ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ ವ್ಯಕ್ತಿ ; ತುರ್ತು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ಪೊಲೀಸ್ ಸಿಬಂದಿ !

12-06-26 10:48 pm       HK News Desk   ಕರಾವಳಿ

ರಾತ್ರಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಎದೆನೋವಿನಿಂದ ಅಸ್ವಸ್ಥರಾದ ವ್ಯಕ್ತಿಯೊಬ್ಬರಿಗೆ ಸ್ಥಳದಲ್ಲೇ ಸಿಪಿಆರ್ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಪ್ರಾಣ ಉಳಿಸಿದ ಅಪರೂಪದ ಪ್ರಸಂಗ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ಗೂಡಿನಬಳಿ ಎಂಬಲ್ಲಿ ನಡೆದಿದೆ.

ಬಂಟ್ವಾಳ, ಜೂನ್ 12: ರಾತ್ರಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಎದೆನೋವಿನಿಂದ ಅಸ್ವಸ್ಥರಾದ ವ್ಯಕ್ತಿಯೊಬ್ಬರಿಗೆ ಸ್ಥಳದಲ್ಲೇ ಸಿಪಿಆರ್ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಪ್ರಾಣ ಉಳಿಸಿದ ಅಪರೂಪದ ಪ್ರಸಂಗ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ಗೂಡಿನಬಳಿ ಎಂಬಲ್ಲಿ ನಡೆದಿದೆ.

ಬಂಟ್ವಾಳ ನಗರ ಠಾಣೆಯ ಸಿಪಿಸಿ ವಿನೋದ್ ನಾಯ್ಕ್ ಮತ್ತು ಹೋಮ್ ಗಾರ್ಡ್ ಜಯಗಣೇಶ್ ಜೂನ್ 11ರ ಮಧ್ಯರಾತ್ರಿ ಬಿಸಿ ರೋಡ್ ಬಳಿಯ ಗೂಡಿನಬಳಿ, ನಂದಾವರ ಭಾಗದಲ್ಲಿ ಕರ್ತವ್ಯದಲ್ಲಿದ್ದರು. ಮಧ್ಯರಾತ್ರಿ ಕರ್ತವ್ಯ ನಿರತರಾಗಿದ್ದ ವೇಳೆ ಮನೆಯೊಂದರಲ್ಲಿ ಎದೆನೋವಿನಿಂದ ವ್ಯಕ್ತಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಏನು ಮಾಡುವುದೆಂದು ತೋಚದೆ ಮನೆಯವರು ಬೊಬ್ಬೆ ಹಾಕತೊಡಗಿದ್ದರು.‌ 

ವಿಷಯ ತಿಳಿದು ಮನೆಯ ಒಳಕ್ಕೆ ತೆರಳಿದ ಇಬ್ಬರು ಪೊಲೀಸರು ಹೃದಯಾಘಾತದಿಂದ ಕುಸಿದು ಬಿದ್ದಿದ್ದ ವ್ಯಕ್ತಿಯನ್ನು ಉಪಚರಿಸಿ, ತತ್ಕಾಲಕ್ಕೆ ಉಸಿರಿನ ಸಮಸ್ಯೆ ಆಗದಂತೆ ನೋಡಿಕೊಂಡು ತುರ್ತು ಆಂಬುಲೆನ್ಸ್ ತರಿಸಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.‌ 50 ವರ್ಷದ ವ್ಯಕ್ತಿಗೆ ಹೃದಯಾಘಾತ ಆದರೂ ತುರ್ತು ಚಿಕಿತ್ಸೆ ಕೊಡಿಸಿದ್ದರಿಂದ ಅವರ ಪ್ರಾಣ ಉಳಿದಿದೆ. ಪೊಲೀಸ್ ಸಿಬಂದಿಯ ಸಕಾಲಿಕ ಕೆಲಸಕ್ಕೆ ಸಾರ್ವಜನಿಕರ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.