ಬಂಗ್ಲೆಗುಡ್ಡೆ ಅಸ್ಥಿಪಂಜರಗಳ ಗುರುತು ಪತ್ತೆಗಿಳಿದ ಎಸ್ಐಟಿ ; ಧರ್ಮಸ್ಥಳಕ್ಕೆ ತೆರಳಿ ನಾಪತ್ತೆಯಾದ ಕುಟುಂಬಗಳ ಡಿಎನ್ಎ ತನಿಖೆ, ರಕ್ತದ ಮಾದರಿ ಪಡೆದು ಎಫ್ಎಸ್ಎಲ್ ಶೋಧ

19-06-26 03:31 pm       HK News Staffer   ಕರಾವಳಿ

ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಸಂದರ್ಭ ಪತ್ತೆಯಾಗಿದ್ದ ಏಳು ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಮಂಗಳೂರು, ಜೂನ್ 19: ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಸಂದರ್ಭ ಪತ್ತೆಯಾಗಿದ್ದ ಏಳು ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. 

ಬಂಗ್ಲೆಗುಡ್ಡೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಾನವ ಅಸ್ಥಿಪಂಜರಗಳನ್ನು ಎಫ್ಎಸ್ಎಲ್ ತನಿಖೆಗಾಗಿ ರವಾನಿಸಲಾಗಿತ್ತು. ಇದರ ವರದಿಯನ್ನು ಆಧರಿಸಿ ರಾಜ್ಯದ ವಿವಿಧ ಕಡೆ ನಾಪತ್ತೆಯಾದವರ ಕುಟುಂಬದ ಜೊತೆಗೆ ಈ ಅಸ್ಥಿಪಂಜರಗಳ ಡಿಎನ್ಎ ಹೋಲಿಕೆಯಾಗುತ್ತದೆಯೇ ಎಂದು ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ರಾಜ್ಯದ ನಾನಾ ಭಾಗಗಳಲ್ಲಿ ಧರ್ಮಸ್ಥಳಕ್ಕೆ ತೆರಳಿ ನಾಪತ್ತೆಯಾಗಿರುವ ಪ್ರಕರಣಗಳು ಇವೆಯೇ ಎಂಬ ಬಗ್ಗೆ ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಕೇರಳ, ತೆಲಂಗಾಣ ಸೇರಿದಂತೆ ರಾಜ್ಯದ ಹಲವು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವವರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಡಿಸಿಆರ್ ಬಿ ಸೇರಿದಂತೆ‌ ಇನ್ನಿತರ ಮೂಲಗಳಿಂದ‌ ಮಾಹಿತಿ ಸಂಗ್ರಹಿಸಿದ್ದು ಧರ್ಮಸ್ಥಳಕ್ಕೆ ತೆರಳಿ ನಾಪತ್ತೆಯಾದವರ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.‌ 

ಇದೇ ಆಧಾರದಲ್ಲಿ ಎಂಟು ಕುಟುಂಬಗಳ ಜನರ ರಕ್ತದ ಮಾದರಿಯನ್ನು ಪೊಲೀಸರು ಪಡೆದಿದ್ದು ಡಿಎನ್ಎ ಟೆಸ್ಟ್ ಉದ್ದೇಶಕ್ಕಾಗಿ FSL ತನಿಖೆಗೆ ಕಳುಹಿಸಲಾಗಿದೆ.‌ ಇದೇ ವೇಳೆ, ಇನ್ನೂ 9 ಕುಟುಂಬಗಳ ರಕ್ತದ ಮಾದರಿಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡದಲ್ಲಿ ಕಳೆದ ವರ್ಷ  ಸೆಪ್ಟಂಬರ್ 17-18  ರಂದು ಎಸ್ಐಟಿ ಶೋಧನೆ ಸಂದರ್ಭ ಏಳು ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಮಣ್ಣಿನ ಮೇಲ್ಮೈನಲ್ಲೇ ಅಸ್ಥಿಪಂಜರ ಬಿದ್ದುಕೊಂಡಿದ್ದರಿಂದ ಆತ್ಮಹತ್ಯೆಯೇ, ಕೊಲೆಯೇ ಎನ್ನುವ ಬಗ್ಗೆ ವದಂತಿ ಹರಡಿತ್ತು.