ಮದುವೆ ದಿನ ರಾತ್ರಿಯೇ ವಧುವಿಗೆ ಹೃದಯಾಘಾತ, ಸಾವು ; ಕುಟುಂಬಕ್ಕೆ ಶಾಕ್

01-03-21 11:08 am       Mangalore Correspondent   ಕರಾವಳಿ

ಮದುವೆಯಾದ ದಿನವೇ ನವ ವಧು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಕಣ್ಣೂರಿನಲ್ಲಿ ನಡೆದಿದೆ. 

ಮಂಗಳೂರು, ಮಾ.1: ಮದುವೆಯಾದ ದಿನವೇ ನವ ವಧು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ನಗರದ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದೆ. 

ಅಡ್ಯಾರ್ ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಸೋಮವಾರ ಮುಂಜಾವಿನ ಸಮಯದಲ್ಲಿ ಸಾವು ಕಂಡಿದ್ದಾರೆ. 

ಭಾನುವಾರವಷ್ಟೇ ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ನಡೆದಿತ್ತು. ಅಡ್ಯಾರ್ ಕಣ್ಣೂರು ಜುಮಾ ಮಸ್ಜಿದ್‌ನಲ್ಲಿ ನಿಖಾ ನಡೆದಿತ್ತು. ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಬಳಿಕ ಸಂಪ್ರದಾಯದಂತೆ ಮದುಮಗ ಮುಬಾರಕ್ ಅತ್ತೆಯ ಮನೆಗೆ ಆಗಮಿಸಿದ್ದರು. ನವಜೋಡಿ ಅತ್ಯಂತ ಸಂತಸದಲ್ಲೇ ಇದ್ದರು. ಈ ನಡುವೆ ಒಂದು ರಾತ್ರಿ ಕಳೆಯುವಷ್ಟರಲ್ಲಿ ನವ ವಧುವಿಗೆ ಹೃದಯಾಘಾತ ಆಗಿದೆ ಎನ್ನಲಾಗುತ್ತಿದೆ. ಸೋಮವಾರ ಮುಂಜಾವಿನ 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಸಂತಸ, ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಶೋಕಸಾಗರ ಎದ್ದಿದೆ. ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದಾರೆ. ಇಂದು ಮಸೀದಿಯಲ್ಲಿ ಲುಹರ್ ನಮಾಝ್‌ ನಂತರ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Video: 

In a shocking incident reported from Adyar in Mangalore a bride who entered wedded life a few hours earlier died due to a Massive heart attack on Monday, March 1 morning. The deceased has been identified as Laila Afia (23) daughter of KHK Abdul Karim.