಗಿದೆ. ಹಾಗೆಂದು, ಲಕ್ಷ ಲಕ್ಷ ವೇತನ ಪಡೆಯುವ ಪರ್ಮನೆಂಟ್ ಸಿಬಂದಿಗೆ ಇದರಿಂದೇನೂ ತೊಂದರೆ ಆಗಿಲ್ಲ. ನಮ್ಮದಿನ್ನು ಎರಡು ವರ್ಷ, ಮೂರು ವರ್ಷ ಎನ್ನುತ್ತ ವಿವಿ ಮುಚ್ಚಿದರೂ ತಮಗೇನೂ ಚಿಂತೆಯಿಲ್ಲ ಎಂದು ದಿನಗಳನ್ನು ಎಣಿಸುತ್ತಿದ್ದಾರೆ. ಈ ಬಾರಿ ಸಂಧ್ಯಾ ಕಾಲೇಜಿಗೆ ಬಿಸಿಎಗೆ 18 ವಿದ್ಯಾರ್ಥಿಗಳು ಪ್ರವೇಶ ಕೇಳಿಕೊಂಡು ಬಂದಿದ್ದರು. ಪ್ರಿನ್ಸಿಪಾಲ್ ಕನಿಷ್ಠ 20 ಆಗದಿದ್ದರೆ ಪ್ರವೇಶಾತಿ ಮಾಡಲ್ಲ ಎಂದಿದ್ದರಿಂದ ಡಿಗ್ರಿ ಸೇರುವುದಕ್ಕೇ ಮುಂದಾಗಿಲ್ಲ. ಹೀಗಾಗಿ, ಈ ಬಾರಿ ಪದವಿ ಪ್ರವೇಶ ನಿಂತುಹೋಗಿದೆ. ಸ್ನಾತಕೋತ್ತರ ಪದವಿಯ ಸ್ಥಿತಿಯೂ ಡೋಲಾಯಮಾನ ಎನ್ನುವ ರೀತಿ ಇದೆ.
ಹಗಲಿನಲ್ಲಿ ಕೆಲಸ ಮಾಡಿ, ರಾತ್ರಿ ವೇಳೆ ನಗರ ಮಧ್ಯ ಇರುವ ಸರ್ಕಾರಿ ಕಾಲೇಜಿನಲ್ಲಿ ಕಡಿಮೆ ಶುಲ್ಕದಲ್ಲಿ ಪದವಿ, ಸ್ನಾತಕ ಪದವಿ ಸಿಗುತ್ತೆ ಎನ್ನುವ ದೃಷ್ಟಿಯಿಂದ ವಿದ್ಯಾರ್ಥಿಗಳು ಸಂಧ್ಯಾ ಕಾಲೇಜು ಸೇರುತ್ತಿದ್ದರು. ಆದರೆ, ಕಾಲೇಜಿನ ಜವಾಬ್ದಾರಿ ವಹಿಸಿಕೊಂಡವರು ವಿಭಾಗ ಉಳಿಸಿಕೊಳ್ಳಬೇಕೆಂಬ ಆಸಕ್ತಿಯೇ ಹೊಂದಿಲ್ಲದಿದ್ದರೆ, ಕಾಲೇಜು ಮುಂದುವರಿಯುತ್ತಾ..? ಇಂಥ ಅಸಡ್ಡೆ ನೀತಿಯಿಂದಾಗಿ ಖಾಸಗಿ ಕಾಲೇಜುಗಳಿಗೆ ಇವರೇ ಸಹಕಾರ ನೀಡಿದಂತಾಗಿಲ್ಲವೇ.? ಹೊಟೇಲಿನಲ್ಲಿ ಕೆಲಸ ಮಾಡುತ್ತ ರಾತ್ರಿ ಪದವಿ ತರಗತಿಗೆ ಬರುತ್ತಿದ್ದವರಿದ್ದರು. ಅಂಥವರಿಗೆ ಸರ್ಕಾರವೇ ಬಾಗಿಲು ಮುಚ್ಚಿದಂತಾಗಿಲ್ಲವೇ ಎಂದು ಅಳಲು ಹೇಳಿಕೊಳ್ಳುತ್ತಾರೆ, ಉಪನ್ಯಾಸಕರೊಬ್ಬರು. ಇದರಿಂದಾಗಿ ಮೂಲಭೂತ ಹಕ್ಕು ಎನಿಸಿರುವ ಶಿಕ್ಷಣದ ಬಗ್ಗೆಯೂ ಸರ್ಕಾರಗಳು ನಿರಾಸಕ್ತಿ ಹೊಂದಿದೆಯಾ ಎನ್ನುವ ಆತಂಕದ ಪ್ರಶ್ನೆ ಮೂಡಿದೆ.
Mangalore University faces financial crunch, admission for evening college ends. Mr. Dharma said that the financial crisis has forced the university to pay the salaries of its temporary staff once in three months.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm