ತಲಪಾಡಿ : ಮರಳು ದಂಧೆಕೋರರ ಕತ್ತಲ ಮಾಫಿಯಾಕ್ಕಾಗಿ ಹೈಮಾಸ್ಕ್ ದೀಪವೇ ಸ್ಥಳಾಂತರ ! ದಿಕ್ಕು ತಪ್ಪಿದ ಸಿಸಿಟಿವಿ !

09-03-21 01:51 pm       Mangalore Correspondent   ಕರಾವಳಿ

ಸಾರ್ವಜನಿಕರ ಉಪಯೋಗಕ್ಕೆಂದು ಕ್ಷೇತ್ರದ ಶಾಸಕರ ಅನುದಾನದಲ್ಲಿ ಹಾಕಲಾಗಿದ್ದ ಹೈಮಾಸ್ಕ್ ದೀಪವನ್ನು ಹತ್ತಿರದ ರಂಗಮಂದಿರದ ಮೈದಾನಕ್ಕೆ ರಾತೋರಾತ್ರಿ ಸ್ಥಳಾಂತರಿಸಲಾಗಿದೆ

ಉಳ್ಳಾಲ, ಮಾ.9: ತಲಪಾಡಿಯಲ್ಲಿ ಅಕ್ರಮ ಮರಳುಗಾರಿಕೆ ಮಾಫಿಯಾದ ಕಬಂಧಬಾಹು ವ್ಯಾಪಿಸುತ್ತಿದ್ದು ಸಿಸಿ ಕ್ಯಾಮರಾಗಳ ಕಣ್ಣು ತಪ್ಪಿಸುವ ಪ್ರಯತ್ನ ನಡೆದಿದೆ. ಕತ್ತಲಿನಲ್ಲಿ ಅಕ್ರಮ ಮರಳು ಸಾಗಿಸುವ ಲಾರಿಗಳು ಸಿಸಿ ಕ್ಯಾಮರಾಗಳಿಗೆ ಕಾಣಬಾರದೆಂಬ ಉದ್ದೇಶದಿಂದ ಸಾರ್ವಜನಿಕರ ಉಪಯೋಗಕ್ಕೆ ಹಾಕಿದ್ದ ಹೈಮಾಸ್ಕ್ ದೀಪವನ್ನು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ಬಾರದಂತೆ ಕಾನೂನು ಬಾಹಿರವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ತಲಪಾಡಿ ದೇವಿಪುರದ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದು ಕ್ಷೇತ್ರದ ಶಾಸಕರ ಅನುದಾನದಲ್ಲಿ ಹಾಕಲಾಗಿದ್ದ ಹೈಮಾಸ್ಕ್ ದೀಪವನ್ನು ಹತ್ತಿರದ ರಂಗಮಂದಿರದ ಮೈದಾನಕ್ಕೆ ರಾತೋರಾತ್ರಿ ಸ್ಥಳಾಂತರಿಸಲಾಗಿದೆ. ಕೆಳ ದಿನಗಳ ಹಿಂದೆ ದೇವಸ್ಥಾನದ ಮುಂಭಾಗದಿಂದ ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖ ಚಲಿಸಿ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಟಿಪ್ಪರ್ ಉರುಳಿ ಬಿದ್ದ ದೃಶ್ಯ ದೇವಸ್ಥಾನದ ಸಿಸಿ ಟಿವಿಯಲ್ಲಿ ದಾಖಲಾಗಿ ಅಕ್ರಮ ಮರಳುಗಾರಿಕೆಗೆ ಬಲವಾದ ಸಾಕ್ಷ್ಯವನ್ನು ನೀಡಿದ್ದಲ್ಲದೆ, ಖುದ್ದು ಕಮೀಷನರ್, ಡಿಸಿಪಿ ಜೋಡಿ ಮಧ್ಯರಾತ್ರಿಯಲ್ಲಿ ಮಫ್ತಿಯಲ್ಲಿ ಬಂದು ತಲಪಾಡಿ ಟೋಲ್ ಹಾದು ಹೋಗುತ್ತಿದ್ದ ಅಕ್ರಮ ಮರಳು ಲಾರಿಯನ್ನು ವಶಪಡಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.

ದಿಕ್ಕು ಬದಲಿಸಿದ ಸಿಸಿ ಕ್ಯಾಮೆರಾ, ಹೈಮಾಸ್ಕ್ ಸ್ಥಳಾಂತರ ! 

ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮರಾವನ್ನು ಈಗ ಕ್ಷೇತ್ರದ ಮುಂಭಾಗದ ಅಶ್ವತ್ಥ ಮರದ ರೆಂಬೆಗಳ ಎಡೆಯಲ್ಲಿ ಸಿಲುಕಿಸಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಅಕ್ರಮ ಮರಳುಗಾರಿಕೆಯ ಜೊತೆ ದೇವಸ್ಥಾನದ ಸಿಬ್ಬಂದಿಯೋರ್ವರು ಶಾಮೀಲಾಗಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಮರಳು ಸಾಗಾಟದ ದಶ್ಯಗಳು ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಬಾರದೆಂಬ ದುರುದ್ದೇಶದಿಂದ ದೇವಸ್ಥಾನ ಸಿಬ್ಬಂದಿಯೇ ಕ್ಯಾಮರಾಗಳ ಸ್ಥಾನ ಪಲ್ಲಟ ನಡೆಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ದೇವಸ್ಥಾನದ ಮುಂಭಾಗದಲ್ಲೇ ಭಕ್ತಾದಿಗಳ ಉಪಯೋಗಕ್ಕಾಗಿ ಹಾಕಲಾಗಿದ್ದ ಬೃಹತ್  ಹೈಮಾಸ್ಕ್ ದೀಪವನ್ನು ಹತ್ತಿರದಲ್ಲಿರುವ ರಂಗ ಮಂದಿರದ ಮೈದಾನಕ್ಕೆ ರಾತ್ರೋರಾತ್ರಿ ಕಾನೂನು ಬಾಹಿರವಾಗಿ ಸ್ಥಳಾಂತರಿಸಲಾಗಿದೆ. ಸ್ಥಳೀಯ ಮೆಸ್ಕಾಂ ಸಿಬ್ಬಂದಿಯೇ ಮರಳು ಮಾಫಿಯಾದವರಿಂದ  ಹಣ ಪಡೆದು ಹೈಮಾಸ್ಕ್ ದೀಪವನ್ನು ಸ್ಥಳಾಂತರಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಸಾರ್ವಜನಿಕ ಸೊತ್ತುಗಳನ್ನು ಸ್ಥಳೀಯ ಪಂಚಾಯತ್ ಆಡಳಿತದ ಗಮನಕ್ಕೆ ತರದೆ ಸ್ಥಳಾಂತರಿಸುವಂತಿಲ್ಲ. ಆದರೆ ಇಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಹಾಕಲಾಗಿದ್ದ ಹೈಮಾಸ್ಕ್ ದೀಪವನ್ನೇ ಕಾನೂನು ಬಾಹಿರವಾಗಿ ಸ್ಥಳಾಂತರಿಸಿದ್ದು ತಪ್ಪಿತಸ್ಥರ ವಿರುದ್ಧ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಲು ಇನ್ನೂ ಮುಂದಾಗಿಲ್ಲ. ಈ ಬಗ್ಗೆ ತಲಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ ಅವರಲ್ಲಿ ಕೇಳಿದರೆ, ತನ್ನ ಗಮನಕ್ಕೆ ಇದು ಬಂದಿಲ್ಲ. ಹೈಮಾಸ್ಕ್ ದೀಪ ಸ್ಥಳಾಂತರದ ಬಗ್ಗೆ ಪಂಚಾಯತ್ ಆಡಳಿತದ ಅನುಮತಿಯನ್ನೂ ಪಡೆದಿಲ್ಲ. ಸ್ಥಳೀಯ ಪಂಚಾಯತ್ ಸದಸ್ಯ ಶೈಲೇಶ್ ಅವರಲ್ಲಿ ತಾನು ವಿಚಾರಿಸಿದ್ದು ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಸುವ ಉದ್ದೇಶಕ್ಕಾಗಿ ಹೈಮಾಸ್ಕನ್ನು ಸ್ಥಳಾಂತರಿಸಿರುವುದಾಗಿ ಸಬೂಬು ನೀಡಿದ್ದಾರಂತೆ. ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಸದ್ಯ ಅಲ್ಲಿರುವ ವ್ಯವಸ್ಥಾಪನಾ ಸಮಿತಿ ಬರ್ಖಾಸ್ತುಗೊಂಡಿದೆ. ನೂತನ ಸಮಿತಿ ಇನ್ನೂ ರಚನೆ ಆಗಿಲ್ಲ. ಹಾಗಾಗಿ ದೇವಸ್ಥಾನದ ಸಿಬ್ಬಂದಿಯೋರ್ವನೇ ಕೆಲ ಅಕ್ರಮಗಳಿಗೆ ಬೆಂಬಲವಾಗಿ ನಿಂತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ‌.

ಹೈಮಾಸ್ಕನ್ನು ಕಾನೂನು ಬಾಹಿರವಾಗಿ ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರೊಬ್ಬರು ಫೋನ್ ಮೂಲಕ ಪಿಡಿಓಗೆ ದೂರು ನೀಡಿದ್ದು, ಪಿಡಿಓ ಸಾಹೇಬರು ಮಾತ್ರ ಕ್ರಮ ಕೈಗೊಳ್ಳ ಬೇಕಾದರೆ ಲಿಖಿತ ದೂರೇ ನೀಡಬೇಕೆಂದು ಹಠಕ್ಕೆ ಬಿದ್ದಿದ್ದಾರಂತೆ. ಪ್ರಭಾವಿ ಮರಳು ಮಾಫಿಯಾದವರ ವಿರುದ್ಧ ಲಿಖಿತ ದೂರು ನೀಡುವ ಸಾಹಸ ಯಾರೂ ಮಾಡಲ್ಲವೆಂಬ ಲೆಕ್ಕಾಚಾರದಲ್ಲಿ ಪಿಡಿಓ ಅಧಿಕಾರಿಯೂ ಮರಳು ಮಾಫಿಯಾಕ್ಕೆ ಸಾಥ್ ಕೊಟ್ಟಿರುವ ಆರೋಪ ಕೇಳಿಬರುತ್ತಿದೆ.

Raed: ತಲಪಾಡಿಯಲ್ಲಿ ಅಕ್ರಮ ಮರಳು ಸಾಗಾಟಕ್ಕಿಲ್ಲ ಕಡಿವಾಣ : ಟಿಪ್ಪರ್ ಪಲ್ಟಿ ; ಮಹಿಳೆ ಪಾರು !

Amid strict police surveillance illegal sand mafia is still moving in secret ways of Talapady in Mangalore. Recently city police had raided several spots yet these sand miners have made their ways to transport.