ಧರ್ಮಸ್ಥಳದ ಹಳ್ಳಿಗಾಡಿನ ಯುವತಿಗೆ ಸಿವಿಲ್ ನ್ಯಾಯಾಧೀಶರ ಹುದ್ದೆ !

26-02-21 02:04 pm       Mangalore Correspondent   ಕರಾವಳಿ

ಕರ್ನಾಟಕ ಉಚ್ಚ ನ್ಯಾಯಾಲಯದ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಧರ್ಮಸ್ಥಳ ಮೂಲದ ಹಳ್ಳಿಗಾಡಿನ ಯುವತಿ ಚೇತನಾ ಉತ್ತೀರ್ಣರಾಗಿದ್ದಾರೆ.

ಮಂಗಳೂರು, ಫೆ.26 : ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಾಲಿನ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಧರ್ಮಸ್ಥಳ ಮೂಲದ ಹಳ್ಳಿಗಾಡಿನ ಯುವತಿ ಚೇತನಾ ಉತ್ತೀರ್ಣರಾಗಿದ್ದು ಕಿರಿಯ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶೆಯ ಹುದ್ದೆಗೇರಿದ್ದಾರೆ. 

29ರ ಹರೆಯದ ಚೇತನಾ, ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿಯಾಗಿದ್ದು ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ನಾಲ್ವರು ಮಕ್ಕಳ ಪೈಕಿ ಎರಡನೆಯವರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿ ಸಮೀಪದ ಸರಕಾರಿ ಪೆರ್ನೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಗಿಸಿದ ಅವರು ಏಳನೇ ತರಗತಿ ಶಿಕ್ಷಣವನ್ನು ಕನ್ಯಾಡಿ ಸರಕಾರಿ ಶಾಲೆಯಲ್ಲಿ ಪೂರೈಸಿದ್ದರು. ಪ್ರೌಢಶಾಲಾ ಶಿಕ್ಷಣವನ್ನು ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆಯಲ್ಲಿ ಪಡೆದರೆ, ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದ್ದರು. ಬಳಿಕ ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ 2016ನೇ ಇಸವಿಯಲ್ಲಿ ಕಾನೂನು ಪದವಿ ಮುಗಿಸಿದ್ದರು. 

ಕಾನೂನು ಪದವಿ ಬಳಿಕ ಬೆಳ್ತಂಗಡಿಯ ವಕೀಲ ಕೇಶವ ಪಿ. ಬೆಳಾಲು ಅವರ ಕಚೇರಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ಅವರ ಜೊತೆ ಲಾ ಕ್ಲಾರ್ಕ್ ರೀಸರ್ಚ್ ಅಸಿಸ್ಟೆಂಟ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿದರು. ಕಳೆದ ಒಂದು ವರ್ಷದಿಂದ ಬೆಂಗಳೂರಿನ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಅವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು. ಈ ಬಾರಿ ಸಿವಿಲ್ ಜಡ್ಜ್ ಪರೀಕ್ಷೆ ಬರೆದು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

Two woman advocates, Sparsha M D'Souza, Chethana from Dakshian Kannada district, have been chosen as civil judges after clearing the examination held recently for recruitment as judges.