ಶೀಘ್ರದಲ್ಲೇ ಸಪ್ತಪದಿ : ತಿಂಗಳಲ್ಲಿ ನಾಲ್ಕೈದು ಮುಹೂರ್ತ ನಿಗದಿ ; ಸಚಿವ ಕೋಟ 

06-02-21 10:59 pm       Udupi Correspondent   ಕರಾವಳಿ

ತಿಂಗಳಿಗೆ ನಾಲ್ಕೈದು ಮುಹೂರ್ತ ನಿಗದಿ ಮಾಡುತ್ತಿದ್ದು ಮಾರ್ಚ್ ತಿಂಗಳಲ್ಲಿ 5, ಎಪ್ರಿಲ್ ಮತ್ತು ಮೇನಲ್ಲಿ ಆರು ದಿನಗಳ ಮುಹೂರ್ತ ನಿಗದಿ ಮಾಡಲಾಗಿದೆ. ಈ

ಉಡುಪಿ, ಫೆ.6: ಕೊರೋನಾದಿಂದಾಗಿ ನೆನೆಗುದಿಗೆ ಬಿದ್ದಿದ್ದ ಸಪ್ತಪದಿ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತಿದೆ. ಹಾಗೆಂದು ನೂರಾರು ಮದುವೆಗಳನ್ನು ಏಕಕಾಲದಲ್ಲಿ ಮಾಡುವುದು ಕಷ್ಟ. ಅದಕ್ಕಾಗಿ ತಿಂಗಳಿಗೆ ನಾಲ್ಕೈದು ಮುಹೂರ್ತ ನಿಗದಿ ಮಾಡುತ್ತಿದ್ದು ಮಾರ್ಚ್ ತಿಂಗಳಲ್ಲಿ 5, ಎಪ್ರಿಲ್ ಮತ್ತು ಮೇನಲ್ಲಿ ಆರು ದಿನಗಳ ಮುಹೂರ್ತ ನಿಗದಿ ಮಾಡಲಾಗಿದೆ. ಈ ಬಗ್ಗೆ ಎಲ್ಲಾ ದೇವಾಲಯಗಳಿಗೂ ಆದೇಶ ನೀಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಯೋಜನೆಯಡಿ ಮದುವೆಯಾಗುವ ಒಂದು ಜೋಡಿಗೆ 55000 ರೂ.ಗಳನ್ನು ಸರ್ಕಾರ ಖರ್ಚು ಮಾಡುತ್ತದೆ. ಊಟೋಪಚಾರದ ಖರ್ಚು ಕೂಡ ಸರ್ಕಾರವೇ ನೋಡಿಕೊಳ್ಳುತ್ತೆ. ಕೊರೊನಾ ಕಾಲದಲ್ಲಿ ಸಪ್ತಪದಿ ತುಳಿಯಲು ಸುಮಾರು ಒಂದೂವರೆ ಸಾವಿರ ಅರ್ಜಿಗಳು ಬಂದಿದ್ದವು. ಬಹುತೇಕ ಮದುವೆಗಳನ್ನು ಪೂರೈಸಿದ್ದೇವೆ. ಈಗ ಮತ್ತೆ ಹೊಸ ಅರ್ಜಿಗಳನ್ನು ಆಹ್ವಾನಿಸಿದ್ದೇವೆ. ಪ್ರಾದೇಶಿಕವಾಗಿ ಮುಹೂರ್ತ ವ್ಯತ್ಯಾಸವಿದ್ದರೆ, ಆಯಾ ಭಾಗದ ದೇವಸ್ಥಾನಗಳಿಗೆ ಸರಿ ಮಾಡಿಕೊಳ್ಳಲು ಅಧಿಕಾರ ನೀಡಲಾಗಿದೆ ಎಂದರು. 

ದೇವಸ್ಥಾನಗಳ ಸರ್ಕಾರೀಕರಣಕ್ಕೆ ವಿಶ್ವ ಹಿಂದು ಪರಿಷತ್ ವಿರೋಧ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಸರ್ಕಾರ ಯಾವುದೇ ದೇವಸ್ಥಾನಗಳ ಸರ್ಕಾರಿ ಕರಣಕ್ಕೆ ಮುಂದಾಗಿಲ್ಲ .2011ರಲ್ಲಿ  ಖಾಸಗಿ ದೇವಾಲಯಗಳ ನೊಂದಣಿಗೆ ಸರ್ಕಾರದಿಂದ ಸೂಚನೆ ನೀಡಲಾಗಿತ್ತು. ಧಾರ್ಮಿಕ ದತ್ತಿ‌ ಕಾಯ್ದೆಯಂತೆ ಈ ಆದೇಶ ಮಾಡಲಾಗಿತ್ತು. 2015 ರಲ್ಲಿ ಅಂದಿನ ರಾಜ್ಯ ಸರ್ಕಾರ ಆದೇಶವನ್ನು ಮತ್ತೊಮ್ಮೆ ಕಡ್ಡಾಯ ಮಾಡಿತ್ತು. 2015ರಿಂದ ಪ್ರತಿವರ್ಷ ನೆನಪೋಲೆ ದೇವಸ್ಥಾನಗಳಿಗೆ ಹೋಗುತ್ತಿದೆ. ಈ ಬಾರಿಯೂ ನೆನಪೋಲೆ ದೇವಸ್ಥಾನಗಳಿಗೆ ತಲುಪಿದೆ. ಈ ನೆನಪೋಲೆ ನೀಡಿದ್ದೇ ಗೊಂದಲ ಉಂಟಾಗಿದೆ. ವಿರೋಧ ಬಂದ ಕಾರಣ ನೆನಪೋಲೆ ಕಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದೇನೆ. ಇದು ನನ್ನಿಂದಾಗಲೀ ಸರ್ಕಾರದಿಂದಾಗಲಿ ಆಗಿರುವ ಗೊಂದಲವಲ್ಲ ಎಂದು ಹೇಳಿದರು. 

ಬಿಲ್ಲವ ಸಮುದಾಯಕ್ಕೆ ಅವಮಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, ಜನಾರ್ದನ ಪೂಜಾರಿ ಕೇವಲ ಬಿಲ್ಲವ ಸಮುದಾಯದ ನಾಯಕರಲ್ಲ. ಈ ದೇಶದಲ್ಲಿ ಅತ್ಯಂತ ಗೌರವಾನ್ವಿತ ರಾಜಕಾರಣಿ. ಬಡವರ ಬಗ್ಗೆ ಧ್ವನಿಯೆತ್ತುವ ಏಕೈಕ ಹಿರಿಯ ರಾಜಕಾರಣಿ. ಅವರ ಬಗ್ಗೆ ನಮಗೆ ವಿಶೇಷವಾದ ಪೂಜ್ಯ ಮತ್ತು ಧನ್ಯತೆಯ ಭಾವ ಇದೆ. ಈ ಬಗ್ಗೆ ಏನೇ ಸಮಸ್ಯೆಯಾಗಿದ್ದರೂ ಮಾತುಕತೆ ಮೂಲಕ ಬಗೆಹರಿಸುತ್ತೇವೆ ಎಂದರು.‌

ಬಿಲ್ಲವ ಮಹಿಳೆಯರಿಗೂ ಶೂನ್ಯ ಬಡ್ಡಿ ಸಾಲ 

ನೇಕಾರರಿಗೆ, ಮೀನುಗಾರರಿಗೆ ನೀಡಿದಂತೆ ಬಿಲ್ಲವ ಸಮುದಾಯದ ಮಹಿಳೆಯರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಈಡಿಗ, ನಾಮಧಾರಿ, ಬಿಲ್ಲವರು ಈ ಬಗ್ಗೆ ಒತ್ತಾಯಿಸಿದ್ದಾರೆ. ಇದೇ ವೇಳೆ, ಈಡಿಗ ಸಮುದಾಯದ ತಿಮ್ಮೇಗೌಡರ ನೇತೃತ್ವದಲ್ಲಿ ಸಮುದಾಯದ ಶಾಸಕರು ಸಿಎಂಗೆ ಮನವಿ ಕೊಟ್ಟಿದ್ದಾರೆ. ನಾರಾಯಣ ಗುರುಗಳ ಹೆಸರಲ್ಲಿ ನಿಗಮ ಮಾಡಬೇಕೆಂದು ಎಂಟು ಮಂದಿ ಜನಪ್ರತಿನಿಧಿಗಳು ಮನವಿ ಕೊಟ್ಟಿದ್ದಾರೆ ಎಂದರು. 

ರೈತ ಹೋರಾಟ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಹೋರಾಟದ ಹಿಂದೆ ರಾಷ್ಟ್ರ ದ್ರೋಹದ ಆಲೋಚನೆ ಕಂಡುಬರುತ್ತಿದೆ. ರಾಷ್ಟ್ರ ಧ್ವಜಕ್ಕೆ ಅವಮಾನ ಮತ್ತು ಹಿಂಸಾಕೃತ್ಯಕ್ಕೆ ಪ್ರಚೋದಿಸುವ ಕೃತ್ಯ ನಡೆದಿದೆ. ಟ್ವೀಟ್ ಮೂಲಕ ಜನರನ್ನು ಪ್ರಚೋದಿಸಲಾಗುತ್ತದೆ. ರಾಷ್ಟ್ರ ವಿರೋಧಿ ಶಕ್ತಿಗಳ ಕೈವಾಡದ ಬಗ್ಗೆ ಮಾಧ್ಯಮಗಳು ಹೇಳುತ್ತಿವೆ ಎಂದು ಹೇಳಿದರು.

Very soon monthly Four Marriages at least to take place in temples of Udupi and Mangalore says minister of Muzrai Kota Srinivas