Kotekar Bank Robbery, Shashi Tevar, update: ಬ್ಯಾಂಕ್ ದರೋಡೆ ಕೇಸು ; ಅಜ್ಜಿನಡ್ಕದಲ್ಲಿ ಪಿಸ್ತೂಲ್ ಅಡಗಿಸಿಟ್ಟಿದ್ದನೇ ಶಶಿ ತೇವಾರ್ ; ಬೆನ್ನು ಬೆನ್ನಿಗೆ ಕಾಲಿಗೆ ಗುಂಡೇಟು ಬಿದ್ದರೂ ಬಾಯಿಬಿಡದ ಮುಂಬೈ ಗ್ಯಾಂಗ್ ಸ್ಟರ್ ! ‘ಆ ಸ್ಥಳೀಯ ವ್ಯಕ್ತಿ’ಯ ಪತ್ತೆಗಾಗಿ ಪೊಲೀಸರ ಹೆಣಗಾಟ

02-02-25 05:02 pm       Mangalore Correspondent   ಕರಾವಳಿ

ಕೋಟೆಕಾರು ದರೋಡೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಎರಡನೇ ಬಾರಿ ಪಿಸ್ತೂಲ್ ಪ್ರಯೋಗ ಮಾಡಿದ್ದಾರೆ. ಮೊದಲಿಗೆ ನಾಲ್ಕೇ ದಿನದಲ್ಲಿ ಬಂಧಿಸಲ್ಪಟ್ಟಿದ್ದ ಕಣ್ಣನ್ ಮಣಿಯನ್ನು ಘಟನೆ ನಡೆದ ಕೆಸಿ ರೋಡ್ ಬಳಿಯ ಅಲಂಕಾರಗುಡ್ಡೆಗೆ ಕರೆದೊಯ್ದು ಮಹಜರು ನಡೆಸಿದ್ದಾಗ ಪಿಸ್ತೂಲ್ ಟ್ರಿಗ್ಗರ್ ಒತ್ತಿದ್ದರು. ಇದೀಗ ಪ್ರಮುಖ ಆರೋಪಿಯೆಂದು ಗುರುತಿಸಲ್ಪಟ್ಟ ಮುರುಗನ್ ಡಿ ದೇವರ್ ನನ್ನು ಮಹಜರು ನಡೆಸುವುದಕ್ಕಾಗಿ ಕರೆದೊಯ್ದಿದ್ದಾಗ ಮತ್ತೊಮ್ಮೆ ಪಿಸ್ತೂಲ್ ಟ್ರಿಗ್ಗರ್ ಒತ್ತಿದ್ದಾರೆ.

ಮಂಗಳೂರು, ಫೆ.2: ಕೋಟೆಕಾರು ದರೋಡೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಎರಡನೇ ಬಾರಿ ಪಿಸ್ತೂಲ್ ಪ್ರಯೋಗ ಮಾಡಿದ್ದಾರೆ. ಮೊದಲಿಗೆ ನಾಲ್ಕೇ ದಿನದಲ್ಲಿ ಬಂಧಿಸಲ್ಪಟ್ಟಿದ್ದ ಕಣ್ಣನ್ ಮಣಿಯನ್ನು ಘಟನೆ ನಡೆದ ಕೆಸಿ ರೋಡ್ ಬಳಿಯ ಅಲಂಕಾರಗುಡ್ಡೆಗೆ ಕರೆದೊಯ್ದು ಮಹಜರು ನಡೆಸಿದ್ದಾಗ ಪಿಸ್ತೂಲ್ ಟ್ರಿಗ್ಗರ್ ಒತ್ತಿದ್ದರು. ಇದೀಗ ಪ್ರಮುಖ ಆರೋಪಿಯೆಂದು ಗುರುತಿಸಲ್ಪಟ್ಟ ಮುರುಗನ್ ಡಿ ದೇವರ್ ನನ್ನು ಮಹಜರು ನಡೆಸುವುದಕ್ಕಾಗಿ ಕರೆದೊಯ್ದಿದ್ದಾಗ ಮತ್ತೊಮ್ಮೆ ಪಿಸ್ತೂಲ್ ಟ್ರಿಗ್ಗರ್ ಒತ್ತಿದ್ದಾರೆ. ಎರಡು ಬಾರಿಯೂ ಆರೋಪಿಗಳು ಕಾಲಿಗೆ ಗುಂಡೇಟು ಪಡೆದಿದ್ದಾರೆ.

ಒಂದೇ ಪ್ರಕಾರದಲ್ಲಿ ಪಿಸ್ತೂಲ್ ಪ್ರಯೋಗ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೂ ಕಾರಣವಾಗಿದೆ. ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಮಹಜರು ಒಯ್ಯುವಾಗ ಸಾಕಷ್ಟು ಭದ್ರತೆಯನ್ನು ಮಾಡಿಕೊಂಡೇ ಇರುತ್ತಾರೆ. ಹಾಗಿದ್ದರೂ ಕೈಕೋಳದಲ್ಲಿದ್ದ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕೆ ಪ್ರತಿಯಾಗಿ ಪಿಸ್ತೂಲ್ ಪ್ರಯೋಗ ನಡೆಸಿದ್ದಾಗಿ ಮೇಲಧಿಕಾರಿಗಳು ಸಮರ್ಥನೆಯನ್ನೂ ಮಾಡಿಕೊಂಡಿದ್ದಾರೆ.

ಆದರೆ ಸಾರ್ವಜನಿಕ ನೆಲೆಯಲ್ಲಿ ಈ ಕುರಿತಾಗಿ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಪೊಲೀಸರನ್ನು ಹಲ್ಲೆಗೊಳಿಸುವುದು, ಪ್ರತಿಯಾಗಿ ಆರೋಪಿಗಳಿಗೆ ಗುಂಡು ಹಾರಿಸುವುದು, ಪದೇ ಪದೇ ಒಂದೇ ಪ್ರಕಾರದಲ್ಲಿ ವೈರುಧ್ಯಗಳಾಗುವುದು ಪೊಲೀಸರ ಕೆಲಸದ ಕುರಿತಾಗಿಯೇ ಸಂಶಯ ಏಳುವಂತೆ ಮಾಡಿದೆ. ಈ ಬಗ್ಗೆ ಕಮ್ಯುನಿಸ್ಟ್ ನಾಯಕ ಮುನೀರ್ ಕಾಟಿಪಳ್ಳ ಸಹಜವಾಗೇ ಎದ್ದಿರುವ ಪ್ರಶ್ನೆಗಳನ್ನು ಫೇಸ್ಬುಕ್ ಬರಹದಲ್ಲಿ ಮುಂದಿಟ್ಟಿದ್ದಾರೆ. ಅಲ್ಲದೆ, ಎರಡೆರಡು ಬಾರಿ ಪಿಸ್ತೂಲ್ ಸದ್ದು ಮಾಡಿದರೂ, ಸ್ಥಳೀಯ ವ್ಯಕ್ತಿಗಳು ಯಾರು ಕೈವಾಡ ಹೊಂದಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಕೆಣಕಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ದರೋಡೆ ಕೃತ್ಯದಲ್ಲಿ ಶಶಿ ತೇವರ್ ಎನ್ನುವ ವ್ಯಕ್ತಿಯ ಹೆಸರು ಮುನ್ನೆಲೆಗೆ ಬಂದಿದ್ದು, ಆತ ಮಂಗಳೂರಿನ ಸ್ಥಳೀಯ ವ್ಯಕ್ತಿಯೇ ಆಗಿದ್ದಾನೆ. ತನ್ನ ಹೆಸರನ್ನು ಬದಲಿಸಿಕೊಂಡು ಆರೋಪಿಗಳಿಗೆ ಹತ್ತಿರವಾಗಿರುವ ಸಂಶಯ ಇದೆ. ಇದಲ್ಲದೆ, ಶಶಿ ತೇವರ್ ಮತ್ತು ಮುರುಗನ್ ಹಾಗೂ ಯೋಶುವಾ ರಾಜೇಂದ್ರನ್ ದರೋಡೆ ಕೃತ್ಯಕ್ಕೂ ಮೊದಲು ಸಾಕಷ್ಟು ಬಾರಿ ಮಂಗಳೂರಿಗೆ ಬಂದು ಹೋಗಿದ್ದಾರೆ. ಅಲ್ಲದೆ, ದರೋಡೆ ನಡೆಸುವ ಕೆಸಿ ರೋಡ್ ಸುತ್ತಮುತ್ತ ಸಂಚರಿಸಿದ್ದಾರೆ. ಅಲಂಕಾರ ಗುಡ್ಡೆ ಹಾಗೂ ಇದೀಗ ಶೂಟೌಟ್ ಆಗಿರುವ ಅಜ್ಜಿನಡ್ಕ ಎರಡೂ ನಿರ್ಜನ ಪ್ರದೇಶಗಳಾಗಿದ್ದು, ಅಲ್ಲಿಗೆ ಬಂದು ದರೋಡೆಗೆ ಸಂಚು ನಡೆಸಿದ್ದಾರೆ ಎನ್ನುವ ಮಾಹಿತಿ ಪೊಲೀಸರದ್ದು.

ಅಜ್ಜಿನಡ್ಕದಲ್ಲಿ ಪಿಸ್ತೂಲ್ ಬಿಟ್ಟು ಹೋಗಿದ್ದ

ಇದಲ್ಲದೆ, ಎರಡು ತಿಂಗಳ ಹಿಂದೆ ಅಜ್ಜಿನಡ್ಕ ಪ್ರದೇಶಕ್ಕೆ ಬಂದಿದ್ದಾಗ ಶಶಿ ತೇವರ್ ರಿವಾಲ್ವರ್ ಒಂದನ್ನು ಇದೇ ಜಾಗದಲ್ಲಿ ಅಡಗಿಸಿಟ್ಟಿದ್ದ ಎನ್ನುವ ಮಾಹಿತಿ ಆರೋಪಿಗಳಿಗೆ ಪೊಲೀಸರಿಗೆ ಸಿಕ್ಕಿದೆ. ಅದನ್ನು ಹುಡುಕುವುದಕ್ಕಾಗಿ ಆರೋಪಿ ಮುರುಗನ್ ನನ್ನು ಅಜ್ಜಿನಡ್ಕ ಪ್ರದೇಶಕ್ಕೆ ಕರೆದೊಯ್ದಿದ್ದರು. ಇಂಥ ಸಂದರ್ಭದಲ್ಲಿಯೇ ಮುರುಗನ್ ತನ್ನನ್ನು ಹಿಡಿದುಕೊಂಡಿದ್ದ ಪೇದೆ ಮಂಜುನಾಥ್ ಅವರ ಮರ್ಮಾಂಗಕ್ಕೆ ತುಳಿದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಅದೇ ವೇಳೆಗೆ ಹಿಂದಿಗಿಂತ ಹೆಚ್ಚು ಜಾಗ್ರತೆಯಲ್ಲಿದ್ದ ಉಳ್ಳಾಲ ಠಾಣೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಗೌಡ, ತನ್ನ ಕೈಲಿದ್ದ ಪಿಸ್ತೂಲನ್ನು ಆರೋಪಿ ಕಾಲಿಗಿಟ್ಟು ಟ್ರಿಗ್ಗರ್ ಮಾಡಿದ್ದಾರೆ. ಇದರಂತೆ, ಮುರುಗನ್ ಕಾಲಿಗೆ ಸಣ್ಣಗೆ ಎನ್ನುವಂತೆ ಗುಂಡೇಟು ಬಿದ್ದಿದೆ. ಒಂದು ಬೆದರಿಸುವುದು ಮತ್ತು ಇತರ ಆರೋಪಿಗಳ ಬಗ್ಗೆ ಬಾಯಿ ಬಿಡಿಸುವ ತಂತ್ರವೂ ಇದರ ಹಿಂದಿರುತ್ತದೆ.

ಬ್ಯಾಂಕ್ ದರೋಡೆಗೆ ಎಲ್ಲ ಮಾಹಿತಿ ನೀಡಿದ್ದಾನೆ ಎನ್ನಲಾದ ಶಶಿ ತೇವರ್ ಮಂಗಳೂರಿನ ವ್ಯಕ್ತಿಯೇ ಆಗಿದ್ದಾನೆ ಎಂಬ ಬಲವಾದ ಸಂಶಯ ಪೊಲೀಸರಲ್ಲಿದೆ. ಆದರೆ ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆರೋಪಿಗಳು ನೀಡುತ್ತಿಲ್ಲ. ಹೀಗಾಗಿ ಆ ವ್ಯಕ್ತಿಯ ಪತ್ತೆ ಸಾಧ್ಯವಾಗಿಲ್ಲ ಎನ್ನುವುದು ಪೊಲೀಸರ ಅಳಲು. ಮುಂಬೈ ಗ್ಯಾಂಗ್ ಸ್ಟರ್ ಗಳಲ್ಲಿ ಈ ರೀತಿ ಹಲವು ಹೆಸರಿಟ್ಟುಕೊಂಡು ತಮ್ಮ ನೈಜತೆಯನ್ನು ಮರೆಮಾಚುವುದು ಹೊಸತಲ್ಲ. ಮುಂಬೈ ದರೋಡೆಕೋರರು ಮಂಗಳೂರು ಪೊಲೀಸರ ಕೈಗೆ ಹೊಸತಾಗಿ ಸಿಕ್ಕಿಬಿದ್ದಿರುವುದರಿಂದ ಅವರ ಬಾಯಿ ಬಿಡಿಸುವುದಕ್ಕೆ ಹೆಣಗಾಡುತ್ತಿದ್ದಾರೆ. ಸದ್ಯ ಅಜ್ಜಿನಡ್ಕದಲ್ಲಿ ಪಿಸ್ತೂಲ್ ಇದೆಯೆಂಬ ಭಾವನೆಯಿಂದ ಪೊಲೀಸರು ಮೆಟಲ್ ಡಿಟೆಕ್ಟರ್ ಬಳಸಿ ಹುಡುಕಾಟದಲ್ಲಿದ್ದಾರೆ.

Kotekar bank robbery, who is Mangalore based shashi tevar who gave the lead to Murgan D,  crime report by Headline Karnataka. Murgan the prime accused  in the Kotekar Co-opeartive bank dacoity case was injured in a police shooting while allegedly attempting to flee during an evidence recovery operation in Ullal.