Mangalore, Babu Pilar, Ullal press club; 4500 ಪಾರ್ಥಿವ ಶರೀರಗಳಿಗೆ ಅಂತ್ಯ ಸಂಸ್ಕಾರ ; ವಿಧವೆಯರನ್ನ ಹಿಂಸಿಸುವ ಅನಿಷ್ಟ ಪದ್ಧತಿಗೆ ಬ್ರೇಕ್, ವಿಶಿಷ್ಟ ಸಮಾಜ ಸೇವಕ ಬಾಬು ಪಿಲಾರುಗೆ ಉಳ್ಳಾಲ ಪ್ರೆಸ್ ಕ್ಲಬ್ "ಗೌರವ ಅತಿಥಿ" ಸನ್ಮಾನ 

23-10-24 09:49 pm       Mangalore Correspondent   ಕರಾವಳಿ

ಅನೇಕ ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರಗಳಲ್ಲಿ ಭಾಗವಹಿಸಿದ್ದರೂ ಸಜಿಪ, ಮಂಜಲ್ಪಾದೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರು ಪಾಲಾಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳ ಅಂತ್ಯ ಸಂಸ್ಕಾರ ಮತ್ತು ಇತ್ತೀಚಿಗೆ ಮಾರಕ ಖಾಯಿಲೆಯಿಂದ ಮೃತಪಟ್ಟ ತೊಕ್ಕೊಟ್ಟಿನ‌ 16 ರ ಅಪ್ರಾಪ್ತ ಸಾತ್ವಿಕ್ ಅವರ ಶವ ಸಂಸ್ಕಾರದ ಅಂತಿಮ ವಿಧಿ ವಿದಾನಗಳನ್ನ ನೆರವೇರಿಸುವ ವೇಳೆ ದುಃಖದ ಕಟ್ಟೆ ಒಡೆದಿತ್ತು ಎಂದು ಉಳ್ಳಾಲ ಪರಿಸರದಲ್ಲಿ ಯಾರೇ ಮೃತಪಟ್ಟರೂ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಗಳನ್ನ ಫಲಾಪೇಕ್ಷೆ ಇಲ್ಲದೆ ಯಥಾವತ್ತಾಗಿ ನಡೆಸುತ್ತಿರುವ ವಿಶಿಷ್ಟ ಸಮಾಜಸೇವಕರಾದ ಬಾಬು ಪಿಲಾರು ಅವರು ಹೇಳಿ ಭಾವುಕರಾದರು.

ಉಳ್ಳಾಲ, ಅ.23: ಅನೇಕ ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರಗಳಲ್ಲಿ ಭಾಗವಹಿಸಿದ್ದರೂ ಸಜಿಪ, ಮಂಜಲ್ಪಾದೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರು ಪಾಲಾಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳ ಅಂತ್ಯ ಸಂಸ್ಕಾರ ಮತ್ತು ಇತ್ತೀಚಿಗೆ ಮಾರಕ ಖಾಯಿಲೆಯಿಂದ ಮೃತಪಟ್ಟ ತೊಕ್ಕೊಟ್ಟಿನ‌ 16 ರ ಅಪ್ರಾಪ್ತ ಸಾತ್ವಿಕ್ ಅವರ ಶವ ಸಂಸ್ಕಾರದ ಅಂತಿಮ ವಿಧಿ ವಿದಾನಗಳನ್ನ ನೆರವೇರಿಸುವ ವೇಳೆ ದುಃಖದ ಕಟ್ಟೆ ಒಡೆದಿತ್ತು ಎಂದು ಉಳ್ಳಾಲ ಪರಿಸರದಲ್ಲಿ ಯಾರೇ ಮೃತಪಟ್ಟರೂ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಗಳನ್ನ ಫಲಾಪೇಕ್ಷೆ ಇಲ್ಲದೆ ಯಥಾವತ್ತಾಗಿ ನಡೆಸುತ್ತಿರುವ ವಿಶಿಷ್ಟ ಸಮಾಜಸೇವಕರಾದ ಬಾಬು ಪಿಲಾರು ಅವರು ಹೇಳಿ ಭಾವುಕರಾದರು.

ತೊಕ್ಕೊಟ್ಟಿನ‌ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಮಂಗಳವಾರ ನಡೆದ "ತಿಂಗಳ ಬೆಳಕು-ಗೌರವ ಅತಿಥಿ" ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.1982ರಲ್ಲಿ ಉಳ್ಳಾಲಬೈಲಿನ ಬೀಡಿ ಕಟ್ಟುವ ಕಡು ಬಡವರೋರ್ವರು ಸಾವನ್ನಪ್ಪಿದ್ದರು. ಮೃತದೇಹವನ್ನು ಸುಡಲೂ ಕುಟುಂಬಕ್ಕೆ ಶಕ್ತಿ ಇಲ್ಲದಾಗ ನಾನೇ ಮುಂದೆ ನಿಂತು ವಿಧಿ, ವಿಧಾನಗಳನ್ನ ನೆರವೇರಿಸಿ ಉಚಿತವಾಗಿ ಅಂತ್ಯ ಸಂಸ್ಕಾರ ನಡೆಸಿದೆ. ಬಳಿಕ ಅನೇಕರು ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲು ನನ್ನನ್ನೇ ಕರೆಯುವುದನ್ನ ರೂಢಿ ಮಾಡಿದರು. ಕಾಸರಗೋಡಿನ ಕುಂಬ್ಳೆ ,ಉಳ್ಳಾಲದ ಸಜಿಪ ಗುಡ್ಡೆಗೂ ತೆರಳಿ ಕಟ್ಟಿಗೆಯ ಚಿತೆ ನಿರ್ಮಿಸಿ ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರ ನಡೆಸಿದ್ದೇನೆ. ಕ್ಯಾಲೆಂಡರಲ್ಲಿ ಬರೆದಿರುವ ಪ್ರಕಾರ ಇದುವರೆಗೆ ಸುಮಾರು 4500 ಅಂತ್ಯ ಸಂಸ್ಕಾರಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಭಾಗವಹಿಸಿದ್ದೇನೆ ಎಂದರು.

ಬೀಡಿ ಸ್ಕಾಲರ್ ಶಿಪ್ ಕೊಡಿಸಲು ಕಠಿಣ ಶ್ರಮ..

1977 ರಲ್ಲಿ ಸರಕಾರದ ವೆಲ್ಪೇರ್ ಸ್ಕೀಮ್ ನಿಂದ ವಿದ್ಯಾರ್ಥಿಗಳಿಗೆ ಬೀಡಿ ಸ್ಕಾರ್ಲರ್ ಶಿಪ್ ಆರಂಭವಾಗಿದ್ದರೂ ಅದು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಸ್ಕಾಲರ್ ಶಿಪ್ ಅರ್ಜಿ ಫಾರಮನ್ನು ಭರ್ತಿ ಮಾಡಲು ಎಲ್ಲರಿಗೂ ತಿಳಿದಿರಲಿಲ್ಲ. ಜಿಲ್ಲೆಯಲ್ಲಿ ನಾಲ್ಕು ಲಕ್ಷ ಬೀಡಿ ಕಾರ್ಮಿಕರಿದ್ದರು. ಅವರ ಮಕ್ಕಳಿಗೆ ಈ ಸೌಲಭ್ಯ ಸಿಗಬೇಕೆಂದು ನಾವು ಬೀಡಿ ಸ್ಕಾಲರ್ ಶಿಪ್ಪನ್ನು ಸವಾಲಾಗಿ ಸ್ವೀಕರಿಸಿ ಬಿಡುವಿಲ್ಲದೆ ಅರ್ಜಿ ಫಾರಮ್ ಭರ್ತಿ ಮಾಡುತ್ತಿದ್ದು ಪ್ರತೀ ವರುಷ ಸುಮಾರು 6,500 ಅರ್ಜಿಗಳನ್ನ ಉಚಿತವಾಗಿ ಬರೆಯುತ್ತಿದ್ದೆವು. 2016 ರ ವೇಳೆ ವಿದ್ಯಾರ್ಥಿ ವೇತನಗಳೆಲ್ಲ ಡಿಜಿಟಲೀಕರಣಗೊಂಡ ಪರಿಣಾಮ ಇದೀಗ ಅನೇಕ ಬಡ ವಿದ್ಯಾರ್ಥಿಗಳು ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ಬಾಬು ಪಿಲಾರ್ ಹೇಳಿದರು.

ವಿಧವೆಯರನ್ನ ಹಿಂಸಿಸುವ ಅನಿಷ್ಟ ಪದ್ಧತಿ ನಿಲ್ಲಿಸಿದ ಸಂತೃಪ್ತಿಯಿದೆ

ಪತಿ ಮರಣ ಹೊಂದಿದರೆ ಎಲ್ಲರ ಸಮ್ಮುಖದಲ್ಲೇ ಪತ್ನಿಯ ಮುತ್ತೈದೆತನದ ಹೆಗ್ಗುರತುಗಳಾದ ಕರಿಮಣಿ ಸರ ಎಳೆದು, ಕುಂಕುಮ ಅಳಿಸಿ ,ಬಳೆಗಳನ್ನ ಪುಡಿಗೈದು ವಿಧವೆಯರನ್ನ ಹಿಂಸಿಸುವ ಹೀನ ಸಂಸ್ಕೃತಿ ಇತ್ತು. ಇದು ಸಂಸ್ಕೃತಿಯಲ್ಲ, ಪಾಳೆಗಾರಿಕೆ ಎಂದು ಎಲ್ಲರಿಗೂ ತಿಳಿಸುವ ಕಾರ್ಯ ನಡೆಸಿದೆ. ಸಂಸ್ಕೃತಿ ಎಂದಾದರೆ ಈ ಹಿಂದೆ ಆಚರಣೆಯಲ್ಲಿದ್ದ ಸತಿ ಸಹಗಮನ ಪದ್ಧತಿಯನ್ನೂ ಮುಂದುವರಿಸುತ್ತೀರಾ ಎಂದು ಪ್ರಶ್ನಿಸಿದ್ದೆ. ನಿರಂತರ ಜನಜಾಗೃತಿಗೊಳಿಸಿದ ಪರಿಣಾಮ ಈಗ ವಿಧವೆಯರ ಕುಂಕುಮ, ಬಳೆಗಳನ್ನ ಒಡೆಯುವ ಅನಿಷ್ಟ ಪದ್ಧತಿಗಳನ್ನ ಜನರು ಬಿಟ್ಟು, ಬಿಟ್ಟಿರುವುದು ಸಂತೃಪ್ತಿ ತಂದಿದೆ ಎಂದು ಬಾಬು ಪಿಲಾರ್ ಹೇಳಿದರು.

ಅಸೈಗೋಳಿ ಅಭಯಾಶ್ರಮದ ಸಂಚಾಲಕ ಶ್ರೀನಾಥ್ ಹೆಗ್ಡೆ ಮಾತನಾಡಿ ಬಾಬು ಪಿಲಾರ್ ಅವರು ವಿಶಿಷ್ಟ ರೀತಿಯ ಸಮಾಜ ಸೇವಕರಾಗಿದ್ದಾರೆ. ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರಗಳನ್ನ ಅಚ್ಚುಕಟ್ಟಾಗಿ ಮಾಡುವ ದೊಡ್ಡ ಸೇವೆಯನ್ನ ಅವರು ಮಾಡುತ್ತಾ ಬಂದಿದ್ದಾರೆ. ಅಂಥವರನ್ನ ಸನ್ಮಾನಿಸಿದ್ದು ನನಗೆ ಸಿಕ್ಕ ಭಾಗ್ಯ. ಜೀವನದಲ್ಲಿ ದುಡ್ಡೇ ಮುಖ್ಯವಲ್ಲ, ಆತ್ಮ ಸಂತೃಪ್ತಿಯೇ ಶ್ರೇಷ್ಟವೆಂದರು.

ಸಮಾಜಸೇವಕರಾದ ಬಾಬು ಪಿಲಾರ್ ಅವರನ್ನ ಅಸೈಗೋಳಿ ಅಭಯಾಶ್ರಮದ ಸಂಚಾಲಕರಾದ ಶ್ರೀನಾಥ್ ಹೆಗ್ಡೆ ಅವರು ಸನ್ಮಾನಿಸಿ ಗೌರವಿಸಿದರು. ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಸಂತ್ ಎನ್ ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಉಪಾಧ್ಯಕ್ಷ ಆರೀಫ್ ಯು.ಆರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಸೀಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರ್, ಪತ್ರಕರ್ತರಾದ ರಜನಿಕಾಂತ್ ಬಬ್ಬುಕಟ್ಟೆ, ಗಂಗಾಧರ್ ಕೊಣಾಜೆ ಉಪಸ್ಥಿತರಿದ್ದರು.
  
ಉಪಾಧ್ಯಕ್ಷರಾದ ದಿನೇಶ್ ನಾಯಕ್ ಸ್ವಾಗತಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್ ಅತಿಥಿಯನ್ನ ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಜ್ರ ಗುಜರನ್ ವಂದಿಸಿದರು.

Mangalore 4500 bodies cremated, Ullal Press Club felicitates social worker Babu Pilar for his social work.