Mangalore, Mumtaz Ali latest news: ಉದ್ಯಮಿ ಮುಮ್ತಾಜ್ ಆಲಿ ನಾಪತ್ತೆ ; ಇಡೀ ದಿನ ನದಿಯಲ್ಲಿ ಹುಡುಕಾಡಿದರೂ ಸಿಗದ ಸುಳಿವು, ಮಹಿಳೆಯ ಬ್ಲಾಕ್ಮೇಲ್ ಬಗ್ಗೆ ಪೊಲೀಸರ ತನಿಖೆ, ಕಾರಿಗೆ ಡಿಕ್ಕಿ ಹೊಡೆಸಿದ್ದು ಯಾರು? ಕಿಡ್ನಾಪ್ ಬಗ್ಗೆಯೂ ಶಂಕೆ 

06-10-24 06:10 pm       Mangalore Correspondent   ಕರಾವಳಿ

ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸೋದರ ನಿಗೂಢ ನಾಪತ್ತೆ ನಾನಾ ರೀತಿಯ ಶಂಕೆಗಳನ್ನು ಮೂಡಿಸಿದೆ. ಕುಳೂರು ಸೇತುವೆಯಲ್ಲಿ ಕಾರು ಪತ್ತೆಯಾಗಿದ್ದರಿಂದ ಇಡೀ ದಿನ ಅಗ್ನಿಶಾಮಕ ದಳ, ಮುಳುಗು ತಜ್ಞರು, ಕೋಸ್ಟ್ ಗಾರ್ಡ್, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಸಿಬಂದಿ ನದಿಯಲ್ಲಿ ಶೋಧ ನಡೆಸಿದ್ದಾರೆ. ಆದರೆ ನದಿಯಲ್ಲಿ ಯಾವುದೇ ಕುರುಹು ಸಿಗದಿರುವುದು ಪೊಲೀಸರ ತನಿಖೆ ಬೇರೆ ದಿಕ್ಕಿನತ್ತ ಹೊರಳಿದೆ.

ಮಂಗಳೂರು, ಅ.6: ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸೋದರ ನಿಗೂಢ ನಾಪತ್ತೆ ನಾನಾ ರೀತಿಯ ಶಂಕೆಗಳನ್ನು ಮೂಡಿಸಿದೆ. ಕುಳೂರು ಸೇತುವೆಯಲ್ಲಿ ಕಾರು ಪತ್ತೆಯಾಗಿದ್ದರಿಂದ ಇಡೀ ದಿನ ಅಗ್ನಿಶಾಮಕ ದಳ, ಮುಳುಗು ತಜ್ಞರು, ಕೋಸ್ಟ್ ಗಾರ್ಡ್, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಸಿಬಂದಿ ನದಿಯಲ್ಲಿ ಶೋಧ ನಡೆಸಿದ್ದಾರೆ. ಆದರೆ ನದಿಯಲ್ಲಿ ಯಾವುದೇ ಕುರುಹು ಸಿಗದಿರುವುದು ಪೊಲೀಸರ ತನಿಖೆ ಬೇರೆ ದಿಕ್ಕಿನತ್ತ ಹೊರಳಿದೆ.

ಮುಮ್ತಾಜ್ ಆಲಿ ನಸುಕಿನ ಮೂರು ಗಂಟೆಗೆ ಮನೆಯಿಂದ ಬಿಟ್ಟಿದ್ದು, ತಮ್ಮ ಫ್ಯಾಮಿಲಿ ವಾಟ್ಸಪ್ ಗ್ರೂಪಿನಲ್ಲಿ ಬ್ಯಾರಿ ಭಾಷೆಯಲ್ಲಿ ವಾಯ್ಸ್ ಮೆಸೇಜ್ ಹಾಕಿದ್ದರು. ತಾನು ಬದುಕಿ ಉಳಿಯುವುದಿಲ್ಲ, ದೇವರ ಬಳಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. 3.30ರ ವೇಳೆಗೆ ಈ ಮೆಸೇಜ್ ಹಾಕಿದ್ದರೆ, ಅದನ್ನು ಮಗಳು 4.30ರ ವೇಳೆಗೆ ನೋಡಿದ್ದು, ಕೂಡಲೇ ಸುರತ್ಕಲ್ ಕಡೆಯಿಂದ ಕುಳೂರಿನತ್ತ ತನ್ನ ಕಾರಿನಲ್ಲಿ ಬಂದಿದ್ದರು. ಆದರೆ, ಕುಳೂರು ಸೇತುವೆಯಲ್ಲಿ ತಂದೆಯ ಕಾರು ಸಿಕ್ಕಿದ್ದರಿಂದ ಕೂಡಲೇ ಕಾವೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಳಗಾಗುತ್ತಲೇ ಕುಳೂರು ಸೇತುವೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮೊಯ್ದೀನ್ ಬಾವಾ ಕುಟುಂಬಸ್ಥರು, ಮುಮ್ತಾಜ್ ಆಲಿ ಗೆಳೆಯರು ಬಂದಿದ್ದು, ಮುಮ್ತಾಜ್ ಆತ್ಮಹತ್ಯೆ ಮಾಡಿಕೊಂಡಿರಲಿಕ್ಕಿಲ್ಲ ಎನ್ನುತ್ತಿದ್ದರು. ಆದರೆ ಬಾವಾ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಮುಮ್ತಾಜ್ ಆಲಿ ನದಿಗೆ ಹಾರಿರುವ ಶಂಕೆ ಇದೆ ಎಂದು ಹೇಳಿದ್ದಲ್ಲದೆ, ಕುಟುಂಬಸ್ಥರು ನೀಡಿದ ಮಾಹಿತಿ ಅನುಸರಿಸಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದರು. ಇದರಿಂದ ಮುಮ್ತಾಜ್ ನದಿಗೆ ಹಾರಿದ್ದಾರೆಂಬ ಶಂಕೆ ಬಲವಾಗಿತ್ತು.

ಬೆಳಗ್ಗೆ 11 ಗಂಟೆ ವೇಳೆಗೆ ಉಡುಪಿಯ ಈಶ್ವರ್ ಮಲ್ಪೆ ನೇತೃತ್ವದ ಏಳು ಮಂದಿಯಿದ್ದ ಮುಳುಗು ತಜ್ಞರ ತಂಡ ಆಗಮಿಸಿದ್ದು, ಶೋಧ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಅಲ್ಲದೆ, ಕೋಸ್ಟ್ ಗಾರ್ಡ್ ಸಿಬಂದಿಯೂ ಶೋಧ ನಡೆಸಿದ್ದಾರೆ. ಈಶ್ವರ್ ಮಲ್ಪೆ ಪ್ರಕಾರ, ನದಿಗೆ ಹಾರಿದ್ದರೆ 200 ಮೀಟರ್ ಗಿಂತ ಹೆಚ್ಚು ದೂರಕ್ಕೆ ಹೋಗಲು ಸಾಧ್ಯವಿಲ್ಲ. ನಾವು ಈ ಜಾಗದಲ್ಲಿ ಸಾಕಷ್ಟು ಬಾರಿ ಹುಡುಕಾಟ ನಡೆಸಿದರೂ ಏನೊಂದೂ ಸುಳಿವು ಲಭಿಸಿಲ್ಲ. ಸ್ಥಳದಲ್ಲಿ ಹೊಸ ಸೇತುವೆಯ ಕಾಮಗಾರಿ ನಡೆಯುತ್ತಿದ್ದು, ಪಿಲ್ಲರ್ ಕೆಲಸಕ್ಕಾಗಿ ಮಣ್ಣು ತುಂಬಲಾಗಿದೆ. ಹೀಗಾಗಿ ಸೇತುವೆ ಆಸುಪಾಸಿನಲ್ಲಿ ನದಿಯೂ ಹೆಚ್ಚು ಆಳವಿಲ್ಲ. ನೀರಿನ ಹರಿವೂ ಹೆಚ್ಚಿಲ್ಲ. ಮುಮ್ತಾಜ್ ಕಪ್ಪು ಬಟ್ಟೆ ಧರಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದರಿಂದ ನದಿಯ ಆಳದಲ್ಲಿ ಕಾಣುವುದಿಲ್ಲ. 200 ಮೀಟರ್ ವ್ಯಾಪ್ತಿಯಲ್ಲಿ ಸಾಕಷ್ಟು ಬಾರಿ ಹುಡುಕಾಟ ನಡೆಸಿದ್ದೇವೆ ಎಂದಿದ್ದಾರೆ. ಸಂಜೆಯ ವರೆಗೆ ಹುಡುಕಾಟ ನಡೆದರೂ, ಪೊಲೀಸರಿಗೆ ಯಾವುದೇ ಸುಳಿವು ಲಭಿಸಿಲ್ಲ.

ಮಹಿಳೆಯ ಬ್ಲಾಕ್ಮೇಲ್ ಬಗ್ಗೆ ತನಿಖೆ

ಇದೇ ವೇಳೆ, ನದಿಯಲ್ಲಿ ಯಾವುದೇ ಕುರುಹು ಸಿಗದಿರುವುದರಿಂದ ಪೊಲೀಸರ ತನಿಖೆ ಬೇರೆ ದಿಕ್ಕಿನತ್ತ ಸಾಗಿದೆ. ಕಾರಿನಲ್ಲಿ ಒಂದು ಮೊಬೈಲ್ ಸಿಕ್ಕಿದೆ ಎನ್ನಲಾಗುತ್ತಿದ್ದು, ತಾಂತ್ರಿಕ ಸಾಕ್ಷ್ಯಗಳತ್ತ ಗಮನ ಹರಿಸಿದ್ದಾರೆ. ಇದೇ ವೇಳೆ, ಮುಮ್ತಾಜ್ ಆಲಿ ಅವರನ್ನು ಮಹಿಳೆಯೊಬ್ಬರು ಬ್ಲಾಕ್ಮೇಲ್ ಮಾಡುತ್ತಿದ್ದರು ಎನ್ನಲಾಗಿದ್ದು ವಿಡಿಯೋ ಮುಂದಿಟ್ಟು ಮದುವೆಯಾಗಲು ಒತ್ತಡ ಹೇರಿದ್ದರು ಎನ್ನುವ ಮಾತು ಕೇಳಿಬಂದಿದೆ. ಆ ಮಹಿಳೆಗೆ ಸುರತ್ಕಲ್ಲಿನ ಇತರ ಕೆಲವು ಯುವಕರು ಸಹಕಾರ ನೀಡಿದ್ದಾರೆ ಎನ್ನಲಾಗುತ್ತಿದ್ದು, ಅದೇ ಒತ್ತಡದಿಂದ ಉದ್ಯಮಿ ಮುಮ್ತಾಜ್ ಆಲಿ ಆತ್ಮಹತ್ಯೆಗೆ ಮುಂದಾಗಿದ್ದರೇ ಎನ್ನುವ ಶಂಕೆ ಇದೆ. ಮಹಿಳೆಯ ಮೊಬೈಲ್ ನಂಬರ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದು ಆ ಮಹಿಳೆ ಕೇರಳದತ್ತ ಸಾಗಿರುವ ಸೂಚನೆ ಲಭಿಸಿದೆ.

ಕಾರಿಗೆ ಡಿಕ್ಕಿ ಹೊಡೆಸಿದ್ದು ಯಾರು ?  

ಇದೇ ವೇಳೆ, ಮುಮ್ತಾಜ್ ಆಲಿ ಕಾರು ಅಪಘಾತಕ್ಕೀಡಾದ ಸ್ಥಿತಿಯಲ್ಲಿದ್ದು, ಯಾರಾದ್ರೂ ಎದುರಿನಿಂದ ಡಿಕ್ಕಿ ಹೊಡೆಸಿ ಕಿಡ್ನಾಪ್ ಮಾಡಿದ್ದಾರೆಯೇ ಎಂಬ ಶಂಕೆಯೂ ಮೂಡಿದೆ. ಕಾರಿನ ಬಲಭಾಗದಲ್ಲಿ ಅಂದರೆ ಡ್ರೈವರ್ ಭಾಗದಲ್ಲಿ ಕಾರಿಗೆ ಡಿಕ್ಕಿಯಾಗಿರುವುದರಿಂದ ಯಾರೋ ಎದುರಿನಿಂದಲೇ ಡಿಕ್ಕಿಯಾದ ಅನುಮಾನ ಮೂಡಿಸಿದೆ. ಆದರೆ ತಾನು ಸಾಯುತ್ತೇನೆ ಎಂಬರ್ಥದಲ್ಲಿ ವಾಯ್ಸ್ ಮೆಸೇಜ್ ಹಾಕಿರುವುದರಿಂದ ಆತ್ಮಹತ್ಯೆ ಬಗ್ಗೆ ಶಂಕೆ ಹೆಚ್ಚಿದೆ. ಹೀಗಾಗಿ ಪೊಲೀಸರು ಮುಮ್ತಾಜ್ ಗೆಳೆಯರು, ಸಂಬಂಧಿಕರ ಮಾಹಿತಿ ಅನುಸರಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.

ಮೊಯ್ದೀನ್ ಬಾವಾ ಅವರ ಇನ್ನೊಬ್ಬ ಸೋದರ ಬಿ.ಎಂ ಫಾರೂಕ್ ಜೆಡಿಎಸ್ ಉಪಾಧ್ಯಕ್ಷರಾಗಿದ್ದು ಬೆಂಗಳೂರು, ಮಂಗಳೂರಿನಲ್ಲಿ ದೊಡ್ಡ ಮಟ್ಟದ ಉದ್ಯಮ ನಡೆಸುತ್ತಿದ್ದಾರೆ. ಮುಮ್ತಾಜ್ ಆಲಿ ಅವರು ಮಂಗಳೂರು ಲೈನ್ ಅಂಡ್ ಮೆರೈನ್ ಇಂಡಸ್ಟ್ರೀಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದರು. ಅಲ್ಲದೆ, ಮಂಗಳೂರಿನಲ್ಲಿ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿ ವ್ಯಕ್ತಿತ್ವ ಹೊಂದಿದ್ದರು. ಹೀಗಾಗಿ ಮುಮ್ತಾಜ್ ಆಲಿ ಉದ್ಯಮದಲ್ಲಿ ಲಾಸ್ ಆದ್ರೂ ಸೋದರರು ಗಟ್ಟಿಮುಟ್ಟು ಇರುವುದರಿಂದ ಹಣಕಾಸು ಮುಗ್ಗಟ್ಟಿನಿಂದ ಸಾವಿಗೆ ಶರಣಾಗಲಿಕ್ಕಿಲ್ಲ ಎನ್ನಲಾಗುತ್ತಿದೆ.

ಮಹಿಳೆಯ ಬ್ಲಾಕ್ಮೇಲ್ ವಿಚಾರದಲ್ಲಿ ಮನೆಯೊಳಗೆ ಕಲಹ ಏರ್ಪಟ್ಟು ಸಾವಿಗೆ ಮುಂದಾಗಿದ್ದರೇ ಎನ್ನುವ ಸಂಶಯ ಮೂಡಿದೆ. ಐದಾರು ವರ್ಷಗಳ ಹಿಂದೆ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಅಂಥದ್ದೇ ವಾತಾವರಣ ಎದುರಾಗಿದ್ದು ಜನರ ಮನಸ್ಸಿನಲ್ಲಿ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣವನ್ನು ನೆನಪಿಸಿದೆ.

Mumtaz Ali, Mangalore suicide; ಮಾಜಿ ಶಾಸಕ ಮೊಯ್ದೀನ್ ಬಾವ ಸೋದರ ಮುಮ್ತಾಜ್ ಆಲಿ ನಾಪತ್ತೆ ; ಕುಳೂರು ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ ! 

Mangalore Mumtaz Ali suicide suspect, police doubt blackmail angle, mobile found inside car indicates Blackmail angle of women from surathkal. Ndrf sdrf have not found any body so far under kulur bridge.