ವಂಚನೆ ಪ್ರಕರಣ ; ಬಂಧನ ವಾರೆಂಟ್ ಆಗಿದ್ದ ಪದ್ಮಜಾ ರಾವ್ ಗೆ ಮಂಗಳೂರಿನಲ್ಲೇ ಜಾಮೀನು

12-02-21 04:53 pm       Mangalore Correspondent   ಕರಾವಳಿ

ಚೆಕ್ ಬೌನ್ಸ್ ಪ್ರಕರಣದಲ್ಲಿ ಕನ್ನಡ ಚಿತ್ರನಟಿ ಪದ್ಮಜಾ ರಾವ್ ಇಂದು ಕೋರ್ಟಿಗೆ ಹಾಜರಾಗಿ ಜಾಮೀನು ಪಡೆದಿದ್ದಾರೆ.

ಮಂಗಳೂರು, ಫೆ.12: ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ರಹಿತ ಬಂಧನ ವಾರೆಂಟ್ ಆಗಿದ್ದ ಕನ್ನಡ ಚಿತ್ರನಟಿ ಪದ್ಮಜಾ ರಾವ್ ಇಂದು ಮಂಗಳೂರಿನ 5ನೇ ಜೆಎಂಎಫ್ ಕೋರ್ಟಿಗೆ ಹಾಜರಾಗಿ ಜಾಮೀನು ಪಡೆದಿದ್ದಾರೆ.

ಪದ್ಮಜಾ ರಾವ್ ಅವರನ್ನು ಬಂಧಿಸಿ, ಕರೆತರುವಂತೆ ಮಂಗಳೂರಿನ ಕೋರ್ಟ್ ಬೆಂಗಳೂರಿನ ಕಲಘಟ್ಟ ಪೊಲೀಸರಿಗೆ ವಾರೆಂಟ್ ನೀಡಿತ್ತು. ಅದರಂತೆ, ಪೊಲೀಸರು ಆಕೆಯನ್ನು ಬಂಧಿಸಿ ಮಾರ್ಚ್ 8ರಂದು ಕೋರ್ಟಿಗೆ ಹಾಜರು ಮಾಡಬೇಕಿತ್ತು. ಆದರೆ, ಪದ್ಮಜಾ ರಾವ್ ವಾರೆಂಟ್ ಆದೇಶದ ಪ್ರತಿ ಸಿಗುತ್ತಿದ್ದಂತೆ ತಮ್ಮ ವಕೀಲರ ಮೂಲಕ ಮಂಗಳೂರಿನ ಕೋರ್ಟಿಗೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ ಜಾಮೀನು ಪಡೆದಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಪದ್ಮಜಾ ರಾವ್, ನನಗೆ ನಮ್ಮ ಕಾನೂನು, ನ್ಯಾಯಾಂಗದ ಬಗ್ಗೆ ಸಂಪೂರ್ಣ ಭರವಸೆ ಇದೆ. ಜೊತೆಗೆ ನನ್ನ ಮೇಲೆ ನನಗೆ ಭರವಸೆ ಇದೆ. ಈ ಪ್ರಕರಣದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ನೀವೆಲ್ಲಾ ಕಾದು ನೋಡಬೇಕು, ಈಗ ಏನನ್ನೂ ಹೇಳಲು ಆಗುವುದಿಲ್ಲ ಎಂದು ಹೇಳಿದರು.

ತುಳು ಚಿತ್ರನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ತನ್ನಿಂದ 41 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾಗಿ ಪದ್ಮಜಾ ವಿರುದ್ಧ ಕೋರ್ಟಿಗೆ ದೂರು ಸಲ್ಲಿಸಿದ್ದರು. 2018ರಲ್ಲಿ ಚಾಲಿಪೋಲಿಲು ಚಿತ್ರಕ್ಕಾಗಿ ನಟಿಸಲು ಬಂದಿದ್ದ ವೇಳೆ ಪರಿಚಯ ಆಗಿದ್ದ ಪದ್ಮಜಾ, ಆಬಳಿಕ ಹಂತ ಹಂತವಾಗಿ ಹಣ ಪಡೆದಿದ್ದರು. ಹಣವನ್ನು ತನ್ನ ವೀರು ಟಾಕೀಸ್ ಪ್ರೊಡಕ್ಷನ್ ಹೌಸ್ ಹೆಸರಲ್ಲಿ ಚೆಕ್ ಮೂಲಕ ನೀಡಿದ್ದಾಗಿ ವೀರೇಂದ್ರ ಹೇಳಿಕೊಂಡಿದ್ದರು. 

Read: ತುಳು ಚಿತ್ರ ನಿರ್ದೇಶಕನಿಗೆ ವಂಚನೆ ; ಖ್ಯಾತ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರು ಕೋರ್ಟಿನಿಂದ ಬಂಧನ ವಾರಂಟ್

Kannada actor Padmaja Rao Actress gets anticipatory bail in Mangalore court over cheque bounce case which was issued by the Mangalore 5th Additional Court. A case was filed by Tulu Director Veerendra Shetty Kavoor.