ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕೊಳ್ತಾರಂದ್ರೆ ಏನನ್ನಬೇಕು? ಹೊಟೇಲ್, ಪಿಜಿ ಎಲ್ಲ ಕಡೆ ಕಿಚನ್ ಸರಿ ಇಟ್ಕೊಳ್ಳಿ, ಇಲ್ಲಾಂದ್ರೆ ಬಂದ್ ಮಾಡಿಸ್ತೀವಿ..! ಸಚಿವ ಖಾದರ್ ವಾರ್ನಿಂಗ್

16-08-26 04:14 pm       HK News Staffer   ಕರಾವಳಿ

ನಿಮ್ಮ ಕಿಚನ್, ಸ್ಟೋರ್ ಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಇಟ್ಟುಕೊಳ್ಳಿ. ನೈರ್ಮಲ್ಯವನ್ನು ಕಾಪಾಡಿ. ಯಾವುದೇ ಸಂದರ್ಭದಲ್ಲೂ ನಾವು ರೈಡ್ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು, ಆ.16: ಮಂಗಳೂರಿನ ಕೆಎಫ್ ಸಿ ರೆಸ್ಟೋರೆಂಟಿನಲ್ಲಿ ಕೊಳೆತ ಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಫುಡ್ ಔಟ್ ಲೆಟ್ ಫ್ರ್ಯಾಂಚೈಸಿಗಳಿಗೆ ಆರೋಗ್ಯ ಸಚಿವ ಯು.ಟಿ ಖಾದರ್ ವಾರ್ನಿಂಗ್ ಮಾಡಿದ್ದಾರೆ.‌ ಮುಂದೆ ಎಲ್ಲಾ ಕಡೆ ಇಂತಹ ರೈಡ್ ಗಳು ನಡೆಯುತ್ತದೆ. ನಿಮ್ಮ ಕಿಚನ್, ಸ್ಟೋರ್ ಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಇಟ್ಟುಕೊಳ್ಳಿ. ನೈರ್ಮಲ್ಯವನ್ನು ಕಾಪಾಡಿ. ಯಾವುದೇ ಸಂದರ್ಭದಲ್ಲೂ ನಾವು ರೈಡ್ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. 

ಎಷ್ಟೇ ದೊಡ್ಡವರಾದರೂ ನಾವು ಬಿಡೋದಿಲ್ಲ. ಎಷ್ಟೇ ಸಣ್ಣವರಾದರೂ ನಾವು ಬಿಡೋದಿಲ್ಲ. ನಮಗೆ ಜನರ ಆರೋಗ್ಯ ಮುಖ್ಯ. ಕೋಪದಲ್ಲಿ ಅಥವಾ ಶಿಕ್ಷೆ ನೀಡಬೇಕು ಎಂದು ಯಾರ ವಿರುದ್ಧವೂ ರೈಡ್ ಮಾಡುತ್ತಿಲ್ಲ.‌ ಜನರಿಗೆ ಪರಿಸ್ಥಿತಿ ಏನೆಂದು ತಿಳಿಸೋದು, ನೈರ್ಮಲ್ಯ ಕಾಪಾಡೋದು ನಮ್ಮ ಜವಾಬ್ದಾರಿ. ಬೆಂಗಳೂರಿನಲ್ಲಿ ಪಂಚತಾರ ಹೋಟೆಲ್ ಸೇರಿದಂತೆ ಫುಡ್ ಜೌಟ್ ಲೆಟ್ ಗಳಿಗೆ ರೈಡ್ ಆಗಿದೆ. ಅಷ್ಟಾದರೂ ಮಂಗಳೂರಿನಲ್ಲಿ ಈ ರೀತಿ ಮಾಡ್ತಾರೆ ಅಂದ್ರೆ ಇವರಿಗೆ ನಾವು ಏನೆಂದು ಹೇಳಬೇಕು. ಈಗಾಗಲೇ ಅಧಿಕಾರಿಗಳು ದಾಳಿ ಮಾಡಿ ಜಪ್ತಿ ಮಾಡಿದ್ದಾರೆ. ಮುಂದೆಯೂ ರೈಡ್ ಗಳು ಮುಂದುವರೆಯುತ್ತವೆ ಎಂದು ಹೇಳಿದರು. 

ಇದೇ ವೇಳೆ, ಇನ್ಮುಂದೆ ಪಿಜಿ ಸೆಂಟರ್, ಹಾಸ್ಟೆಲ್ ಗಳಿಗೂ ದಾಳಿ ನಡೆಯಲಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ. ಕೇಟರಿಂಗ್ ಸಂಸ್ಥೆಗಳು, ಪಿಜಿಗಳನ್ನು ನಡೆಸುವವರು, ಹಾಸ್ಟೆಲ್ ನಡೆಸುವವರು ಆಹಾರ ಪೂರೈಕೆಯ ವ್ಯವಸ್ಥೆಗಳನ್ನು ಸರಿ ಇಟ್ಟುಕೊಳ್ಳಿ. ನಾವು ರೈಡ್ ಮಾಡುವಾಗ ವ್ಯವಸ್ಥೆ ಸರಿಯಿರದಿದ್ರೆ ಪಿಜಿ ನಡೆಸಲು ಅನುಮತಿ ಕೊಡೋದಿಲ್ಲ. ವಿದ್ಯಾರ್ಥಿಗಳು, ಯುವಕ, ಯುವತಿಯರು ಮನೆ ಬಿಟ್ಟು ನಿಮ್ಮ ಬಳಿಗೆ ಬಂದಿರುತ್ತಾರೆ. ಅವರಿಗೆ ಯಾರು ಕೂಡ ಇರೋದಿಲ್ಲ, ಸರಿಯಾದ ಊಟದ ವ್ಯವಸ್ಥೆ ಇರಲ್ಲ ಅಂತ ಪಿಜಿಗೆ ಬರುತ್ತಾರೆ. ನೀವು ಪಿಜಿ ನಡೆಸೋದಾದ್ರೆ ನಿಮ್ಮ ಸ್ವಂತ ಮಕ್ಕಳ ಹಾಗೆ, ನಿಮ್ಮ ಸಂಬಂಧಿಕರ ರೀತಿ ನೋಡಿಕೊಂಡು ಊಟದ ವ್ಯವಸ್ಥೆ ಮಾಡಬೇಕು. ಈ ರೀತಿಯ ವ್ಯವಸ್ಥೆ ಇರುವವರು ಮಾತ್ರ ಪಿಜಿ ಓಪನ್ ಮಾಡಿ.‌ ಇಲ್ಲವಾದಲ್ಲಿ ನೀವು ಪಿಜಿ ನಡೆಸುವ ಅವಶ್ಯಕತೆ ಇಲ್ಲ.‌ ಮುಂದೆ ನಾವು ರೈಡ್ ಮಾಡುವಾಗ ವ್ಯವಸ್ಥೆ ಸರಿಯಿಲ್ಲದಿದ್ರೆ ಪಿಜಿ ಸೆಂಟರ್ ನಡೆಸೋದಕ್ಕೆ ಅನುಮತಿ ಕೊಡೋದಿಲ್ಲ.‌ ಸಂಬಂಧಪಟ್ಟ ಇಲಾಖೆಯವರೊಂದಿಗೆ ಮಾತನಾಡಿ ಜಂಟಿಯಾಗಿ ಕೆಲಸ ಮಾಡುತ್ತೇವೆ ಎಂದು ಮಂಗಳೂರಿನಲ್ಲಿ ಸಚಿವ ಯು.ಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ.