ಹಗ್ಗದಲ್ಲಿ ಆಟವಾಡುತ್ತಿದ್ದ ಬಾಲಕ ಆಕಸ್ಮಿಕ ಸಾವು ; ಸಾವಿಗೆ ಶಿಕ್ಷಕರು ಬೈದಿದ್ದೇ ಕಾರಣ ; ದೂರಿನ ಬಗ್ಗೆ ತನಿಖೆ

22-02-21 11:42 am       Mangalore Correspondent   ಕರಾವಳಿ

ಬಾಲಕನ ಆಕಸ್ಮಿಕ ಸಾವಿಗೆ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕರು ಬೆದರಿಕೆ ಹಾಕಿದ್ದೇ ಕಾರಣ ಎಂದು ಆತನ ಪೋಷಕರು ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಮಂಗಳೂರು, ಫೆ.21: ಕೃಷ್ಣಾಪುರ 5ನೇ ಬ್ಲಾಕ್ ನಿವಾಸಿ ಕಾಟಿಪಳ್ಳದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ದರ್ಶನ್ (14) ಎಂಬ ಬಾಲಕನ ಆಕಸ್ಮಿಕ ಸಾವಿಗೆ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕರು ಬೆದರಿಕೆ ಹಾಕಿದ್ದೇ ಕಾರಣ ಎಂದು ಆತನ ಪೋಷಕರು ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ನನ್ನ ಮಗನ ಸಾವಿನ ಬಗ್ಗೆ ತನಿಖೆ ನಡೆಸಿ ಕಾರಣಕರ್ತರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಾಲಕ ದರ್ಶನ್ ತಂದೆ ಗೋಪಾಲ ಶೆಟ್ಟಿ ಎಂಬವರು ಸುರತ್ಕಲ್ ಠಾಣೆಗೆ ಶನಿವಾರ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಇಂದು ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಕ್ಲಾಸ್ ಟೀಚರ್‌ ಅನ್ನು ಠಾಣೆಗೆ ಕರೆಸಿ ಹೇಳಿಕೆ ಪಡೆದಿದ್ದಾರೆ.

ಬಾಲಕ ಫೆ.18ರಂದು ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗ್ಗದಲ್ಲಿ ಅಟವಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಬಿಗಿದು ಗಂಭೀರ ಗಾಯಗೊಂಡಿದ್ದ ಎಂದು ಆತನ ಮಾವ ಸುಧಾಕರ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.

9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಎಲ್ಲ ವಿಷಯಗಳಲ್ಲಿ ಫೇಲಾಗಿದ್ದ. ಅಲ್ಲದೆ ಕ್ಲಾಸ್ ರಿಪೋರ್ಟ್ ಕಾರ್ಡಿಗೆ ಹೆತ್ತವರ ಸಹಿಯನ್ನು ತಾನೇ ಮಾಡಿ ಶಿಕ್ಷಕರಿಗೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರ ಗೊತ್ತಾಗಿ ಶಿಕ್ಷಕರು ಬಾಲಕನನ್ನು ಬೈದಿದ್ದರು ಎನ್ನಲಾಗಿದೆ. ಅಷ್ಟಕ್ಕೇ ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಹಗ್ಗದಲ್ಲಿ ಆಟವಾಡುವಾಗ ಕುತ್ತಿಗೆ ಬಿಗಿದು ಆಕಸ್ಮಿಕ ಸಾವು ಕಂಡಿದ್ದನೇ ಅನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

In a tragic incident, a 14-year-old boy accidentally hanged himself while playing with a rope in Krishnapura, Surathkal in Mangalore. Parents demand for detailed probe on school.