Mangalore, Brijesh Chowta MP: ವಾಲ್ಮೀಕಿ ಹಗರಣ ರೀತಿಯಲ್ಲೇ ಮುಡಾ ಹಗರಣವನ್ನೂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ, ಬಿಜೆಪಿ ಹೋರಾಟಕ್ಕೆ ಗೆಲುವು ಸಿಕ್ಕಿದೆ ; ಸಂಸದ ಕ್ಯಾ. ಬ್ರಿಜೇಶ್ ಚೌಟ

02-10-24 11:04 pm       Mangalore Correspondent   ಕರಾವಳಿ

ವಾಲ್ಮೀಕಿ ಹಗರಣ ಆಗಿರೋದನ್ನು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಒಪ್ಪಿಕೊಂಡಿದ್ದರು. ಅದರಲ್ಲಿ 187 ಕೋಟಿ ಹಗರಣ ಆಗಿರೋದಲ್ಲ, 84 ಕೋಟಿ ಎಂದು ಹೇಳಿ ಸ್ಪಷ್ಟನೆಯನ್ನೂ ನೀಡಿದ್ದರು.

ಮಂಗಳೂರು, ಅ.2: ವಾಲ್ಮೀಕಿ ಹಗರಣ ಆಗಿರೋದನ್ನು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಒಪ್ಪಿಕೊಂಡಿದ್ದರು. ಅದರಲ್ಲಿ 187 ಕೋಟಿ ಹಗರಣ ಆಗಿರೋದಲ್ಲ, 84 ಕೋಟಿ ಎಂದು ಹೇಳಿ ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಎತ್ತಿಕೊಂಡ ಬೆನ್ನಲ್ಲೇ ತಮ್ಮ 14 ಸೈಟ್ ಗಳನ್ನು ವಾಪಸ್ ನೀಡಿದ್ದಾರೆ. ತಪ್ಪಾಗಿದೆ, ಕ್ಷಮಿಸಿ ಎಂದು ಪರೋಕ್ಷವಾಗಿ ಜನರಿಗೆ ಹೇಳುವ ಮೂಲಕ ಹಗರಣ ಆಗಿರೋದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಹೋರಾಟಕ್ಕೆ ಗೆಲುವಾಗಿದೆ, ಹೀಗಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನ ತ್ಯಜಿಸಿ ಹೋಗುವುದೇ ಒಳ್ಳೆಯದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಲೆದಂಡ ಆಗಬೇಕೆಂದು ಬಿಜೆಪಿ ಮೈಸೂರು ಚಲೋ ಹಮ್ಮಿಕೊಂಡಿತ್ತು. ಅದರ ಪರಿಣಾಮವಾಗಿ ಪ್ರಕರಣ ಇಷ್ಟು ಗಂಭೀರತೆ ಪಡೆದುಕೊಂಡಿದ್ದು, ಕೋರ್ಟ್ ಸೂಚನೆಯಂತೆ ಲೋಕಾಯುಕ್ತ ತನಿಖೆ ಆರಂಭಿಸಿದೆ. ಇದೀಗ ಇಡಿ ಅಧಿಕಾರಿಗಳೂ ಕೇಸು ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪತ್ನಿಯ ಮೂಲಕ ಅಕ್ರಮವಾಗಿ ಪಡೆದಿದ್ದ ಸೈಟ್ ಗಳನ್ನು ಹಿಂದಕ್ಕೆ ಕೊಟ್ಟಿದ್ದಾರೆ. ಇಷ್ಟೆಲ್ಲ ಆಗಿರುವಾಗ ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕೂರುವುದು ಸರಿಯಲ್ಲ.

ತಾವಾಗಿಯೇ ಸಿಎಂ ಸ್ಥಾನ ತ್ಯಜಿಸಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯಲು ಅವಕಾಶ ನೀಡಬೇಕು. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ತನ್ನ ಕೈಕೆಳಗಿನ ಅಧಿಕಾರಿಗಳಲ್ಲಿ ತನಿಖೆ ಮಾಡಿಸಿ ಎನ್ನುವುದು ಎಷ್ಟು ಸರಿ. ಅವರಿಂದ ಸರಿಯಾದ ತನಿಖೆ ಸಾಧ್ಯವೇ ಎಂದು ಬ್ರಿಜೇಶ್ ಚೌಟ ಪ್ರಶ್ನಿಸಿದ್ದಾರೆ. ಯತ್ನಾಳ್ ಸಿಎಂ ಸ್ಥಾನಕ್ಕೆ ಒಂದು ಸಾವಿರ ಕೋಟಿ ಇಟ್ಕೊಂಡಿದ್ದಾರೆ ಎಂದು ಹೇಳಿರುವ ಪ್ರಶ್ನೆ ಬಗ್ಗೆ ಕೇಳಿದ್ದಕ್ಕೆ, ಬಿಜೆಪಿ ಸಾಮಾನ್ಯ ಕಾರ್ಯಕರ್ತರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದೆ. ಒಂದು ಸಾವಿರ ಕೋಟಿಗೆ ಎಷ್ಟು ಸೊನ್ನೆ ಇದೆಯೆಂದೇ ನಮಗೆಲ್ಲ ಗೊತ್ತಿಲ್ಲ. ಹಾಗಿರುವಾಗ ಒಂದು ಸಾವಿರ ಕೋಟಿ ಮುಂದಿಟ್ಟು ಸಿಎಂ ಸ್ಥಾನ ಆಸೆ ಪಡುವುದು ಸಾಧ್ಯವೇ ಇಲ್ಲ. ಪರಿಷತ್ ಚುನಾವಣೆಗೆ ಸಾಮಾನ್ಯ ಅದರಲ್ಲೂ ಹಿಂದುಳಿದ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಟ್ಟಿರುವುದು ಬಿಜೆಪಿ ನಡೆ ಯಾವ ರೀತಿ ಇದೆ ಎನ್ನುವುದನ್ನು ತೋರಿಸಿದೆ ಎಂದರು.

ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಿಂತು ಹೋಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದೆ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರೆ ರಾಜ್ಯದ ಜನರಿಗೇ ಒಳಿತಾಗಲಿದೆ ಎಂದವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಶಾಸಕ ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯತೀಶ್ ಆರ್ವಾರ್, ರಾಕೇಶ್ ರೈ ಕೆಡೆಂಜಿ ಮತ್ತಿತರರು ಇದ್ದರು.

Dakshina Kannada MP Capt Brijesh Chowta has urged chief minister Siddaramaiah to step down, stating that his resignation would be the only way to preserve whatever is left of his dignity.