ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರಳಕ್ಕೆ ನಷ್ಟವಿಲ್ಲ ; ಅಧಿಕಾರ ವ್ಯಾಪ್ತಿಯ ಗಡಿ ಬದಲಷ್ಟೇ, ದಕ್ಷಿಣ ರೈಲ್ವೇಯ ಇಂಟರ್ ಪಾಯಿಂಟ್ ಚೇಂಜ್ ಮಾತ್ರ, ರೈಲ್ವೇ ಮಂಡಳಿ ಸ್ಪಷ್ಟನೆ

28-08-26 01:19 pm       HK News Staffer   ಕರಾವಳಿ

ಮಂಗಳೂರಿನ ರೈಲ್ವೇ ನಿಲ್ದಾಣಗಳನ್ನು ಮೈಸೂರು ನೈಋತ್ಯ ರೈಲ್ವೇ ವಿಭಾಗಕ್ಕೆ ಸೇರ್ಪಡೆ ಮಾಡುವ ಪ್ರಸ್ತಾಪಕ್ಕೆ ಕೇರಳದಲ್ಲಿ ಕಾಂಗ್ರೆಸ್ ಸಂಸದರು, ಸ್ಥಳೀಯ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವಾಗಲೇ ರೈಲ್ವೆ ಮಂಡಳಿ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಅ.1ರಿಂದ ಮೈಸೂರು ವಿಭಾಗದಿಂದಲೇ ಮಂಗಳೂರಿನಲ್ಲಿ ರೈಲ್ವೇ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದೆ.

ಮಂಗಳೂರು, ಆ.28: ಮಂಗಳೂರಿನ ರೈಲ್ವೇ ನಿಲ್ದಾಣಗಳನ್ನು ಮೈಸೂರು ನೈಋತ್ಯ ರೈಲ್ವೇ ವಿಭಾಗಕ್ಕೆ ಸೇರ್ಪಡೆ ಮಾಡುವ ಪ್ರಸ್ತಾಪಕ್ಕೆ ಕೇರಳದಲ್ಲಿ ಕಾಂಗ್ರೆಸ್ ಸಂಸದರು,  ಸ್ಥಳೀಯ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವಾಗಲೇ ರೈಲ್ವೆ ಮಂಡಳಿ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಅ.1ರಿಂದ ಮೈಸೂರು ವಿಭಾಗದಿಂದಲೇ ಮಂಗಳೂರಿನಲ್ಲಿ ರೈಲ್ವೇ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದೆ. 

ಈ ಕುರಿತು ಅಧಿಸೂಚನೆ ಪ್ರಕಟಿಸಿರುವ ಕೇಂದ್ರ ರೈಲ್ವೆ ಮಂಡಳಿ, ರೈಲ್ವೆ ಕಾರ್ಯಾಚರಣೆಯ ಅಗತ್ಯಗಳನ್ನು ಗಮನದಲ್ಲಿಟ್ಟು ನೈಋತ್ಯ ರೈಲ್ವೆಯ ಮೈಸೂರು ವಿಭಾಗ, ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗಗಳ ಅಧಿಕಾರ ವ್ಯಾಪ್ತಿಯ ಗಡಿಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ನಡುವಿನ ವಿಭಾಗೀಯ ಅಥವಾ ವಲಯ ಗಡಿಯನ್ನು ಈಗ ಶೋರನೂರು ಜಂಕ್ಷನ್-ಮಂಗಳೂರು ಸೆಂಟ್ರಲ್ ವಿಭಾಗದ 872.900 ಕಿ.ಮೀ.ಗಳಲ್ಲಿ ನಿಗದಿಪಡಿಸಲಾಗಿದೆ. ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ( ಕೇರಳದ ಪಾಲಕ್ಕಾಡ್) ನಡುವಿನ ಪ್ರಸ್ತುತ ಇರುವ ವಿಭಾಗೀಯ ಅ‍ಥವಾ ವಲಯ ಗಡಿಯು, ಇನ್ನು ಮುಂದೆ ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ(ಮೈಸೂರು) ನಡುವಿನ ವಿಭಾಗೀಯ ಅಥವಾ ವಲಯದ ಗಡಿಯಾಗಲಿದೆ ಎಂದಿದೆ. 

ಇದರಂತೆ, ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ನಡುವಿನ ಇಂಟರ್‌ಚೇಂಜ್ (ವಿನಿಮಯ) ಪಾಯಿಂಟ್‌ ಪಡೀಲ್‌ನಿಂದ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ. ತೋಕೂರು ಬಳಿ ಇರುವ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ಕೊಂಕಣ ರೈಲ್ವೆ ನಡುವಿನ ಪ್ರಸ್ತುತ ಇಂಟರ್‌ಚೇಂಜ್ (ವಿನಿಮಯ) ಪಾಯಿಂಟ್ ಇನ್ನು ಮುಂದೆ ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಮೈಸೂರು ವಿಭಾಗದ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಲಿದೆ. ಈ ಎಲ್ಲಾ ಅಧಿಕಾರ ವ್ಯಾಪ್ತಿಯ ಬದಲಾವಣೆಗಳು ಅ.1ರಿಂದಲೇ ಜಾರಿಗೆ ಬರಲಿವೆ ಎಂದು ರೈಲ್ವೆ ಮಂಡಳಿಯ ಕಾರ್ಯದರ್ಶಿ ಸಂಜೀವ್ ನಾರಾಯಣ್ ಮಾಥುರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. 

ರೈಲ್ವೇ ಮಂಡಳಿಯ ಈ ನಿರ್ಧಾರದಿಂದ ಕೇರಳಕ್ಕೆ ಯಾವುದೇ ನಷ್ಟವಿಲ್ಲ. ಈ ಬದಲಾವಣೆ ಆಡಳಿತಾತ್ಮಕ ನಿಯಂತ್ರಣವಷ್ಟೆ. ಮಂಗಳೂರು ಸುತ್ತಮುತ್ತಲ ರೈಲು ನಿಲ್ದಾಣಗಳು ನೈಋತ್ಯ ರೈಲ್ವೆ ವಿಭಾಗ (ಮೈಸೂರು)ಗೆ ಸೇರಿದರೆ ಏಕೀಕೃತ ಮೇಲ್ವಿಚಾರಣೆಗೆ ಒಳಪಡುತ್ತವೆ. ನೈಋತ್ಯ ರೈಲ್ವೆ ವಿಭಾಗ ( ಮೈಸೂರು) ಹುಬ್ಬಳ್ಳಿ ವಲಯ ಕೇಂದ್ರದ ಅಡಿ ಏಕಹಂತದ ನಿರ್ವಹಣೆ ಸಿಗಲಿದ್ದು, ಕರಾವಳಿ ಮಾರ್ಗಗಳನ್ನು ಬೆಂಗಳೂರು, ಮೈಸೂರು ಮತ್ತು ಉತ್ತರ ಕರ್ನಾಟಕದೊಂದಿಗೆ ಸಂಯೋಜಿಸಲಾಗುತ್ತದೆ. ಗಡಿ ಬದಲಾವಣೆಯು ಶೇ.100ರಷ್ಟು ಕರ್ನಾಟಕದ ಒಳಗೆ ಇರುತ್ತದೆ. ಪಾಲಕ್ಕಾಡ್ ವಿಭಾಗವು ಕೇರಳದೊಳಗಿನ ಪ್ರತಿಯೊಂದು ನಿಲ್ದಾಣವನ್ನು (ಕಾಸರಗೋಡಿನಿಂದ ತ್ರಿಶೂರ್ ವರೆಗೆ ) ತನ್ನ ಬಳಿಯೇ ಉಳಿಸಿಕೊಂಡಿದೆ. ಇನ್ನು ದಕ್ಷಿಣ ರೈಲ್ವೆ ಚೆನ್ನೈ ಆಡಳಿತಕ್ಕೆ ಒಳಪಟ್ಟಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.‌ 

ಇದಲ್ಲದೆ, ಪಡೀಲ್‌ನಲ್ಲಿ ಅಡಚಣೆಗಳು ನಿವಾರಣೆಯಾಗುವುದರಿಂದ ಕೇರಳಕ್ಕೆ ಸಾಗುವ ಗಡಿನಾಡಿನ ಎಕ್ಸ್‌ಪ್ರೆಸ್‌ ಮತ್ತು ಪ್ರಯಾಣಿಕರ ರೈಲುಗಳ ಸಂಚಾರ ವೇಗಗೊಳ್ಳಲಿದೆ. ಮಂಗಳೂರು, ಉಡುಪಿ, ಕಾರವಾರ ಮತ್ತು ಹುಬ್ಬಳ್ಳಿ-ಧಾರವಾಡದಂಥ ಒಳನಾಡಿನ ಕೇಂದ್ರಗಳನ್ನು ಸಂಪರ್ಕಿಸುವ ಏಕೀಕೃತ ಪ್ರಾದೇಶಿಕ ಕಮ್ಯೂಟರ್ ಮೆಮು ಯೋಜನೆ ರೂಪಿಸಲು ಅವಕಾಶ ಸಿಗಲಿದೆ. ಕೇರಳದ ಒಳಗಿನ ಉಪನಗರ ಮತ್ತು ಪ್ರಾದೇಶಿಕ ರೈಲು ವೇಳಾಪಟ್ಟಿಯು ದಕ್ಷಿಣ ರೈಲ್ವೆಯ ಸ್ವತಂತ್ರ ನಿಯಂತ್ರಣದಲ್ಲೇ ಇರುತ್ತದೆ. ಕೇರಳಕ್ಕೆ ಇದರಿಂದ ಯಾವುದೇ ಆರ್ಥಿಕ ನಷ್ಟವಾಗುವುದಿಲ್ಲ. ಏಕೆಂದರೆ, ರೈಲ್ವೆ ನಿಧಿಯನ್ನು ರಾಷ್ಟ್ರೀಯ ಜಾಲದ ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆಯೇ ಹೊರತು ವಿಭಾಗದ ಆದಾಯದ ಆಧಾರದ ಮೇಲೆ ಅಲ್ಲ. ಕೇರಳ ನಿಧಿ ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿದೆ. 

ಕೇರಳದಲ್ಲಿ ಈಗಾಗಲೇ ರೈಲು ಅಭಿವೃದ್ಧಿ ಸಾರ್ವಕಾಲಿಕ ಎತ್ತರದಲ್ಲಿದ್ದು, 2026-27ನೇ ಸಾಲಿನಲ್ಲಿ ವಾರ್ಷಿಕ ಬಜೆಟ್ ನಲ್ಲಿ 3,795 ಕೋಟಿ ರು.ಗಳನ್ನು ಮೀಸಲಿಟ್ಟಿದೆ. 2014ಕ್ಕೆ ಹೋಲಿಸಿದರೆ ಇದು 10 ಪಟ್ಟು ಹೆಚ್ಚು. ಈಗಾಗಲೇ ಕೇರಳಾದ್ಯಂತ ಸಂಪೂರ್ಣ ರೈಲ್ವೇ ಹಳಿ ವಿದ್ಯುದ್ದೀಕರಣ ಮಾಡಲಾಗಿದೆ. 131 ಮೇಲ್ಸೇತುವೆಗಳು ಸೇರಿ 20 ಸಾವಿರ ಕೋಟಿ ರುಪಾಯಿ ಮೌಲ್ಯದ ಯೋಜನೆಗಳು ಚಾಲ್ತಿಯಲ್ಲಿವೆ. ಮಂಗಳೂರು ಕಡಿತವಾದ ಮಾತ್ರಕ್ಕೆ ಆರ್ಥಿಕ ನಷ್ಟವಾಗುತ್ತದೆ ಎನ್ನುವುದರಲ್ಲಿ ಹುರುಳಿಲ್ಲ ಎಂದು ಮಂಡಳಿ ತಿಳಿಸಿದೆ.