ವೀರಕಂಭ ಗ್ರಾಪಂನಲ್ಲಿ ಹೈಡ್ರಾಮಾ ; ಬಿಜೆಪಿ, ಕಾಂಗ್ರೆಸ್ ಮಧ್ಯೆ ಹೊಯ್ದಾಟ ! ಬೆಳಗ್ಗೆ ಬಿಜೆಪಿ, ಸಂಜೆ ಕಾಂಗ್ರೆಸ್ !! 

07-02-21 09:59 pm       Mangaluru Correspondent   ಕರಾವಳಿ

ವೀರಕಂಭ ಗ್ರಾಮ ಪಂಚಾಯತಿಯಲ್ಲಿ ಹೈಡ್ರಾಮಾ ನಡೆದಿದೆ. ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಗೆದ್ದಿದ್ದ ಲಲಿತಾ ಬೆಳಗ್ಗೆ ಬಿಜೆಪಿ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದರು.

ಬಂಟ್ವಾಳ, ಫೆ.7: ವೀರಕಂಭ ಗ್ರಾಮ ಪಂಚಾಯತಿಯಲ್ಲಿ ಹೈಡ್ರಾಮಾ ನಡೆದಿದೆ. ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಗೆದ್ದಿದ್ದ ಲಲಿತಾ ಬೆಳಗ್ಗೆ ಬಿಜೆಪಿ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದರು. ಆದರೆ, ಸಂಜೆ ಮಾಜಿ ಸಚಿವ ರಮಾನಾಥ ರೈ ಸಮ್ಮುಖದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಬಾವುಟ ಪಡೆದು ಮರಳಿ ಪಕ್ಷ ಸೇರಿದ್ದಾರೆ. 

ವೀರಕಂಭ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಮಾನ ಬಲ ಹೊಂದಿದ್ದಾರೆ. ಹೀಗಾಗಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಯಾರಾದ್ರೂ ಸದಸ್ಯರು ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡಬೇಕಾಗಿದೆ. ಹೀಗಾಗಿ ಬಿಜೆಪಿ ಪ್ರಮುಖರು ಸೇರಿ ಒಬ್ಬ ಕಾಂಗ್ರೆಸ್ ಬೆಂಬಲಿತ ಸದಸ್ಯೆಯನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಯಶಸ್ವಿಯಾಗಿದ್ದರು. ಬೆಳಗ್ಗೆ ಬಿಜೆಪಿ ಶಾಸಕ ರಾಜೇಶ ನಾಯ್ಕ್ ನೇತೃತ್ವದಲ್ಲಿ ಲಲಿತಾರನ್ನು ಪಕ್ಷದ ಕಚೇರಿಯಲ್ಲಿ ಬಿಜೆಪಿ ಬಾವುಟ ನೀಡಿ ಬರಮಾಡಿ ಕೊಳ್ಳಲಾಗಿತ್ತು. 

ಆದರೆ, ಸಂಜೆ ವೇಳೆಗೆ ಮಾಜಿ ಶಾಸಕ ರಮಾನಾಥ ರೈ ಲಲಿತಾ ಅವರನ್ನು ಭೇಟಿಯಾಗಿ ಮನವೊಲಿಸಿದ್ದು ಮತ್ತೆ ತಮ್ಮ ಕಾಂಗ್ರೆಸ್ ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.