Mithun Rai, Dk Shivakumar CM, Mangalore: ಮುಂದಿನ ವರ್ಷ ಡಿಕೆಶಿ ಮುಖ್ಯಮಂತ್ರಿ ಆಗಿಯೇ ಬರ್ತಾರೆ! ನವರಾತ್ರಿ 'ಪಿಲಿನಲಿಕೆ'ಯಲ್ಲಿ ಮಿಥುನ್‌ ರೈ ನೀಡಿದ್ದ ಹೇಳಿಕೆ ವೈರಲ್, ಭವಿಷ್ಯ ನಿಜವಾಯ್ತೆಂದು ಜಾಲತಾಣದಲ್ಲಿ ಚರ್ಚೆ

02-06-26 01:18 pm       HK News Staffer   ಕರಾವಳಿ

ಮುಂದಿನ ವರ್ಷ ನವರಾತ್ರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬರಬೇಕು, ಬರಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಕಳೆದ ನವರಾತ್ರಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ಈಗ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದ್ದು, ಮಿಥುನ್ ರೈ ಮಾತು ನಿಜವಾಯ್ತು ಎನ್ನುವ ಮಾತು ಕರಾವಳಿಯಲ್ಲಿ ಚರ್ಚೆಗೆ ಕಾರಣವಾಗಿದೆ.

ಮಂಗಳೂರು, ಜೂನ್ 2 : ಮುಂದಿನ ವರ್ಷ ನವರಾತ್ರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬರಬೇಕು, ಬರಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಕಳೆದ ನವರಾತ್ರಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ಈಗ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದ್ದು, ಮಿಥುನ್ ರೈ ಮಾತು ನಿಜವಾಯ್ತು ಎನ್ನುವ ಮಾತು ಕರಾವಳಿಯಲ್ಲಿ ಚರ್ಚೆಗೆ ಕಾರಣವಾಗಿದೆ. 

2025ರ ಅಕ್ಟೋಬರ್ ನಲ್ಲಿ ನಡೆದ ಮಿಥುನ್ ರೈ ನೇತೃತ್ವದ 10ನೇ ವರ್ಷದ ಪಿಲಿ ನಲಿಕೆ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬಂದಿದ್ದರು. ಈ ವೇಳೆ, ಮಿಥುನ್ ರೈ ಮಾತನಾಡುತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಬಾರಿ ಡಿಸಿಎಂ ಆಗಿ ಬಂದಿದ್ದಾರೆ. ಮುಂದಿನ ಬಾರಿಯ ಪಿಲಿ ನಲಿಕೆ ಕಾರ್ಯಕ್ರಮಕ್ಕೆ ಖಂಡಿತವಾಗಿಯೂ ಮುಖ್ಯಮಂತ್ರಿ ಆಗಿ ಬರಲಿದ್ದಾರೆ. ಆ ರೀತಿಯ ಆಶೀರ್ವಾದವನ್ನು ದೇವಿ ಅನುಗ್ರಹಿಸಲಿದ್ದಾರೆ ಎಂದು ಹೇಳಿದ್ದರು.‌ ಬಹಿರಂಗ ಸಭೆಯಲ್ಲಿ ನೀಡಿದ್ದ ಹೇಳಿಕೆಗೆ ಭಾರೀ ಕರತಾಡನವೂ ಬಂದಿತ್ತು. 

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಇತರೇ ಕಾಂಗ್ರೆಸ್ ನಾಯಕರು ಕೂಡ ಡಿ.ಕೆ. ಶಿವಕುಮಾರ್ ಅವರ ನಾಯಕತ್ವ ಹಾಗೂ ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ಪ್ರಶಂಸಿಸಿ, ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮಿಥುನ್ ರೈ ದಕ್ಷಿಣ ಕನ್ನಡದ ಅಭಿವೃದ್ಧಿಗೆ ಒತ್ತಾಯ ಮಾಡುತ್ತಾ, “ಬೆಂಗಳೂರಿನಂತೆ ವೇಗದಲ್ಲಿ ಮಂಗಳೂರು ಕೂಡ ಬೆಳೆಯಬೇಕು. ಅದಕ್ಕಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು” ಎಂದು ಹೇಳಿದ್ದರು. ಸ್ಥಳೀಯ ಹುಲಿ ವೇಷಧಾರಿ ಕಲಾವಿದರ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಕುರಿತಾಗಿಯೂ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ತಾವು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದೂ, ಜನರ ಪ್ರೀತಿ ಹಾಗೂ ಆತ್ಮೀಯತೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದೂ ಹೇಳಿದ್ದರು. ದಕ್ಷಿಣ ಕನ್ನಡ ಜಿಲ್ಲೆ ದೇಶದ ಪ್ರಮುಖ ಸಾಂಸ್ಕೃತಿಕ ಮತ್ತು ಶಕ್ತಿಶಾಲಿ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ವಿಶೇಷ ಅಂದರೆ, ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಮಿಥುನ್ ರೈ ನೇತೃತ್ವದಲ್ಲಿ ಡಿಕೆಶಿಗೆ ನೀಡಲಾಗಿದ್ದ ಗೌರವ ಫಲಕದಲ್ಲೂ “2026ರ ಸಿಎಂ ಡಿಕೆ ಶಿವಕುಮಾರ್” ಎಂದು ಉಲ್ಲೇಖಿಸಲಾಗಿತ್ತು.‌