Actor Prakash Raj, Mangalore: ನಾವು ಧರ್ಮ, ಬಣ್ಣ ನೋಡದೆ ಸರ್ಕಾರಗಳನ್ನು ಪ್ರಶ್ನಿಸಬೇಕು ; ವಿರೋಧ ಪಕ್ಷ ಗೆಲ್ಲಲ್ಲ, ಆಳುವ ಪಕ್ಷ ಸೋಲುತ್ತೆ, ಕಾಂಗ್ರೆಸ್ ಸರ್ಕಾರ ಲಾಸಲ್ಲಿದ್ಯಂದ್ರೆ ಏನ್ ಬಿಸ್ನೆಸ್ ಮಾಡ್ತಿದ್ದೀರಾ..? 

15-02-25 10:26 pm       Mangalore Correspondent   ಕರಾವಳಿ

ಕುಂಭ ಮೇಳ ಒಂದು ಧಾರ್ಮಿಕ ಆಚರಣೆ. ನನಗೆ ಅದರ ಮೇಲೆ ನಂಬಿಕೆ ಇಲ್ಲ. ನಾನು ಸೌಹಾರ್ದ ನಂಬೋನು. ಆದರೆ, ಇದರಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದುಗಳಲ್ಲ. ಇವರು ಒಂದು ಆಚರಣೆ, ಪೂಜೆಯಲ್ಲಿಯೂ ರಾಜಕಾರಣ ಎಳೆತಂದಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ಪರೋಕ್ಷವಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ಕುಟುಕಿದ್ದಾರೆ.  

ಮಂಗಳೂರು, ಫೆ.15: ಕುಂಭ ಮೇಳ ಒಂದು ಧಾರ್ಮಿಕ ಆಚರಣೆ. ನನಗೆ ಅದರ ಮೇಲೆ ನಂಬಿಕೆ ಇಲ್ಲ. ನಾನು ಸೌಹಾರ್ದ ನಂಬೋನು. ಆದರೆ, ಇದರಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದುಗಳಲ್ಲ. ಇವರು ಒಂದು ಆಚರಣೆ, ಪೂಜೆಯಲ್ಲಿಯೂ ರಾಜಕಾರಣ ಎಳೆತಂದಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ಪರೋಕ್ಷವಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ಕುಟುಕಿದ್ದಾರೆ.  

ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಅವರು, ಒಂದು ಸರಕಾರ, ಒಬ್ಬ ವ್ಯಕ್ತಿಯನ್ನ ಪ್ರಶ್ನಿಸಿದ್ದಾನೆ‌ ಎಂದ ಮಾತ್ರಕ್ಕೆ ವಾಟ್ಸಪ್ ಯುನಿವರ್ಸಿಟಿಗಳಲ್ಲಿ ತಪ್ಪು ಹರಡಲಾಗುತ್ತಿದೆ.‌ ನಾನು ಧರ್ಮ ವಿರೋಧಿಯಲ್ಲ, ಅವರವರ ನಂಬಿಕೆಯಿದು. ನನಗೆ ಇದರಲ್ಲಿ ನಂಬಿಕೆ ಇಲ್ಲ ಅಷ್ಟೇ. ಆದರೆ ಎಐ ಮೂಲಕ ನನ್ನ ಸ್ನಾನದ ಫೋಟೊ ಸೃಷ್ಟಿಸಿ ಕೆಣಕಿದ್ದಾರೆ. ಅಂತಹದನ್ನೆಲ್ಲ ಪ್ರಶಾಂತ ಸಂಬರ್ಗಿ ಅಂತವರು ಮಾಡುತ್ತಿದ್ದಾರೆ. ಅವರ ಮೇಲೆ ಕೇಸ್ ಫೈಲ್ ಮಾಡಿದ್ದೇನೆ. ಎಐ ಮೂಲಕ ತಪ್ಪನ್ನು ಹರಡಲಾಗುತ್ತಿದೆ, ಇದು ಅಕ್ಷಮ್ಯ ಅಪರಾಧವಾಗಿದ್ದು ಅವರ ಮಾನಸಿಕತೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು. 

ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಅಭಾವ ವಿಚಾರದ ಪ್ರಶ್ನೆಗೆ, ಚುನಾವಣೆ ಪ್ರಕ್ರಿಯೆಯಲ್ಲಿ ಮತ್ತು ರಾಜಕಾರಣದಲ್ಲಿ ವಿರೋಧ ಪಕ್ಷಗಳು ಗೆಲ್ಲಲ್ಲ. ಬದಲಾಗಿ ಆಳುವ ಪಕ್ಷಗಳು ಸೋಲುತ್ತವೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಂದ್ರೆ ಮುಂದೆ ಸೋಲುದು ಅವರೇ. ಲಾಸ್ ಇದೆ, ಹಣ ಹೊಂದಿಸಲು ಆಗುತ್ತಿಲ್ಲ ಅಂದ್ರೆ ಏನ್ ಬಿಸಿನೆಸ್ ಮಾಡುತ್ತಿದ್ದೀರಾ? ಎಲ್ಲಿ ನೀವು ತಪ್ಪುತ್ತಿದ್ದಿರಿ ಎಂದು ಯೋಚಿಸಬೇಕು. ಒಂದು ಸರ್ಕಾರ, ಒಂದು ದೇಶ ನಡೆಯೋದು ಪ್ರಜೆಗಳ ದುಡ್ಡಿನಿಂದ. ಒಂದು ದೇವಸ್ಥಾನ ನಡೆಯುವುದು ಪ್ರಜೆಗಳು ಹಾಕಿದ ಹುಂಡಿಯ ಹಣದಿಂದ. ಆಡಳಿತದಲ್ಲಿ ನೀವು ಎಲ್ಲಿ ಸೋಲುತ್ತಿದ್ದೀರಿ ? ಅದನ್ನ  ನಾವು ಪ್ರಶ್ನೆ ಮಾಡಬೇಕು. 

ಸುಪ್ರೀಂ ಕೋರ್ಟ್ ಫ್ರೀ ಬೀಸ್ ಪ್ಯಾರಸೈಟ್ ಅನ್ನುತ್ತೆ. ಬಡವರಿಗೆ ಫ್ರೀ ಬೀಸ್ ನೀಡೋದು ಪ್ಯಾರಸೈಟ್ ಹೇಗಾಗುತ್ತೆ ?  ಹಾಗಾದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡೋದು ಯಾವ ಪ್ಯಾರಸೈಟ್ ? ನಾವು ಆ ಪಕ್ಷ ಈ ಪಕ್ಷ ಅನ್ನೋದನ್ನು ನೋಡದೆ ನಮ್ಮ ಹಣವನ್ನು ಸರ್ಕಾರಗಳು ಹೇಗೆ ಉಪಯೋಗಿಸುತ್ತಿವೆ. ಧರ್ಮದ ಹಿಂದೆ, ಒಂದು ಬಣ್ಣದ ಹಿಂದೆ ಹೋಗದೆ ಸರ್ಕಾರಗಳನ್ನು ಪ್ರಶ್ನಿಸಬೇಕು. ನೀವು ಗೆದ್ದ ತಕ್ಷಣ ನೀವು ರಾಜರಲ್ಲ ಪ್ರಜಾಸೇವಕರು ಎನ್ನುವುದನ್ನು ನೆ‌ನಪಿಸಬೇಕು. 

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ಬಗ್ಗೆ ಕೇಳಿದ ಪ್ರಶ್ನೆಗೆ, ಅಂಬೇಡ್ಕರ್ ಅವರನ್ನ ಹೇಗೆ ಕೊಲ್ಲಬೇಕು ಅಂತ ಬಿಜೆಪಿ ಯೋಚನೆ ಮಾಡುತ್ತೆ. ಅತ್ತ ಕಾಂಗ್ರೆಸ್ ಅಂಬೇಡ್ಕರ್ ಅವರನ್ನ ಹೇಗೆ ಉಪಯೋಗಿಸಬೇಕು ಅಂತ ಯೋಚನೆ ಮಾಡುತ್ತೆ. ಇವರಿಬ್ಬರ ಮಾತಿನ ನಡುವಿನ ಮೌನವನ್ನು ನಾವು ಪ್ರಜೆಗಳಾಗಿ ಅರ್ಥ ಮಾಡ್ಕೋಬೇಕು. ಜನರಿಗೆ ಈಗ ಅರ್ಥವಾಗುತ್ತಿದೆ, ಆಶ್ವಾಸನೆಗಳು ಎಷ್ಟು ಸುಳ್ಳು ಅನ್ನೋದು ಜನರಿಗೆ ಅರ್ಥವಾಗುತ್ತಿದೆ. ಯಾರದೋ ಮಾತು ಕೇಳಿ ವೋಟ್ ಮಾಡುವುದರಿಂದ ಏನಾಗುತ್ತಿದೆ ಅನ್ನೋದು ಗೊತ್ತಾಗುತ್ತಿದೆ. 

ಅಮೆರಿಕಾದಿಂದ ಅಕ್ರಮ ವಲಸಿಗರ ಗಡೀಪಾರು ಕುರಿತಾಗಿ, ಅಕ್ರಮ ವಲಸಿಗರು ಅಂದ್ರೆ ಅಕ್ರಮನೇ ಅಲ್ವಾ.. ಪ್ರತಿ ದೇಶಕ್ಕೂ ಅವರದ್ದೇ ನೀತಿ ನಿಯಮ ಇರುತ್ತೆ. ಸಕ್ರಮವಾಗಿ ಹೋದ್ರೆ ಯಾರೂ ಬೇಡ ಅನ್ನಲ್ಲ. ನಮ್ಮ ದೇಶದಿಂದ ಯಾಕೆ ಹೋದ್ರು ಅನ್ನೋ ಪ್ರಶ್ನೆ ಪ್ರಮುಖವಾಗಿರುವುದು. ಎಲ್ಲರಿಗೂ ಕೆಲಸ ಇದೆ, ಅದ್ಭುತವಾದ ದೇಶ. ಮದರ್ ಆಫ್ ಡೆಮಾಕ್ರಸಿ ಅಂತೇವೆ. ಯಾಕೆ ಲಕ್ಷಾಂತರ ಜನರು ದೇಶ ಬಿಟ್ಟು ಹೋಗುತ್ತಿದ್ದಾರೆ ? ಅದನ್ನು ನಾವು ಯೋಚನೆ ಮಾಡಬೇಕು. ಮೋದಿ ಹೋಗಿ ಟ್ರಂಪ್  ಜೊತೆ ಮಾತಾಡಿ ಅದನ್ನೆಲ್ಲ ಸರಿ ಮಾಡುತ್ತಾರೆ ಅನ್ನೋದು ಮುಖ್ಯವಲ್ಲ ಎಂದರು.

Nirdiganta, an incubation centre for theatre and arts situated in K. Shetihalli, a village in Srirangapatna and promoted by actor Prakash Raj, will organise ‘Nirdigantha Utsava’ in Mangaluru for four days from February 28.