Mangalore crime, Police, Suicide, Puttur: ಸುದೀರ್ಘ ಡೆತ್ ನೋಟ್ ಬರೆದಿಟ್ಟು ಪುತ್ತೂರಿನಲ್ಲಿ ವ್ಯಕ್ತಿ ಆತ್ಮಹತ್ಯೆ ; ಮಂಗಳೂರು ಪೊಲೀಸರ ಕಿರುಕುಳ ಬಗ್ಗೆ ಆರೋಪ, ಇಬ್ಬರು ವಕೀಲರ ಬಗ್ಗೆಯೂ ಉಲ್ಲೇಖ, ಕಂಪನಿಗೆ ನಷ್ಟ ಉಂಟು ಮಾಡಿದ್ದಕ್ಕೆ ಒತ್ತಡ? 

18-10-24 09:34 pm       Mangalore Correspondent   ಕರಾವಳಿ

ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರು ಸುದೀರ್ಘ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದು, ಆತನ ಸಾವಿಗೆ ಮಂಗಳೂರು ಪೊಲೀಸರ ಒತ್ತಡ ಕಾರಣ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಮಂಗಳೂರು, ಅ.18: ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರು ಸುದೀರ್ಘ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದು, ಆತನ ಸಾವಿಗೆ ಮಂಗಳೂರು ಪೊಲೀಸರ ಒತ್ತಡ ಕಾರಣ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಜಯಂತ್ ಸುವರ್ಣ (40) ಮೃತಪಟ್ಟ ವ್ಯಕ್ತಿಯಾಗಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.

ಜಯಂತ್ ಬೈಕಂಪಾಡಿಯ ಪಶು ಆಹಾರ ಉತ್ಪನ್ನ ಕಂಪನಿಯಲ್ಲಿ ಕೆಲಸಕ್ಕಿದ್ದ ಸಂದರ್ಭದಲ್ಲಿ 15 ಲಕ್ಷದಷ್ಟು ವಂಚನೆ ಮಾಡಿದ್ದ ಎನ್ನುವ ಆರೋಪಗಳಿದ್ದವು. ಈ ಬಗ್ಗೆ ಕಂಪನಿ ಕಡೆಯವರು ಇತ್ತೀಚೆಗೆ ತನಿಖೆ ನಡೆಸಿದ್ದು ಹಣ ಹಿಂತಿರುಗಿಸುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಈ ನಡುವೆ, ಜಯಂತ್ ತನ್ನ ಮೇಲೆ ವಿನಾಕಾರಣ ಅಪವಾದ ಹೊರಿಸುತ್ತಿದ್ದಾರೆ, 14 ಲಕ್ಷ ಹಣಕಾಸು ವಂಚನೆ ಮಾಡಿಲ್ಲ. ಒಂದಷ್ಟು ಹಣವನ್ನು ಕಂಪನಿಗೆ ಕೊಡಿಸಿದ್ದೇನೆ ಎಂಬಿತ್ಯಾದಿಯಾಗಿ ಹೇಳಿ ಪಣಂಬೂರು ಠಾಣೆಗೆ ಇಮೇಲ್ ಮೂಲಕ ದೂರು ನೀಡಿದ್ದರು. ಪೊಲೀಸರು ಈ ಕುರಿತು ದಾಖಲೆಗಳನ್ನು ನೀಡುವಂತೆ ಠಾಣೆಗೆ ಕರೆಸಿ ವಿಚಾರಣೆಯನ್ನೂ ನಡೆಸಿದ್ದರು. ಆನಂತರ, ಠಾಣೆಗೆ ತೆರಳಿದ್ದ ಜಯಂತ್ ತನ್ನ ದೂರನ್ನು ಹಿಂಪಡೆಯುತ್ತೇನೆ, ಕೇಸು ಮುಂದುವರಿಸಲು ಬಯಸುವುದಿಲ್ಲ. ವಿಷಯ ಸೆಟಲ್ ಮಾಡಿಕೊಂಡಿದ್ದೇವೆ ಎಂದು ಲಿಖಿತವಾಗಿ ಹೇಳಿ ಬಂದಿದ್ದರು. ಹೀಗಾಗಿ ಪಣಂಬೂರು ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲು ಆಗಿರಲಿಲ್ಲ ಎನ್ನುವ ಮಾಹಿತಿ ಅಲ್ಲಿನ ಪೊಲೀಸರದ್ದು.  

ಈ ನಡುವೆ, ಅ.11ರಂದು ತನ್ನ ಮನೆಯಿಂದ ತೆರಳಿದ್ದ ಜಯಂತ್ ಮರುದಿನ ಪುತ್ತೂರಿನ ದರ್ಬೆಯ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆದಿದ್ದ. ಅ.13ರಂದು ಅಲ್ಲಿರುವಾಗಲೇ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಲಾಡ್ಜ್ ಸಿಬಂದಿ ಗಮನಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಮರುದಿನ ಕೆಎಂಸಿ ಆಸ್ಪತ್ರೆಯಲ್ಲಿ ಜಯಂತ್ ಸಾವನ್ನಪ್ಪಿದ್ದರು. ವಿಷಯ ತಿಳಿಯುತ್ತಲೇ ಪುತ್ತೂರು ಪೊಲೀಸರು ಲಾಡ್ಜ್ ನಲ್ಲಿ ತಪಾಸಣೆ ನಡೆಸಿದಾಗ ಡೆತ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯವರ ಬಗ್ಗೆ ಮತ್ತು ಸಿಸಿಬಿ ಪೊಲೀಸರ ಒತ್ತಡದ ಬಗ್ಗೆ ವಿವರವಾಗಿ ಬರೆದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಇಬ್ಬರು ವಕೀಲರು ಮತ್ತು ಪೊಲೀಸರು ಬಂದು ಹಣಕ್ಕಾಗಿ ಒತ್ತಡ ಹೇರಿದ್ದಾಗಿ ಪತ್ರದಲ್ಲಿದೆ ಎಂಬುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಘಟನೆ ಬಗ್ಗೆ ಪುತ್ತೂರು ನಗರ ಠಾಣೆಗೆ ಮೃತ ಜಯಂತ್ ಸುವರ್ಣ ಅವರ ಸೋದರಿ ದೂರು ನೀಡಿದ್ದು, ಸಾವಿನ ಬಗ್ಗೆ ಸಂಶಯಗಳಿದ್ದು ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಕೇಳಿದರೆ, ಮಾಹಿತಿ ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ. ಪುತ್ತೂರು ಪೊಲೀಸರು ಮಾತ್ರ ಡೆತ್ ನೋಟ್ ಬಗ್ಗೆಯಾಗಲೀ, ಆತ್ಮಹತ್ಯೆ ಪ್ರಕರಣದ ಬಗ್ಗೆಯಾಗಲೀ ಬಾಯಿ ಬಿಡುತ್ತಿಲ್ಲ. ಪೊಲೀಸರು ಒಟ್ಟು ವಿಚಾರವನ್ನು ಮುಚ್ಚಿ ಹಾಕುವ ಹುನ್ನಾರದಲ್ಲಿ ಇರುವಂತೆ ತೋರುತ್ತಿದೆ. ಜಯಂತ್ ಸುವರ್ಣ ಮದುವೆಯಾಗಿದ್ದು, ತಾಯಿ, ಪತ್ನಿ ಮತ್ತು ಎಂಟು ತಿಂಗಳ ಮಗುವನ್ನು ಹೊಂದಿದ್ದರು.

Mangalore man commits suicide at lodge in puttur, alleges police harrasment in death note. The deceased has been identified as Jayanth. It is said that jayanth was was working at animal food factory at Baikampady has cheated the company with their finances.