Mangalore, Ullal, B R Rao, Kannada literary conference: ಸಾಹಿತಿಗಳು ತಮಗನಿಸಿದ್ದನ್ನ ಬರೆಯಲು ಭಯಪಡುವ ಸ್ಥಿತಿಯಿದೆ, ಇದಕ್ಕೆ ಸಾಮಾಜಿಕ ಜಾಲತಾಣಗಳೇ ಕಾರಣ ; ದ.ಕ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್ ಕಳವಳ

21-02-25 07:21 pm       Mangalore Correspondent   ಕರಾವಳಿ

ಐವತ್ತು ವರ್ಷಗಳ ಹಿಂದೆ ನಾನು ಸಾಹಿತ್ಯ ಬರೆಯಲು ಆರಂಭಿಸಿದ್ದಾಗ ಅನಿಸಿದ್ದನ್ನ ನೇರವಾಗಿ ಬರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ತು. ಆದರೆ ಇಂದು ಆ ಅಭಿವ್ಯಕ್ತಿ ಸ್ವಾತಂತ್ರ್ಯ ಕುಗ್ಗುತ್ತಾ ಬಂದಿದೆ.

ಉಳ್ಳಾಲ, ಫೆ.21: ಐವತ್ತು ವರ್ಷಗಳ ಹಿಂದೆ ನಾನು ಸಾಹಿತ್ಯ ಬರೆಯಲು ಆರಂಭಿಸಿದ್ದಾಗ ಅನಿಸಿದ್ದನ್ನ ನೇರವಾಗಿ ಬರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ತು. ಆದರೆ ಇಂದು ಆ ಅಭಿವ್ಯಕ್ತಿ ಸ್ವಾತಂತ್ರ್ಯ ಕುಗ್ಗುತ್ತಾ ಬಂದಿದೆ. ಇಂದು ನಾವು ಏನಾದರೂ ಮಾತಾಡಿದರೆ ಅದಕ್ಕೆ ಇನ್ನೇನೋ ಬಣ್ಣ ಹಚ್ಚುತ್ತಾರೋ ಎಂಬ ಭೀತಿಯ ಸ್ಥಿತಿ ನಿರ್ಮಾಣವಾಗಿದೆ‌. ಇದಕ್ಕೆ ಧಾರ್ಮಿಕ, ರಾಜಕೀಯ ರಂಗಕ್ಕಿಂತಲೂ ಇಂದಿನ‌ ಸಾಮಾಜಿಕ ಜಾಲತಾಣಗಳೇ ಕಾರಣ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಇದರ ಬಗ್ಗೆ ಮುಕ್ತ ಚರ್ಚೆ ನಡೆಯಬೇಕಿದೆ ಎಂದು ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್ ಕಳವಳ ವ್ಯಕ್ತಪಡಿಸಿದರು.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಎರಡು ದಿವಸಗಳ ಕಾಲ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ 27 ನೇ  ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಹೊರ ಮತ್ತು ಒಳ ಎಂಬ ಎರಡು ಬಾಳುವೆಗಳಿವೆ. ಹೊರ ಬಾಳುವೆ ಕೇವಲ ಲೌಕಿಕ, ವ್ಯಾವಹಾರಿಕ, ನಾಗರಿಕತೆಗೆ ಸಂಬಂಧಿಸಿದೆ. ಆದರೆ ಒಳ ಬಾಳುವೆಯು ಅಂತರಂಗಕ್ಕೆ ಸಂಬಂಧ ಪಟ್ಟಿದೆ. ದೇಹದ ಹಸಿವನ್ನ ಆಹಾರದಿಂದ ನೀಗಿಸಿದರೆ, ಅಂತರಂಗದ ಹಸಿವನ್ನ ಸಾಹಿತ್ಯ, ಲಲಿತಕಲೆಯಿಂದಷ್ಟೇ ನೀಗಿಸಬಹುದಾಗಿದೆ. ಕನ್ನಡ ಎಂಬುದು ಈ ಜಗತ್ತನ್ನ ಸ್ಪಷ್ಟವಾಗಿ ಸೂಕ್ಷ್ಮವಾಗಿ ಗ್ರಹಿಸಲು ನಮಗೆ ಸಿಕ್ಕಿರುವ ಕನ್ನಡಕವಾಗಿದೆ. ಸಂಗೀತ, ಸಾಹಿತ್ಯ, ಲಲಿತಕಲೆಗಳಿಂದ‌ ಲೌಕಿಕ ಲಾಭ ಕಡಿಮೆ, ಆದರೆ ಅದರಿಂದ ಸೃಜನಶೀಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಸಂತೋಷಗಳೇ ಲಾಭಗಳಾಗಿವೆಯಾದರೂ ಇಂದು ಆ ಸ್ವಾತಂತ್ರ್ಯವು ಕುಗ್ಗುತ್ತಾ ಬಂದಿದೆ. ಸಾಹಿತ್ಯವು ಜನರಿಗೆ ತಲುಪಬೇಕಾದರೆ ಪುಸ್ತಕೋದ್ಯಮ ಬೆಳೆಯಬೇಕಿದೆ. ಆದರೆ ನಮ್ಮ ಸರಕಾರಗಳು ಪುಸ್ತಕೋದ್ಯಮಕ್ಕೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಸಾಹಿತ್ಯ, ಕಲೆಗಳಿಗೆ ನೀಡಬೇಕಾದ ಆದ್ಯತೆಗಳನ್ನ ಸರಕಾರಗಳು ನೀಡುತ್ತಿಲ್ಲ. ಕನ್ನಡ ಭಾಷೆಯಂತೂ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ದಬ್ಬಾಳಿಕೆ, ಆಕ್ರಮಣಕ್ಕೆ ತುತ್ತಾಗಿ ನಲುಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಇಂತಹ ಸಮ್ಮೇಳನದಲ್ಲಿ ಗಂಭೀರ ಚರ್ಚೆ ಆಗಲೆಂದು ಆಶಿಸಿದರು.

ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ ಸಾಹಿತ್ಯವು ಸಮಾಜದ ಪ್ರತೀ ಮನೆಗೂ ಬೇಕಾಗಿದೆ. ಸಾಹಿತ್ಯ ಎಂದರೆ ಜಗತ್ತನ್ನ ನೋಡುವ ಕಿಟಕಿ ಇದ್ದ ಹಾಗೆ. ಸಾಹಿತ್ಯವು ನಮ್ಮಲ್ಲಿ ಜ್ಞಾನ, ಉತ್ತಮ ವ್ಯಕ್ತಿತ್ವ ಬೆಳೆಸುವ ಪ್ರಬಲ ಅಸ್ತ್ರವಾಗಿದೆ. ಪೋಷಕರು ಮಕ್ಕಳನ್ನ ಬೀಚ್, ಮಾಲ್ ಗಳಿಗೆ ಹೇಗೆ ಕರ್ಕೊಂಡು‌ ಹೋಗುತ್ತೀರೋ ಅದೇ ರೀತಿ ಇಂತಹ ಕಾರ್ಯಕ್ರಮಗಳಿಗೂ ಮಕ್ಕಳನ್ನ ಕರೆತಂದು ಅವರಿಗೆ ಸಾಹಿತ್ಯದ ಪರಿಚಯ ಮಾಡಬೇಕಿದೆ. ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಫೆ.27 ರಿಂದ ಮಾ.3 ರ ತನಕ ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ ಪುಸ್ತಕ ಮೇಳ ಮತ್ತು ಸಾಹಿತ್ಯ ಮೇಳವನ್ನ ಹಮ್ಮಿಕೊಳ್ಳಲಾಗಿದೆ. ಇಂದಿನ ಕಾಲಘಟ್ಟದಲ್ಲಿ ರಾಜಕಾರಣಿಗಳಿಗೂ ಸಾಹಿತ್ಯವು ಅತ್ಯಗತ್ಯವಾಗಿದೆ. ನಾವೆಷ್ಟು ಪುಸ್ತಕ ಓದುತ್ತೇವೋ ಅದರ ಪ್ರಯೋಜನ ಸಮಾಜಕ್ಕೆ ದೊರೆಯುವಂತಾಗುತ್ತದೆ. ವಿಧಾನಸೌಧ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲ ಪ್ರತೀ ಗ್ರಾಮಗಳಲ್ಲೂ ಪಂಚಾಯತ್ ಅನುದಾನದಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆಯುವಂತಾಗಬೇಕೆಂದರು.

ಸಮ್ಮೇಳನ ಉದ್ಘಾಟನೆಗೂ ಮುನ್ನ ಅಸೈಗೋಳಿ ಕೇಂದ್ರ ಮೈದಾನದಿಂದ ಮಂಗಳ ಸಭಾಂಗಣದ ವರೆಗೆ ನಡೆದ ಕನ್ನಡ ಸಾಂಸ್ಕೃತಿಕ ದಿಬ್ಬಣವನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಉದ್ಘಾಟಿಸಿದರು. ಹಿರಿಯ ಸಾಹಿತಿ ಡಾ.ಬಿ.ಪ್ರಭಾಕರ ಶಿಶಿಲ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಲೇಖಕಿ, ಹಿರಿಯ ಸಾಹಿತಿ ಭುವನೇಶ್ವರೀ ಹೆಗಡೆ, ಮಂಗಳೂರು ವಿವಿ ಕುಲಪತಿ ಪಿ.ಎಲ್.ಧರ್ಮ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಮ್.ಪಿ ಶ್ರೀನಾಥ್, ಉಳ್ಳಾಲ ತಾಲೂಕು ಅಧ್ಯಕ್ಷ ಧನಂಜಯ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು.

"BR Lakshmana Rao Raises Alarm Over Censorship Among Writers At DK District's 27th Kannada Literary Conference Amidst Social Media Pressures" In a poignant address at the 27th Kannada Literary Conference held in DK District, esteemed senior literary figure BR Lakshmana Rao voiced deep concerns over the increasing self-censorship among writers, attributing this troubling trend to the pervasive influence of social media.