Mangalore Kishor kumar Puttur, Raju Poojary: ವಿಧಾನ ಪರಿಷತ್ ಚುನಾವಣೆ ; ಬಿಜೆಪಿಯಿಂದ ಕಿಶೋರ್ ಕುಮಾರ್, ಕಾಂಗ್ರೆಸಿನಿಂದ ರಾಜು ಪೂಜಾರಿ ನಾಮಪತ್ರ ಸಲ್ಲಿಕೆ, ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಪ್ರಮೋದ್ ಮಧ್ವರಾಜ್

03-10-24 05:13 pm       Mangalore Correspondent   ಕರಾವಳಿ

ಸ್ಥಳೀಯಾಡಳಿತ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಗೊಳ್ಳುವ ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆಯ ಕೊನೆ ದಿನದಂದೇ ನಾಮಪತ್ರ ಸಲ್ಲಿಕೆಯಾಗಿದೆ.

ಮಂಗಳೂರು, ಅ.3: ಸ್ಥಳೀಯಾಡಳಿತ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಗೊಳ್ಳುವ ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆಯ ಕೊನೆ ದಿನದಂದೇ ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಮತ್ತು ಕಾಂಗ್ರೆಸಿನಿಂದ ಬೈಂದೂರು ಮೂಲದ ಸಹಕಾರಿ ಧುರೀಣ ರಾಜು ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಪಕ್ಷದ ಪ್ರಮುಖರ ಆಶೀರ್ವಾದ ಕೇಳಿದ ಕಿಶೋರ್ ಕುಮಾರ್ ಪಕ್ಷದ ಸಭೆಯಲ್ಲಿ ಭಾಗಿಯಾದರು. ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮಗೆಲ್ಲ ಬಿಜೆಪಿ ಮಾತೃ ಸಮಾನ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಸ್ಥಳೀಯಾಡಳಿತ ಕ್ಷೇತ್ರಗಳನ್ನು ಪ್ರತಿನಿಧಿಸಲು ಅವಕಾಶ ನೀಡಿದ್ದಾರೆ. ಅವರ ಬೇಕು- ಬೇಡಗಳನ್ನು ಅರಿತುಕೊಂಡು ಸ್ಪಂದಿಸುತ್ತೇನೆ. ಹೆಚ್ಚಿನ ಮತಗಳಿಂದ ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆಯೆಂದು ಹೇಳಿದರು. ಪಕ್ಷದ ಸಭೆಯಲ್ಲಿ ಅಚ್ಚರಿ ಎನ್ನುವಂತೆ ಈ ಬಾರಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್ ಕಾಣಿಸಿಕೊಂಡಿದ್ದರು. ಸಭೆಗೂ ಮೊದಲೇ ಪಕ್ಷದ ಕಚೇರಿಯಲ್ಲಿ ಕಾಣಿಸಿಕೊಂಡು ಮಾಧ್ಯಮದವರ ನಡುವೆ ಕುಳಿತುಕೊಂಡಿದ್ದರು. ಅವರನ್ನು ಬಿಜೆಪಿ ಪ್ರಮುಖರೇ ವೇದಿಕೆಗೆ ಕರೆದೊಯ್ದು ಕುಳ್ಳಿರಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗ್ರಾಪಂ ವ್ಯವಸ್ಥೆಯಿಂದಲೇ ಮೇಲೆ ಬಂದವರಾಗಿದ್ದು ಮೊದಲಿಗೆ ಗ್ರಾಪಂ, ಕುಂದಾಪುರ ತಾಪಂ ಸದಸ್ಯರಾಗಿದ್ದರು. ಆನಂತರ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸದ್ಯ ಜಿಪಂ ಚುನಾವಣೆ ಆಗದೇ ಅಸ್ತಿತ್ವದಲ್ಲಿ ಇಲ್ಲದಿದ್ದರೂ, ಉಡುಪಿ ಕಾಂಗ್ರೆಸ್ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರು. ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಐವಾನ್ ಡಿಸೋಜ ಜೊತೆಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಆರೆಸ್ಸೆಸ್ ಹಿನ್ನೆಲೆಯ ಕಿಶೋರ್ ಕುಮಾರ್ 2009ರಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕರಾಗಿ, ಬಳಿಕ ಯುವಮೋರ್ಚಾ ಪದಾಧಿಕಾರಿಯಾಗಿ ಪಕ್ಷ ಸೇರ್ಪಡೆಯಾಗಿದ್ದರು. ಯುವಮೋರ್ಚಾದಲ್ಲಿ ಪಕ್ಷದ ಕಾರ್ಯಕರ್ತನಾಗಿ ಬೆಳೆದು 2016ರ ವೇಳೆಗೆ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಆನಂತರ, ಈ ಬಾರಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಭಡ್ತಿ ಪಡೆದಿದ್ದರು. 2018ರಲ್ಲಿ ಮತ್ತು 2023ರಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಿಶೋರ್ ಕುಮಾರ್ ಗೆ ಅದೃಷ್ಟ ಸಿಕ್ಕಿರಲಿಲ್ಲ. ಈ ಬಾರಿ ಕೋಟರಿಂದ ತೆರವಾದ ಸ್ಥಳೀಯಾಡಳಿತ ಕ್ಷೇತ್ರದಿಂದ ಸದಸ್ಯರಾಗಲು ಅವಕಾಶ ಪಡೆದಿದ್ದಾರೆ.

BJP Kishor Kumar Puttur and Congress Raju poojary file nomination at Dc office for vidhana parishad elections in Mangalore.