ಹೆಲ್ತ್ ಕೇರ್ ಸಾಮ್ರಾಜ್ಯ ಕುಸಿತದಲ್ಲಿ ನಾನು ಬಲಿಪಶು ; ಹಾಗಂತ ನಾನು ಎಲ್ಲೂ ಓಡಿ ಹೋಗಲ್ಲ ; ಉಡುಪಿಯಲ್ಲಿ ಬಿ.ಆರ್ ಶೆಟ್ಟಿ

01-03-21 02:47 pm       Udupi Correspondent   ಕರಾವಳಿ

ದುಬೈ ಜಗತ್ತಿನಲ್ಲಿ ಹೆಲ್ತ್ ಕೇರ್ ಸಾಮ್ರಾಜ್ಯ ಕಟ್ಟಿ ಸಿರಿವಂತನಾಗಿ ದಿಢೀರ್ ಕುಸಿತಕ್ಕೊಳಗಾಗಿ ದಿವಾಳಿಯಾಗಿದ್ದ ಉದ್ಯಮಿ ಬಿ.ಆರ್ ಶೆಟ್ಟಿ ಉಡುಪಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಉಡುಪಿ, ಮಾ.1; ದುಬೈ ಜಗತ್ತಿನಲ್ಲಿ ಹೆಲ್ತ್ ಕೇರ್ ಸಾಮ್ರಾಜ್ಯ ಕಟ್ಟಿ ಸಿರಿವಂತನಾಗಿ ದಿಢೀರ್ ಕುಸಿತಕ್ಕೊಳಗಾಗಿ ದಿವಾಳಿಯಾಗಿದ್ದ ಹೆಸರಾಂತ ಉದ್ಯಮಿ ಬಿ.ಆರ್ ಶೆಟ್ಟಿ ಉಡುಪಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ - ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದ್ದಾರೆ.‌

ಆಸ್ಪತ್ರೆಯಲ್ಲಿ ಹತ್ತು ಸಾವಿರದ ಮಗುವಿನ ಜನನ ಸಂದರ್ಭದ ಕಾರ್ಯಕ್ರಮಕ್ಕೆ ಬಿ.ಆರ್ ಶೆಟ್ಟಿ ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ತಮ್ಮ ಆರ್ಥಿಕ ಪತನ, ಸದ್ಯದ ಸ್ಥಿತಿಗತಿ ಬಗ್ಗೆ ಬಿ.ಆರ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 

ನಾನು ಎಲ್ಲೂ ಓಡಿ ಹೋಗಿಲ್ಲ, ಹೋಗುವುದೂ ಇಲ್ಲ. ನನ್ನ ಸಾಮ್ರಾಜ್ಯ ಪತನ ಆಗಿದ್ದು ನಿಜ. ಆದರೆ ಅದಕ್ಕೆ ನಾನು ಕಾರಣ ಅಲ್ಲ, ನಾನೊಬ್ಬ ಬಲಿಪಶು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಚರ್ಚೆ ಮಾಡಲು ನನಗೆ ನಾಚಿಕೆಯಾಗುತ್ತದೆ. ಈ ಹಿಂದೆ ನಾನು ಅವರ ಜೊತೆ ಮಾತನಾಡಿದ್ದೇನೆ. ಆದರೆ ಇವತ್ತಿನ ನನ್ನ ಪರಿಸ್ಥಿತಿಯಲ್ಲಿ ಅವರ ಮುಂದೆ ನಿಲ್ಲಲು ನನಗೆ ಮುಜುಗರ ಆಗುತ್ತದೆ ಎಂದು ಹೇಳಿದರು. 

ಮಾಧ್ಯಮದವರು ವಿಜಯ್ ಮಲ್ಯ ಮೋಸ ಮಾಡಿ ಓಡಿ ಹೋದ, ನೀರವ್ ಮಲ್ಯ ಬ್ಯಾಂಕುಗಳಿಗೆ ಮೋಸ ಮಾಡಿ ಓಡಿ ಹೋದ ಎಂದು ಬರೆಯುತ್ತಿದ್ದಾರೆ. ನಾಳೆ ಬಿ.ಆರ್ ಶೆಟ್ಟಿಯೂ ಓಡಿಹೋಗಿದ್ದಾಗಿ ಬರೆಯುತ್ತಾರೆ. ನಾನೆಲ್ಲಿಗೂ ಓಡಿ ಹೋಗಲ್ಲ. ನಾನು ಉಡುಪಿಯಲ್ಲೇ ಇರುತ್ತೇನೆ ಎಂದರು ಶೆಟ್ಟಿ. 

ಉಡುಪಿಯಲ್ಲಿ ನನ್ನ ಕನಸಿನ ಕೂಸು ಬಿ.ಆರ್.ಎಸ್ ಲೈಫ್ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತೇನೆ. ಅದೇ ರೀತಿ ಹಾಜಿ ಅಬ್ದುಲ್ಲಾ ಶಂಭು ಶೆಟ್ಟಿ ಸ್ಮಾರಕ ಸರಕಾರಿ ಆಸ್ಪತ್ರೆಯನ್ನು ಇನ್ನಷ್ಟು ಚೆನ್ನಾಗಿ ನಡೆಸಿಕೊಂಡು ಹೋಗುತ್ತೇನೆ. ಉಡುಪಿಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವ ಉದ್ದೇಶ ಇದೆ. ನನ್ನ ಆರ್ಥಿಕ ಪತನದ ಬಗ್ಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ, ಅದೀಗ ಕೋರ್ಟ್ ಅಂಗಳದಲ್ಲಿದೆ ಎಂದು ಹೇಳಿದರು.

UAE based billionaire accused of fraud B R Shetty was today spotted in Udupi. Speaking to media persons he said I won't run Like Malya or Nirav Modi.