ಬ್ರೇಕಿಂಗ್ ನ್ಯೂಸ್
26-05-26 09:02 pm HK News Staffer ಕರಾವಳಿ
ಮಂಗಳೂರು, ಮೇ 26: ಕೆಲವೊಮ್ಮೆ ಭ್ರಷ್ಟಾಚಾರ ಎಷ್ಟರಮಟ್ಟಿಗೆ ರಾಜಾರೋಷ ಆಗಿರತ್ತೆ ಅಂದ್ರೆ, ಅದರ ಬಗ್ಗೆ ಪ್ರಶ್ನೆ ಮಾಡಿದವರೇ ಮೂರ್ಖರಾಗಿ ಬಿಡ್ತಾರೆ. ಅದಕ್ಕೆ ಸಾಕ್ಷಿಯಾದವರಂತೂ ದೂರವೇ ಇದ್ದು ಬಿಡುತ್ತಾರೆ. ಹಾಗಾಗಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ಪಂಚಾಯತ್ ಮಟ್ಟದ ಪುಢಾರಿಗಳು, ಆಡಳಿತ- ವಿರೋಧ ಪಕ್ಷ ಎಂಬ ಭೇದ ಇಲ್ಲದೆ ಎಲ್ಲರೂ ತಿಂದು ತೇಗುವುದರಲ್ಲೂ ಸ್ಪರ್ಧೆಗೆ ಬೀಳುತ್ತಾರೆ. ಕಟೀಲು ಬಳಿಯ ಶಿಬರೂರಿನಲ್ಲಿ ನಂದಿನಿ ನದಿಯ ಒಡಲನ್ನು ಬಗೆದು ಮರಳೆತ್ತಿರುವುದನ್ನು ನೋಡಿದರೆ ಬಕಾಸುರರು ಒಂದೇ ಸಲಕ್ಕೆ ಬಾಯಿ ಹಾಕಿರುವಂತೆ ಕಾಣುತ್ತಿದೆ.
ಹಿಂದೆ ಮೆನ್ನಬೆಟ್ಟು ಪಂಚಾಯತ್, ಈಗ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಗಂದಡಿಯಿಂದ ಶಿಬರೂರು ಕಡೆಗೆ ಹರಿಯುವ ನಂದಿನಿ ನದಿಯ ಈಗಿನ ಸ್ಥಿತಿಯನ್ನು ನೋಡಿದರೆ ಅಲ್ಲಿ ಗದ್ದೆಯನ್ನು ಉತ್ತು ನೇಜಿ ಹಾಕಲು ರೆಡಿ ಮಾಡಿಟ್ಟ ಹಾಗಿದೆ. ಗದ್ದೆಯ ಮಣ್ಣು ಎದ್ದಿರುವಂತೆ ಹಳದಿ ಬಣ್ಣದ ಕೆಸರು ಮಣ್ಣು ನೀರಿನಲ್ಲಿ ಕಲಸಿಟ್ಟಂತೆ ಹೊಳೆಯುತ್ತಿದೆ. ಅಲ್ಲಲ್ಲಿ ಕೊಳಕೆ ಗದ್ದೆಗಳನ್ನು ಹದ ಮಾಡಿಟ್ಟಂತೆ ನದಿಯ ಉದ್ದಕ್ಕೂ ಓರೆ ಕೋರೆಯಲ್ಲಿ ಕೆಸರಿನ ಬಣ್ಣ ಓಕುಳಿ ಆಡುತ್ತಿದೆ. ಇದಕ್ಕೆಲ್ಲ ಕಾರಣ, ರಾತ್ರಿ ಹಗಲೆನ್ನದೆ ನದಿಯನ್ನು ಜೆಸಿಬಿ ಬಳಸಿ ಅಗೆಯುತ್ತಿರುವಾಗ ಸುಮ್ಮನೆ ಕುಳಿತ ಅಲ್ಲಿನ ಸಜ್ಜನ ಜನರು ಮತ್ತು ಆಡಳಿತ ವ್ಯವಸ್ಥೆ.
ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಇಲಾಖೆಯಲ್ಲಿ ಹೆಗ್ಗಣಗಳೇ ತುಂಬಿಕೊಂಡಿದ್ದು ಇವರದ್ದೇ ಕೃಪೆಯಲ್ಲಿ ಸ್ಥಳೀಯ ಪುಢಾರಿ ಕಿರಣ್ ಶೆಟ್ಟಿ ಎನ್ನುವಾತ ಶಿಬರೂರು ಭಾಗದಲ್ಲಿ ನಂದಿನಿ ನದಿಯನ್ನು ಪೂರ್ತಿ ಬಗೆದು ಬಿಟ್ಟಿದ್ದಾನೆ. ಎಷ್ಟರ ಮಟ್ಟಿಗೆ ಅಂದ್ರೆ, ಉತ್ತರ ಪ್ರದೇಶ ಮೂಲದ ಕಾರ್ಮಿಕರನ್ನು ನದಿಯ ಆಸುಪಾಸಿನಲ್ಲಿ ಅಕ್ರಮ ಟೆಂಟ್ ಹಾಕಿಸಿ, ಸಂಜೆಯಿಂದ ರಾತ್ರಿಯಿಡೀ ಜೆಸಿಬಿ ಬಳಸಿ ನದಿಯನ್ನು ಅಗೆಯುವುದು, ಅದರಿಂದ ಮರಳನ್ನು ಸೋಸಿ ತೆಗೆದು ಟಿಪ್ಪರ್ ಲಾರಿಯಲ್ಲಿ ತುಂಬಿಸಿ ಸಾಗಿಸುವುದು ಇವರ ಕಾಯಕ ಆಗಿಬಿಟ್ಟಿದೆ. 7-8 ತಿಂಗಳಲ್ಲಿ ಇಲ್ಲಿಂದ ತೆಗೆದಿರುವ ಮರಳು ಏನಿಲ್ಲ ಅಂದ್ರೂ ಹತ್ತು ಸಾವಿರ ಟನ್ ಆಗಬಹುದು ಎನ್ನುತ್ತಾರೆ ಸ್ಥಳೀಯರು.
ಮೊನ್ನೆ ಒಂದು ಯೂಟ್ಯೂಬ್ ಚಾನೆಲ್ನವರು ಇದೇ ಶಿಬರೂರಿನಲ್ಲಿ ನದಿಯಲ್ಲಿ ಹೊಂಡ ತೆಗೆದ ಜಾಗಕ್ಕೆ ಗಣಿ ಇಲಾಖೆಯ ಅಧಿಕಾರಿಯನ್ನೇ ಕರೆದೊಯ್ದು ದಾಳಿಯ ನಾಟಕ ಮಾಡಿಸಿದ್ದರು. ಆದರೆ ಮೇಯಲು ನಿಂತ ಹೆಗ್ಗಣಗಳನ್ನೇ ಗೆಣಸು ಅಗೆದಿರುವಲ್ಲಿಗೆ ಕರೆದೊಯ್ದರೆ ಏನಾಗುತ್ತದೆ ಹೇಳಿ. ಮೇಡಮ್ ಇಲ್ಲಿ ನೋಡಿ ಎನ್ನುತ್ತ ಅಲ್ಲಿನ ಸ್ಥಿತಿಯನ್ನು ತೋರಿಸಿದ ವಿಡಿಯೋ ವೈರಲ್ ಆಗಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಇಲ್ಲಿ ನದಿಯನ್ನು ರಾಜಾರೋಷವಾಗಿ ಬಗೆದು ಮುಕ್ಕುವ ಸ್ಥಿತಿಯಾಗಿದೆ. ಇದಕ್ಕೆ ಆಡಳಿತ ಕಾಂಗ್ರೆಸ್ ಪಕ್ಷದ ನಾಯಕರೂ, ಬಿಜೆಪಿ ನಾಯಕರೂ ಸಾಥ್ ನೀಡಿದ್ದಾರೆ. ಹೀಗಾಗಿ ಅಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವ ಮಾತೂ ಕೇಳಿಬಂದಿದೆ.






ಆಡಳಿತ- ವಿಪಕ್ಷ ಎರಡೂ ಸೇರಿ ತಿನ್ನಲು ತೊಡಗಿದರೆ ಜನಸಾಮಾನ್ಯ ಏನು ಮಾಡಕ್ಕಾಗುತ್ತೆ ಹೇಳಿ. ನಂದಿನಿ ನದಿಯ ಬಗ್ಗೆ ಒಂದಿನಿತು ಕಾಳಜಿ ಇದ್ದ ಕೆಲವರು ಗಣಿ ಇಲಾಖೆಗೆ ಮತ್ತು ಪಂಚಾಯತ್ ಮಟ್ಟದಲ್ಲಿ ದೂರು ನೀಡಿದ್ದಾರೆ. ಆದರೆ ಹೆಗ್ಗಣಗಳೆಲ್ಲ ನಾವೆಲ್ಲ ಬಕಾಸುರನ ವಂಶದವರು ಎಂದು ಒಂದೇ ಸಾಲಿನಲ್ಲಿ ಕುಳಿತ ಮೇಲೆ ಏಕ್ಷನ್ ಆಗುವುದುಂಟೇ..? ದಿನವೂ ಏಳೆಂಟು ಜೆಸಿಬಿಗಳಲ್ಲಿ ನದಿಯನ್ನು ಬಗೆಯುತ್ತಾ 20ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳಲ್ಲಿ ಇಲ್ಲಿಂದ ಮರಳನ್ನೆತ್ತಿ ಸಾಗಿಸುತ್ತಿದ್ದಾರೆ. ರಾತ್ರಿಯಿಡೀ ಕಾರ್ಮಿಕರು ಮರಳೆತ್ತುವ ಕೆಲಸ ಮಾಡಿ ಅಲ್ಲಿಯೇ ಹಾಕಿರುವ ಟೆಂಟ್ ಗಳಲ್ಲಿ ಹಗಲಿನಲ್ಲಿ ನಿದ್ದೆ ಹೊಡೆಯುತ್ತಾರೆ. ಇದೆಲ್ಲವೂ ಶಾಸಕರಾದಿಯಾಗಿ ಎಲ್ಲರಿಗೂ ತಿಳಿದಿದ್ದರೂ, ನದಿಯನ್ನು ಈ ಪರಿ ಗುಂಡಿ ತೋಡಿ ತೇಗಿದ್ದಾರೆ ಎನ್ನುವ ಅಂದಾಜು ಇರಲಿಕ್ಕಿಲ್ಲ.
ವಿಚಿತ್ರ ಏನಪ್ಪಾಂದ್ರೆ, ಮೊನ್ನೆ ಯೂಟ್ಯೂಬ್ ಚಾನೆಲ್ಲಿನವರು ಸ್ಥಳಕ್ಕೆ ತೆರಳಿ ಅಲ್ಲಿನ ಕಂತ್ರಿಗಳನ್ನು ತೋರಿಸಿದ್ದ ವಿಡಿಯೋ ವೈರಲ್ ಆಗಿದ್ದರೂ, ಒಂದು ಕೇಸು ಜಡಿಯುವುದಕ್ಕೂ ಗಣಿ ಇಲಾಖೆ ಮುಂದಾಗಿಲ್ಲ ಅಂದರೆ ಇಲ್ಲಿನ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿ ಹೋಗಿದೆ ಅನ್ನೋದನ್ನು ತೋರಿಸತ್ತೆ. ಹೀಗಾಗಿ ಅಲ್ಲಿ ಝಂಡಾ ಹೂಡಿರುವ ಯುಪಿಯ ಕಾರ್ಮಿಕರಾಗಲೀ, ಮರಳು ಮಾರಿ ಹೊಟ್ಟೆ ಉಬ್ಬಿಸಿಕೊಂಡಿರುವ ದಲ್ಲಾಳಿಗಳಾಗಲೀ ಅಲ್ಲಾಡಿಲ್ಲ. ತಮ್ಮದು ಸರ್ಕಾರಿ ಕೆಲಸ ಎನ್ನುವ ದೌಲತ್ತಿನಲ್ಲಿ ಮರಳು ಲೂಟಿ ಹೊಡೆಯುತ್ತಲೇ ಇದ್ದಾರೆ. ಇನ್ನು ಅಲ್ಲಿನ ಜನಾನೇ ಏನ್ರೀ ಡೀಸಿ ಸಾಹೇಬ್ರೇ, ಉಸ್ತುವಾರಿ ಸಚಿವರೇ ನೀವೆಲ್ಲ ಮರಳಿನ ಹಣ ಎಣಿಸೋಕೆ ನಿಂತಿದ್ದೀರಾ ಎಂಬ ಪ್ರಶ್ನೆಯನ್ನಷ್ಟೇ ಕೇಳಬೇಕು.
ಇನ್ನಂತೂ ಮಳೆಗಾಲ ಶುರುವಾಯ್ತು, ಮಳೆ ಧೋ ಎನ್ನುವಾಗ ಮರಳೆತ್ತುವುದಕ್ಕೆ ಚೂರು ಸ್ಟಾಪ್ ಬೀಳಬಹುದು. ಆದರೆ ಮಳೆಗಾಲದಲ್ಲಿ ನಂದಿನಿ ನಲಿಯುತ್ತ ಹರಿವಾಗ, ಈ ಭಾಗದಲ್ಲಿ ಯಾರಾದ್ರೂ ನದಿ ದಾಟುವುದಕ್ಕೆ, ದನಗಳು ಅತ್ತ ಸಾಗಿದರೆ ದುರ್ಗತಿಯೇ ಆದೀತು. ಹೊಂಡಕ್ಕೆ ಬಿದ್ದವರು ಮೇಲೆ ಬರಲಾಗದೆ ದುರಂತವೇ ನಡೆದೀತು. ಆಡಳಿತ ವ್ಯವಸ್ಥೆ ಬೇರೇನೂ ಮಾಡದಿದ್ದರೂ ಅಮಾಯಕರು ಜೀವ ಕಳಕೊಳ್ಳುವ ಸ್ಥಿತಿಯಾಗದಂತೆ, ನೋಡಿಕೊಂಡು ಪುಣ್ಯ ಕಟ್ಟಿಕೊಳ್ಳಲಿ.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 08:53 pm
HK News Staffer
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm
Suhas Shetty, Mangalore, NIA: ಸುಹಾಸ್ ಶೆಟ್ಟಿ ಹ...
23-06-26 02:15 pm