ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸಕರ ಭವನ ಅಭಿವೃದ್ಧಿಗೆ ತರಾತುರಿ ಯಾಕಿತ್ತು..? ಬೆಂಗಳೂರು ಬಿಟ್ಟು ಮಂಗಳೂರಿನಿಂದ ಮೂರು ಪಟ್ಟು ಹೆಚ್ಚಿನ ಬೆಲೆಗೆ ಸಲಕರಣೆ ಖರೀದಿಸಿದ್ಯಾಕೆ? ಸ್ಪೀಕರ್ ಸ್ಥಾನಕ್ಕೆ ಕಳಂಕ ತಂದ ಖಾದರ್ ರಾಜೀನಾಮೆ ನೀಡಲಿ 

30-10-25 07:28 pm       Mangalore Correspondent   ಕರಾವಳಿ

ಸ್ಪೀಕರ್ ಖಾದರ್ ಅವರು ಶಾಸಕರ ಭವನಗಳ ಅಭಿವೃದ್ಧಿ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರವು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸಾಂವಿಧಾನಿಕವಾದ ಸಭಾಪತಿ ಪೀಠಕ್ಕೆ ತೋರಿದ ಅಗೌರವವಾಗಿದೆ. ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಯಾಂಗ ತನಿಖೆ ಎದುರಿಸಲಿ, ಇಲ್ಲವಾದರೆ ಪ್ರತಿಭಟನೆ, ಹೋರಾಟ ನಡೆಸಲಾಗುವುದೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಎಚ್ಚರಿಸಿದರು.

ಉಳ್ಳಾಲ, ಅ.30 : ಸ್ಪೀಕರ್ ಖಾದರ್ ಅವರು ಶಾಸಕರ ಭವನಗಳ ಅಭಿವೃದ್ಧಿ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರವು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸಾಂವಿಧಾನಿಕವಾದ ಸಭಾಪತಿ ಪೀಠಕ್ಕೆ ತೋರಿದ ಅಗೌರವವಾಗಿದೆ. ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಯಾಂಗ ತನಿಖೆ ಎದುರಿಸಲಿ, ಇಲ್ಲವಾದರೆ ಪ್ರತಿಭಟನೆ, ಹೋರಾಟ ನಡೆಸಲಾಗುವುದೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಎಚ್ಚರಿಸಿದರು.

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ರಾಜ್ಯದೆಲ್ಲೆಡೆ ರಸ್ತೆಗಳು ಹೊಂಡಮಯವಾಗಿದ್ದರೂ ಗುಂಡಿ ಮುಚ್ಚಿಸಲು ಸರಕಾರದಲ್ಲಿ ಅನುದಾನವಿಲ್ಲ. ಆದರೆ ಸ್ಪೀಕರ್ ಖಾದರ್ ಅವರು 4ಜಿ ವಿನಾಯ್ತಿ ಅಡಿಯಲ್ಲಿ ಶಾಸಕರ ಭವನಗಳ ಅಭಿವೃದ್ಧಿ ಕೆಲಸಗಳನ್ನ ತರಾತುರಿಯಲ್ಲಿ ಹೇಗೆ ಕೈಗೆತ್ತಿಕೊಂಡರು. ಆರ್ಥಿಕ ಇಲಾಖೆಯ ತಿರಸ್ಕಾರದ ನಡುವೆಯೂ ಮುಖ್ಯಮಂತ್ರಿಗಳೇ ಕಾಮಗಾರಿಗೆ ಒಪ್ಪಿಗೆ ನೀಡಿರುವುದು ಅಪರಾಧವಾಗಿದೆ. ಅಭಿವೃದ್ಧಿ ಕೆಲಸಗಳು ಅನಿವಾರ್ಯವೆಂದು ಶಾಸಕರದ್ದೇ ಪೀಠಿಕೆ ಬಂದಿದ್ದರೆ ಕಾಮಗಾರಿ ಕೈಗೆತ್ತಿಕೊಳ್ಳುವುದು ಸಮರ್ಪಕ ನಡೆಯಾಗಿರುತ್ತಿತ್ತು. 

ತುರ್ತು ಸ್ಥಿತಿಗಳು, ಪ್ರಕೃತಿ ವಿಕೋಪಗಳಾದಂತಹ ಸಂದರ್ಭಗಳಲ್ಲಿ 4ಜಿ ತೆರಿಗೆ ವಿನಾಯ್ತಿ ಪಡೆದು ಕಾಮಗಾರಿ ನಡೆಸಲಾಗುತ್ತದೆ. ಆದರೆ ಶಾಸಕರ ಭವನಗಳ ಎಲ್ಲಾ ಮೂಲಭೂತ ವ್ಯವಸ್ಥೆಗಳು ಉತ್ತಮವಾಗಿದ್ದರೂ ಸಹ ಅಭಿವೃದ್ಧಿಯ ನೆಪದಲ್ಲಿ ಎಲ್ಲವನ್ನೂ‌ ವಿನಾಕಾರಣ ಬದಲಿಸಲಾಗಿದೆ. ಯಾವುದೇ ಸರಕಾರಿ ಕಾಮಗಾರಿ ನಡೆಸಲು ಟೆಂಡರ್ ಕರೆದು ನಿಯಮ ಪಾಲಿಸಬೇಕಿತ್ತು. ಆದರೆ ಇಲ್ಲಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಸರಕಾರದ ಪ್ರಧಾನ ಕಾರ್ಯದರ್ಶಿಗಳು ಕೂಡ ಇಂತಹ ಕಾಮಗಾರಿಗೆ ಯಾವ ಆಧಾರದಲ್ಲಿ ಒಪ್ಪಿಗೆ ಸೂಚಿಸಿದರೋ ಗೊತ್ತಾಗುತ್ತಿಲ್ಲವೆಂದರು.

ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳು ಬೆಂಗಳೂರು ಮತ್ತು ಪಕ್ಕದ ಚೆನ್ನೈನಂತಹ ಮಹಾನಗರಗಳಲ್ಲಿ ಲಭ್ಯವಿದ್ದರೂ ಸಹ ಮಂಗಳೂರಿನ ಪಂಪ್ವೆಲ್ ನ ಸಂಸ್ಥೆಯಿಂದ‌ ಸರಬರಾಜು ಮಾಡಿಸಲಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಮೋಹನ್ ರಾಜ್ ಹೇಳಿದರು. ಪಂಪ್ ವೆಲ್‌ನ ಆಸ್ಕಿನ್ ಆಟೊಮೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ‌ ಆನ್ಲೈನ್ ಮಾರ್ಕೆಟಲ್ಲಿ ರೂ.16,000 ಕ್ಕೆ ದೊರೆಯುವ ಸ್ಮಾರ್ಟ್ ಡೋರ್ ಲಾಕಿಗೆ ರೂ.49,000, ರೂ.9,000 ಕ್ಕೆ ಸಿಗುವ ಸ್ಮಾರ್ಟ್ ಸೇಫ್ ಲಾಕರ‍್ಸ್ ಗೆ ರೂ.35,000 ಹಾಗೂ ಸ್ಮಾರ್ಟ್ ಎನರ್ಜಿ ಮಾನಿಟರಿಂಗ್ ಸೊಲ್ಯುಷನ್ಸ್ ಗೆ ತಲಾ ರೂ.90,500 ರಂತೆ ಒಟ್ಟು ರೂ.2,99,47,500 ಬೆಲೆಯ ಸೊತ್ತುಗಳ ಸರಬರಾಜು ಮಾಡಲಾಗಿದೆ. ಪ್ರತೀ ಸಲಕರಣೆಗಳಿಗೂ ಮೂರು ಪಟ್ಟು ಜಾಸ್ತಿ ಬೆಲೆ ವಿಧಿಸಿ ಜನಸಾಮಾನ್ಯರ ತೆರಿಗೆಯ ಕೋಟ್ಯಂತರ ರೂಪಾಯಿಗಳನ್ನ ಪೋಲು ಮಾಡಲಾಗಿದೆ. ಈ ಬಗ್ಗೆ ಸ್ಪೀಕರ್ ಖಾದರ್ ಮಾತ್ರ ಅಲ್ಲ ಸಲಕರಣೆಗಳನ್ನ ಸರಬರಾಜು ಮಾಡಿರುವ ಕಂಪನಿಯೂ ಸ್ಪಷ್ಟನೆ ಕೊಡಬೇಕಿದೆಯೆಂದರು.

ವಿಧಾನಸೌಧದಲ್ಲಿ ನಾಲ್ಕು ದಿವಸಗಳ ಕಾಲ ನಡೆದಿದ್ದ ಪುಸ್ತಕ ಮೇಳಕ್ಕೆ ದಿನವೊಂದಕ್ಕೆ ಒಂದು ಕೋಟಿ ರೂಪಾಯಿಗಳ ವ್ಯಯ ಮತ್ತು ಸ್ಪೀಕರ್ ಖಾದರ್ ಅವರು ನಡೆಸುವ ವಿದೇಶ ಪ್ರಯಾಣಗಳ ಖರ್ಚು, ವೆಚ್ಚಗಳ ಬಗ್ಗೆ ಮಾಹಿತಿ ತಿಳಿಯಲು ಸ್ಪೀಕರ್ ಅವರ ಕಚೇರಿಯನ್ನೂ ಮಾಹಿತಿ ಹಕ್ಕಿನಡಿಗೆ ತರಬೇಕಿದೆ. ಇತಿಹಾಸದಲ್ಲೇ ಸ್ಪೀಕರ್ ಸ್ಥಾನಕ್ಕೆ ಬಂದಿರುವ ದೊಡ್ಡ ಕಳಂಕ ಇದಾಗಿದೆ. ಆರೋಪ ಮಾಡಿರುವವರನ್ನು ಅಪಹಾಸ್ಯ ಮಾಡುವ ಬದಲು, ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ‌ ನೀಡಿ ನ್ಯಾಯಾಂಗ ತನಿಖೆ ಎದುರಿಸಲಿ. ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗ ಖುದ್ದಾಗಿ ತಾವೇ ಲೋಕಾಯುಕ್ತಕ್ಕೆ ತೆರಳಿ ದೂರನ್ನು ನೀಡಿ ತನಿಖೆ ನಡೆಸುವಂತೆ ಕೋರಿದ್ದರು. ಅದೇ ಮಾದರಿಯಲ್ಲಿ ಸ್ಪೀಕರ್ ಖಾದರ್ ಕೂಡ ತಪ್ಪು ಮಾಡದೇ ಇದ್ದಲ್ಲಿ‌ ತಾನೇ ಖುದ್ದಾಗಿ ನ್ಯಾಯಾಂಗ ತನಿಖೆ ಎದುರಿಸಲಿ ಎಂದು ಮೋಹನ್ ರಾಜ್ ಸವಾಲು ಹಾಕಿದರು.

ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್, ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಉಪಾಧ್ಯಕ್ಷರಾದ  ಸುರೇಶ್ ಆಳ್ವ, ಹುಕ್ರಪ್ಪ ನಾಯ್ಕ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

BJP leaders in Dakshina Kannada have demanded the resignation of Assembly Speaker U.T. Khader, alleging large-scale corruption in the name of “development works” at MLA quarters. They claimed the project was taken up hastily and without following due procedure, while the government has “no funds even to fill potholes” on state roads.