ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವಿನೂತನ ಪರಿಕಲ್ಪನೆ, ರಸ್ತೆ ಬದಿ ತಲೆಯೆತ್ತಿದ ಬಸ್! ಯುವಕರ ಕೆಲಸಕ್ಕೆ ಭಾರೀ ಮೆಚ್ಚುಗೆ!

16-06-26 11:35 am       HK News Staffer   ಕರಾವಳಿ

ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು ದೂರದಿಂದ ನೋಡಿದರೆ ನಿಜವಾಗಿಯೂ ಬಸ್ ನಿಂತಿದೆಯೇನೋ ಎಂದು ಭ್ರಮಿಸುವಂತಹ ವಿಶಿಷ್ಟ ಬಸ್ ತಂಗುದಾಣ ಮಂಗಳೂರು ಹೊರವಲಯದ ಗುರುಪುರ ಸಮೀಪದ ಬಂಡಸಾಲೆಯಲ್ಲಿ ನಿರ್ಮಾಣವಾಗಿದ್ದು, ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಮಂಗಳೂರು, ಜೂನ್ 15 : ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು ದೂರದಿಂದ ನೋಡಿದರೆ ನಿಜವಾಗಿಯೂ ಬಸ್ ನಿಂತಿದೆಯೇನೋ ಎಂದು ಭ್ರಮಿಸುವಂತಹ ವಿಶಿಷ್ಟ ಬಸ್ ತಂಗುದಾಣ ಮಂಗಳೂರು ಹೊರವಲಯದ ಗುರುಪುರ ಸಮೀಪದ ಬಂಡಸಾಲೆಯಲ್ಲಿ ನಿರ್ಮಾಣವಾಗಿದ್ದು, ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ. 

ಗುರುಪುರದ ವಿ2 ಗೈಸ್ ಯುವಕ ಸಂಘದ ಸದಸ್ಯರು ತಮ್ಮ ಸಾಮಾಜಿಕ ಕಾಳಜಿ ಹಾಗೂ ಸೃಜನಶೀಲತೆಯನ್ನು ಒಗ್ಗೂಡಿಸಿ, ನಿಜವಾದ ಬಸ್ ಮಾದರಿಯಲ್ಲೇ ಬಸ್ ತಂಗುದಾಣವನ್ನು ವಿನೂತನವಾಗಿ ನಿರ್ಮಿಸಿದ್ದಾರೆ. ವಿಶೇಷ ವಿನ್ಯಾಸ, ಆಕರ್ಷಕ ಬಣ್ಣಗಳ ಬಳಕೆ ಮತ್ತು ಬಸ್‌ನ ಪ್ರತಿರೂಪದಂತೆ ರೂಪುಗೊಂಡಿರುವ ಈ ತಂಗುದಾಣ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

₹7 ಲಕ್ಷ ವೆಚ್ಚದಲ್ಲಿ ನಿರ್ಮಾಣ

ಬಸ್ ತಂಗುದಾಣವನ್ನು ಸುಮಾರು ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಹಿಂದೆ ಇದ್ದ ಬಸ್ ನಿಲ್ದಾಣ ಶಿಥಿಲಾವಸ್ಥೆಗೆ ತಲುಪಿದ್ದರಿಂದ, ಸಾರ್ವಜನಿಕರ ಅನುಕೂಲಕ್ಕಾಗಿ ಯುವಕರು ಸ್ವಯಂಪ್ರೇರಿತವಾಗಿ ಮುಂದಾಗಿ ಹೊಸ ತಂಗುದಾಣ ನಿರ್ಮಿಸುವ ಸಂಕಲ್ಪ ಕೈಗೊಂಡಿದ್ದರು. ಅದರ ಫಲವಾಗಿ ಇದೀಗ ಬಂಡಸಾಲೆಗೆ ವಿಶಿಷ್ಟ ಗುರುತನ್ನು ತಂದುಕೊಡುವ ಬಸ್ ಮಾದರಿಯ ತಂಗುದಾಣ ತಲೆ ಎತ್ತಿದೆ.

ಪ್ರಯಾಣಿಕರಿಗೆ ಆಶ್ರಯ, ಪ್ರವಾಸಿಗರಿಗೆ ಆಕರ್ಷಣೆ

ಕೇವಲ ಬಸ್ ಕಾಯುವ ಸ್ಥಳವಾಗಿ ಉಳಿಯದೆ, ಈ ಬಸ್ ತಂಗುದಾಣ ಈಗ ಸೆಲ್ಫಿ ಪ್ರಿಯರು ಹಾಗೂ ಪ್ರವಾಸಿಗರಿಗೂ ಹೊಸ ಆಕರ್ಷಣೆಯ ಕೇಂದ್ರವಾಗಿದೆ. ದೂರದಿಂದ ನೋಡಿದರೆ ರಸ್ತೆಯ ಬದಿಯಲ್ಲಿ ನಿಜವಾದ ಬಸ್ ನಿಂತಿರುವಂತೆ ಕಾಣುವ ಈ ವಿನ್ಯಾಸ ಎಲ್ಲರಲ್ಲೂ ಕುತೂಹಲ ಮೂಡಿಸುತ್ತಿದೆ.

ಯುವಕರ ಸಾಮಾಜಿಕ ಕಾಳಜಿಗೆ ಶ್ಲಾಘನೆ

ಸಾರ್ವಜನಿಕರ ಅಗತ್ಯವನ್ನು ಮನಗಂಡು, ಸ್ವಂತ ಸಂಪನ್ಮೂಲಗಳನ್ನು ಬಳಸಿ ಗ್ರಾಮಕ್ಕೆ ಉಪಯುಕ್ತವಾಗುವ ಶಾಶ್ವತ ಸೌಲಭ್ಯ ನಿರ್ಮಿಸಿರುವ ವಿ2 ಗೈಸ್ ಯುವಕ ಸಂಘದ ಕಾರ್ಯಕ್ಕೆ ಸ್ಥಳೀಯರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಂಡಸಾಲೆಯ ಈ ವಿನೂತನ ಬಸ್ ತಂಗುದಾಣ ಈಗ ಗುರುಪುರ ಭಾಗದ ಹೊಸ ಲ್ಯಾಂಡ್‌ಮಾರ್ಕ್ ಆಗಿ ಗುರುತಿಸಿಕೊಂಡಿದೆ.