ಸತ್ತು ಹೋಗಿದ್ದಾಗಿ ತಿಳಿದು ಅಪರಿಚಿತ ಶವಕ್ಕೆ ಸಂಸ್ಕಾರ ! ಉತ್ತರ ಕ್ರಿಯೆ ವೇಳೆಗೆ ವ್ಯಕ್ತಿ ಪ್ರತ್ಯಕ್ಷ ! ಗ್ರಾಮಸ್ಥರಿಗೆ ಶಾಕ್ 

17-02-21 01:10 pm       Mangaluru Correspondent   ಕರಾವಳಿ

ನಾಪತ್ತೆಯಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾಗಿ ತಿಳಿದು ಅಂತ್ಯಸಂಸ್ಕಾರ ನೆರವೇರಿಸಿ, ಉತ್ತರ ಕ್ರಿಯೆಗೆ ಸಿದ್ಧತೆ ನಡೆಸಿದ್ದ ಕುಟುಂಬಸ್ಥರಿಗೆ ಅಚ್ಚರಿ ಕಾದಿತ್ತು. ಸತ್ತು ಹೋಗಿದ್ದಾಗಿ ತಿಳಿದಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿ ಆಘಾತ ಮೂಡಿಸಿದ್ದಾರೆ. 

ಬೆಳ್ತಂಗಡಿ, ಫೆ.17: ನಾಪತ್ತೆಯಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾಗಿ ತಿಳಿದು ಅಂತ್ಯಸಂಸ್ಕಾರ ನೆರವೇರಿಸಿ, ಉತ್ತರ ಕ್ರಿಯೆಗೆ ಸಿದ್ಧತೆ ನಡೆಸಿದ್ದ ಕುಟುಂಬಸ್ಥರಿಗೆ ಅಚ್ಚರಿ ಕಾದಿತ್ತು. ಸತ್ತು ಹೋಗಿದ್ದಾಗಿ ತಿಳಿದಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿ ಆಘಾತ ಮೂಡಿಸಿದ್ದಾರೆ. 

ಗರ್ಡಾಡಿ ಗ್ರಾಮದ ನಿವಾಸಿ 60 ವರ್ಷದ ಶ್ರೀನಿವಾಸ ದೇವಾಡಿಗ ಜ.26 ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅವರ ಮಕ್ಕಳು ನಾಪತ್ತೆ ದೂರನ್ನೂ ಸಲ್ಲಿಸಿದ್ದರು. ಒಂದು ವಾರದ ಬಳಿಕ ಫೆ. 3ರಂದು ಓಡಿಲ್ನಾಳ ಗ್ರಾಮದ ಕುಲ್ಲುಂಜ ಕೆರೆಯಲ್ಲಿ ಅಪರಿಚಿತ ಶವ ತೇಲುತ್ತಿರುವುದು ಕಂಡುಬಂದಿತ್ತು. ಇದು ಶ್ರೀನಿವಾಸರದ್ದೇ ಶವ ಎಂಬ ಸುದ್ದಿ ಹರಡಿತ್ತು.

ಮೃತದೇಹವು ಕೊಳೆತ ಹಿನ್ನೆಲೆಯಲ್ಲಿ ಗುರುತು ಪತ್ತೆ ಹಚ್ಚಲು ಆಗಿರಲಿಲ್ಲ. ಕುಟುಂಬಸ್ಥರು ಬಳಿಕ ಶವ ಪಡೆದು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆನಂತರ ಉತ್ತರ ಕ್ರಿಯೆಗೆ ಮನೆಯಲ್ಲಿ ಸಿದ್ಧತೆ ನಡೆಸಲಾಗಿತ್ತು. ಆದರೆ 10 ದಿನಗಳ ಬಳಿಕ ನಾಪತ್ತೆಯಾಗಿದ್ದ ಶ್ರೀನಿವಾಸ ಜೀವಂತವಾಗಿ ಮನೆಗೆ ಮರಳಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಶ್ರೀನಿವಾಸ ಮದ್ಯ ಸೇವನೆ ಚಟಕ್ಕೆ ಬಿದ್ದಿದ್ದರು. ಕೆಲವೊಮ್ಮೆ ಮನೆಯಿಂದ ಹೊರ ಹೋಗಿ ಇರುತ್ತಿದ್ದ ಅವರು ವಾರಗಳ ಕಾಲ ಮನೆಗೆ ಬಾರದೇ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದರು. ಮತ್ತೊಂದಷ್ಟು ದಿನಗಳ ಬಳಿಕ ಮನೆಗೆ ಮರಳುತ್ತಿದ್ದರು. ಆದರೆ ಈ ಬಾರಿ ಕೆರೆಯಲ್ಲಿ ‌ಅಪರಿಚಿತ ಮೃತದೇಹ ಸಿಕ್ಕಾಗ ಮನೆಯವರು ಮತ್ತು ಊರವರು ಕೂಡ ಅದೇ ವ್ಯಕ್ತಿ ಎಂದುಕೊಂಡಿದ್ದರು. ಶ್ರೀನಿವಾಸ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರಬಹುದು ಅಂತ ಶಂಕೆ ವ್ಯಕ್ತಡಿಸಿದ್ದರು. ಆದರೆ, ಈಗ ಶ್ರೀನಿವಾಸ ನಾನಿನ್ನೂ ಸತ್ತಿಲ್ಲ ಅನ್ನುತ್ತಲೇ ಎಂದಿನಂತೆ ಊರಿಗೆ ಮರಳಿದ್ದರೆ, ಕೆರೆಯಲ್ಲಿ ಸಿಕ್ಕ ಶವ ಯಾರದ್ದೆಂದು ಕುತೂಹಲಕ್ಕೆ ಕಾರಣವಾಗಿದೆ. ಈ ಊರಿನ ವ್ಯಕ್ತಿಯದ್ದಲ್ಲ ಎನ್ನುತ್ತಿರುವ ಗ್ರಾಮಸ್ಥರಿಗೆ ಈಗ ನಿಗೂಢ ವ್ಯಕ್ತಿಯ ಶವದ ಬಗ್ಗೆ ಆತಂಕ, ಕುತೂಹಲ ಹೆಚ್ಚಿದೆ.

After the funeral and post-funeral rites were conducted, the man they thought had died, came alive and knocked at their doors at Belthangady in Mangalore.