ಟೂಲ್ ಕಿಟ್ ಷೇರ್ ಮಾಡಿದ್ದು ತಪ್ಪೇ ? ಏನೋ ಬಾಂಬ್ ರೀತಿ ವರ್ತಿಸುತ್ತಿದ್ದಾರೆ, ಅಪರಾಧ ಏನೆಂದು ಹೇಳಿಯಪ್ಪಾ..  

16-02-21 04:25 pm       Mangaluru Correspondant   ಕರಾವಳಿ

ಟೂಲ್ ಕಿಟ್ ಅಂದ್ರೇನು ಬಾಂಬ್ ತಯಾರಿ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿನಿ ಮಾಡಿರುವ ಅಪರಾಧ ಏನೆಂದು ರಾಜ್ಯ ಸರಕಾರದ ಗೃಹ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಮಂಗಳೂರು, ಫೆ.16: ಯಾರೋ ವಿದೇಶಿ ಸೆಲೆಬ್ರಿಟಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಾಕ್ಕೊಂಡಿದ್ದ ಟೂಲ್ ಕಿಟ್ ಅನ್ನು ವಿದ್ಯಾರ್ಥಿನಿ ಷೇರ್ ಮಾಡಿದ್ದಾರೆ. ಅದೇನು ದೊಡ್ಡ ಮಹಾಪರಾಧವಾಗುತ್ತದೆ. ಟೂಲ್ ಕಿಟ್ ಅಂದ್ರೇನು ಬಾಂಬ್ ತಯಾರಿ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿನಿ ಮಾಡಿರುವ ಅಪರಾಧ ಏನೆಂದು ರಾಜ್ಯ ಸರಕಾರದ ಗೃಹ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ದೆಹಲಿಯ ರೈತರ ಪ್ರತಿಭಟನೆ ವಿಚಾರದಲ್ಲಿ ವಿದೇಶಿ ಸೆಲೆಬ್ರಿಟಿಯ ಟೂಲ್ ಕಿಟ್ ಷೇರ್ ಮಾಡಿದ್ದ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ, 23ರ ವಿದ್ಯಾರ್ಥಿನಿ ದಿಶಾ ರವಿ ಬಂಧನಕ್ಕೆ ವ್ಯಾಪಕ ಆಕ್ರೋಶ ಕೇಳಿಬಂದಿದ್ದು, ಮಂಗಳೂರಿನಲ್ಲಿ ಯು.ಟಿ.ಖಾದರ್ ಕೂಡ ಕಿಡಿಕಾರಿದ್ದಾರೆ. ಟೂಲ್ ಕಿಟ್ ಅಂದ್ರೆ ನಮ್ಗೆ ಗೊತ್ತಿರುವ ಕನಿಷ್ಠ ಮಾಹಿತಿ ಪ್ರಕಾರ ನಮ್ಮ ಟೂರ್ ಪ್ರೋಗ್ರಾಂ ಇದ್ದ ಹಾಗೆ. ತಮ್ಮ ಖಾಸಗಿ ವಿಚಾರವನ್ನು ಅಲ್ಲಿ ಬರೆದುಕೊಂಡಿರುತ್ತಾರೆ. ಅದು ಓಪನ್ ಡಾಕ್ಯುಮೆಂಟ್, ಅದರಲ್ಲೇನು ವಿಶೇಷವಿಲ್ಲ. ಅದನ್ನು ದಿಶಾ ರವಿ ಷೇರ್ ಮಾಡಿದ್ದು ತಪ್ಪಾಗುತ್ತದೆಯೇ..?  ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡುವ ಸ್ವಾತಂತ್ರ್ಯ ಇಲ್ಲವೇ ? ಅಷ್ಟಕ್ಕೇ ಕೇಂದ್ರ ಸರಕಾರ ದಬ್ಬಾಳಿಕೆ ತೋರಿ ಬಂಧಿಸಿದ್ದು, ಅದನ್ನು ರಾಜ್ಯ ಸರಕಾರ ಮೌನವಾಗಿ ನೋಡಿ ಕೇಂದ್ರಕ್ಕೆ ಶರಣಾಗಿದ್ದು ತಪ್ಪು ಎಂದು ಖಾದರ್ ಹೇಳಿದರು.

ಈ ಬಗ್ಗೆ ರಾಜ್ಯದ ಜನತೆ ಕೇಳುತ್ತಿದ್ದಾರೆ. ದಿಶಾ ರವಿ ಮಾಡಿದ್ದ ಅಷ್ಟು ದೊಡ್ಡ ಅಪರಾಧ ಏನೆಂದು ರಾಜ್ಯದ ಗೃಹ ಇಲಾಖೆ ಸ್ಪಷ್ಟನೆ ನೀಡಬೇಕು. ರೈತರ ಪರವಾಗಿ ಸಾಮಾಜಿಕ ಕಾರ್ಯಕರ್ತರು ಧ್ವನಿ ಎತ್ತುತ್ತಿರುವುದನ್ನು ದಮನಿಸುವ ಪ್ರಯತ್ನ ಮಾಡಿದ್ದಾರೆ. ಕೇಂದ್ರದ ಏಜನ್ಸಿಗಳು ಏಕಾಏಕಿ ವಿದ್ಯಾರ್ಥಿನಿ ಒಬ್ಬಳನ್ನು ಬಂಧಿಸಿ ಕರೆದೊಯ್ಯಬೇಕಾದ್ರೆ ರಾಜ್ಯ ಸರಕಾರದ ಉತ್ತರ ಇಲ್ಲ ಎನ್ನುವ ವಿಚಾರ ನಾಚಿಕೆಗೇಡು. ಕನ್ನಡಿಗರ ರಕ್ಷಣೆ, ಕನ್ನಡಿಗರ ಹಕ್ಕನ್ನು ಕಾಪಾಡಲು ಸಾಧ್ಯವಾಗದ ರಾಜ್ಯ ಸರಕಾರ ಇರುವುದು ಯಾಕೆ ಎಂದು ಖಾದರ್ ಪ್ರಶ್ನೆ ಮಾಡಿದ್ದಾರೆ.

ಫರೀದ್ ಸ್ಮರಣಾರ್ಥ ಉಳ್ಳಾಲದಲ್ಲಿ ಕ್ರಿಕೆಟ್

ಉಳ್ಳಾಲದಲ್ಲಿ ಫೆ.16ರಿಂದ 21ರ ವರೆಗೆ ಮಾಜಿ ಶಾಸಕ ಯು.ಟಿ.ಫರೀದ್ ಸ್ಮರಣಾರ್ಥ ಯುಪಿಎಲ್ ಕ್ರಿಕೆಟ್ ಲೀಗ್ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ದೇಶದ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ. ಕ್ರಿಕೆಟಿನಲ್ಲಿ ಉಳ್ಳಾಲ ಕ್ಷೇತ್ರ ವ್ಯಾಪ್ತಿಯವರು ಮಾತ್ರ ಪಾಲ್ಗೊಳ್ಳಲು ಅವಕಾಶ ಇದೆ. ಎಲ್ಲರನ್ನು ಸೇರಿಸಿಕೊಂಡು ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಕ್ರಿಕೆಟ್ ಆಯೋಜನೆ ಮಾಡಲಾಗಿದೆ ಎಂದು ಖಾದರ್ ಹೇಳಿದರು.

ಉಳ್ಳಾಲದಲ್ಲಿ ಆಯುರ್ವೇದ ಆಸ್ಪತ್ರೆ

ಉಳ್ಳಾಲದಲ್ಲಿ ಆಯುರ್ವೇದ ಆಸ್ಪತ್ರೆ ನಿರ್ಮಾಣಕ್ಕೆ 35 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಆಗಲಿದ್ದು, ಗ್ರಾಮೀಣ ಭಾಗದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರಕಾರದಿಂದ ಆಯುರ್ವೇದ, ಯುನಾನಿ ಚಿಕಿತ್ಸೆ ಲಭ್ಯವಾಗಲಿದೆ. ತಾನು ಆರೋಗ್ಯ ಸಚಿವನಾಗಿದ್ದಾಗ ಇದನ್ನು ಮುತುವರ್ಜಿಯಿಂದ ಮಾಡಿದ್ದೇನೆ. ಯೋಗ ಮತ್ತು ಯುನಾನಿ ಚಿಕಿತ್ಸೆಯನ್ನೂ ಇದರಲ್ಲಿ ಒಳಗೊಂಡಿರುತ್ತದೆ ಎಂದು ಯು.ಟಿ.ಖಾದರ್ ಹೇಳಿದರು. 

MLA U T Khader on Tuesday February 16 condemned the arrest of Bengaluru-based climate activist Disha Ravi in connection with the 'toolkit' on farmers' protest that was posted by international teen climate activist Greta Thunberg.