ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊಟ್ಟ ಕೌನ್ಸಿಲರ್ ನಡೆಗೆ ವಾರ್ಡ್ ನಿವಾಸಿಗಳಿಂದಲೇ ಆಕ್ಷೇಪ ; ಕೋಟೆಕಾರು ಪ.ಪಂ ಸಭೆಯಲ್ಲಿ ಆಡಳಿತ ಬಿಜೆಪಿಗರಲ್ಲೇ ಕಿರಿಕ್ ! ಶಾಲೆ ವಿಚಾರದಲ್ಲಿ ರಾಜಕೀಯ ಸಲ್ಲವೆಂದ‌ ಸದಸ್ಯರು 

26-08-26 10:58 pm       HK News Desk   ಕರಾವಳಿ

 ನಾಲ್ಕನೇ ವಾರ್ಡಿಗೆ ಮೀಸಲಿಟ್ಟ ಅನುದಾನವನ್ನ‌ ಬಿಜೆಪಿ ಕೌನ್ಸಿಲರ್ ಓರ್ವರು ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ನೀಡುತ್ತಿರುವ‌ ವಿರುದ್ಧ ವಾರ್ಡಿನ ನಾಗರಿಕರೇ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರ ಕೋಟೆಕಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಗೊಂಡು‌ ಆಡಳಿತ ಬಿಜೆಪಿ ಪಕ್ಷದವರ ನಡುವೆಯೇ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಉಳ್ಳಾಲ, ಆ.26 ನಾಲ್ಕನೇ ವಾರ್ಡಿಗೆ ಮೀಸಲಿಟ್ಟ ಅನುದಾನವನ್ನ‌ ಬಿಜೆಪಿ ಕೌನ್ಸಿಲರ್ ಓರ್ವರು ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ನೀಡುತ್ತಿರುವ‌ ವಿರುದ್ಧ ವಾರ್ಡಿನ ನಾಗರಿಕರೇ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರ ಕೋಟೆಕಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಗೊಂಡು‌ ಆಡಳಿತ ಬಿಜೆಪಿ ಪಕ್ಷದವರ ನಡುವೆಯೇ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಕೋಟೆಕಾರು ಪ.ಪಂ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ನಾಲ್ಕನೇ ವಾರ್ಡಿಗೆ ಮೀಸಲಿಟ್ಟ ಐದು ಲಕ್ಷ ರೂ. ಅನುದಾನವನ್ನು ಆಡಳಿತ ಬಿಜೆಪಿ ಪಕ್ಷದ ಸದಸ್ಯರಾದ ಕಿರಣ್ ಅವರು ಪಕ್ಕದ ಮೂರನೇ ವಾರ್ಡಿನ ಮಾಡೂರು ಸರಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೀಡಲು ಮುಂದಾಗಿರುವುದಕ್ಕೆ ಅವರ ವಾರ್ಡಿನ‌ ಹದಿನೈದು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿ ಪಂಚಾಯತ್ಗೆ ಮನವಿ ನೀಡಿರುವ ಬಗ್ಗೆ ಸಭೆಯಲ್ಲಿ ಮುಖ್ಯಾಧಿಕಾರಿ ಮಾಲಿನಿ ಪ್ರಸ್ತಾಪಿಸಿದರು.

ಈ ವೇಳೆ ಮಾತನಾಡಿದ ಕಿರಣ್ ಅವರು ನನ್ನ ಮಕ್ಕಳು ಸೇರಿ ವಾರ್ಡಿನ ಸುಮಾರು ಎಂಭತ್ತು ಮಕ್ಕಳಲ್ಲದೆ, ಪಟ್ಟಣದ ಎಂಟು ವಾರ್ಡಿನ ನೂರಾರು ಮಕ್ಕಳು ಆ ಶಾಲೆಯಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ. ಮಕ್ಕಳು ವಿದ್ಯಾರ್ಜನೆಗೈಯುವ ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡವೆಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ದಿವ್ಯಾ ಶೆಟ್ಟಿ ಕಳೆದ ಸಾಮಾನ್ಯ ಸಭೆಗೆ ನೀವು ಹಾಜರಾಗದ ಕಾರಣ ಈ ಗೊಂದಲ ಸೃಷ್ಟಿಯಾಗಿದೆ. ಆಕ್ಷೇಪಣೆ ಸಲ್ಲಿಸಿದವರಲ್ಲಿ ನೀವು ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಹೇಳಿದರು.

ಸರಕಾರಿ ಶಾಲೆಯ ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ನಾನು ಮೀಸಲಿಟ್ಟಿರುವ ಅನುದಾನವನ್ನ ತಡೆ ಹಿಡಿಯಲು ಕಾನೂನಿನಲ್ಲಿ ಅವಕಾಶವಿಲ್ಲವೆಂಬುದನ್ನ ಬೈಲಾದಲ್ಲಿ ಓದಿ ತಿಳಿದಿದ್ದೇನೆ. ನನ್ನ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾರ್ಡಿನ ನಾಗರಿಕರಲ್ಲೂ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಕೌನ್ಸಿಲರ್ ಕಿರಣ್ ಪ್ರತಿಕ್ರಿಯಿಸಿದರು.

ಪ.ಪಂ ಅಧ್ಯಕ್ಷರನ್ನ ಉದ್ಧೇಶಿಸಿ ಮಾತನಾಡಿದ ವಿಪಕ್ಷ ನಾಯಕ ಅಹ್ಮದ್ ಬಾವ ಅಜ್ಜಿನಡ್ಕ ಅವರು ನೀವು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದೀರಿ. ಆಕ್ಷೇಪ ಬಂತೆಂದು ಚುನಾಯಿತ ಸದಸ್ಯರ ಅಧಿಕಾರದ ಹಕ್ಕನ್ನು ಮೊಟಕುಗೊಳಿಸುವುದು ಸರಿಯಲ್ಲ. ಸರಕಾರಿ ಶಾಲೆಯ ಅಭಿವೃದ್ಧಿಗೆ ಅನುದಾನ ನೀಡುವ ಉತ್ತಮ‌ ಕಾರ್ಯದ ವಿರುದ್ಧ ಆಕ್ಷೇಪ ಎತ್ತಿದವರನ್ನ ನೀವೇ ಕರೆಸಿ ಮಾತನಾಡಿಸಿ ಸಮಸ್ಯೆ ಬಗೆಹರಿಸಬೇಕೆಂದರು.

2

ಕೌನ್ಸಿಲರ್ಗಳು ಬೇರೆ ವಾರ್ಡ್ ಗೆ ಅನುದಾನ ನೀಡಬಾರದೆನ್ನುವ ಕಾನೂನು ಇದೆಯೇ? ಮಾಡೂರು ಸರಕಾರಿ ಶಾಲೆಗೆ ಐದು ಲಕ್ಷ ಅನುದಾನ ನೀಡುವುದಾಗಿ ಪ.ಪಂ ಉಪಾಧ್ಯಕ್ಷರೇ ಭರವಸೆ ನೀಡಿದ್ದಾರೆ. ನಾಲ್ಕನೇ ವಾರ್ಡ್ ಸದಸ್ಯ ಕಿರಣ್ ಅವರು ಅನುದಾನ‌‌ ನೀಡಿದ್ದಕ್ಕೆ 15‌ ಮಂದಿ ಆಕ್ಷೇಪ ಮಾಡಿದ್ದರೆ, ಅದೇ ವಾರ್ಡಿನ 60 ನಾಗರಿಕರು ಫೋನ್ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆಂದು ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಮೂರನೇ ವಾರ್ಡ್ ಸದಸ್ಯರಾದ ಸುಜಿತ್ ಮಾಡೂರು ಸಭೆಯಲ್ಲಿ ಧ್ವನಿ ಎತ್ತಿದರು.

ಕೌನ್ಸಿಲರ್ ಸುಜಿತ್ ಮಾಡೂರು ಅವರ ಮುತುವರ್ಜಿಯಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದಲ್ಲಿದ್ದ ಮಾಡೂರು ಸರಕಾರಿ ಪ್ರಾಥಮಿಕ ಶಾಲೆಯ ಪುನರುತ್ಥಾನ ಕಾರ್ಯವು ನಡೆಯುತ್ತಿದ್ದು, ಇಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿಯೆಂಬಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಶಾಲೆಗೆ ನೂತನ ಕೊಠಡಿಗಳು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯರಲ್ಲದೆ, ಖಾಸಗಿ ಸಂಸ್ಥೆಗಳು, ಸಂಘ ಸಂಸ್ಥೆಗಳು ಸಹಾಯ ಹಸ್ತ ನೀಡುತ್ತಿದ್ದು, ಪಕ್ಕದ ವಾರ್ಡ್ ಸದಸ್ಯ ಕಿರಣ್ ಕೂಡ ತನ್ನ ವಾರ್ಡ್ ಅಭಿವೃದ್ಧಿಗಾಗಿ ಮಂಜೂರಾದ ಅನುದಾನವನ್ನ ಶಾಲೆಗೆ ನೀಡಲು ಮುಂದಾಗಿದ್ದಾರೆ.