ಕ್ಷುಲ್ಲಕ ವಿಚಾರಕ್ಕೆ ಹೊಡೆದಾಡಿ ಆಸ್ಪತ್ರೆಗೆ ದಾಖಲಾದ ಯುವಕರು ; ಉಳ್ಳಾಲ ಪೊಲೀಸರಿಂದ ಹಲ್ಲೆ ಆರೋಪ

15-03-21 05:02 pm       Mangalore Correspondent   ಕರಾವಳಿ

ವಿಭಿನ್ನ ಕೋಮಿನ ಯುವಕರು ಸೈಡ್ ಕೊಡದ ವಿಚಾರದಲ್ಲಿ ತಗಾದೆ ತೆಗೆದು ಹೊಡೆದಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಮಂಗಳೂರು, ಮಾ.15: ಎರಡು ಬೈಕ್ ಗಳಲ್ಲಿ ಪ್ರಯಾಣಿಸುತ್ತಿದ್ದ ವಿಭಿನ್ನ ಕೋಮಿನ ಯುವಕರು ಸೈಡ್ ಕೊಡದ ವಿಚಾರದಲ್ಲಿ ತಗಾದೆ ತೆಗೆದು ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಶನಿವಾರ ರಾತ್ರಿ ಸಿರಾಜ್, ಹಸನ್ ಮತ್ತು ಹಿನಾಯತ್ ಎಂಬವರು ಒಂದೇ ಬೈಕಿನಲ್ಲಿ ಮಂಗಳೂರಿನಿಂದ ತೊಕ್ಕೊಟ್ಟಿನತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ, ಜತಿನ್ ಮತ್ತು ನಿತಿನ್ ಎಂಬ ಯುವಕರು ಬೈಕಿನಲ್ಲಿ ತೊಕ್ಕೊಟ್ಟಿಗೆ ತೆರಳುತ್ತಿದ್ದು ಕಲ್ಲಾಪಿನಲ್ಲಿ ಎರಡು ತಂಡಗಳ ನಡುವೆ ಜಗಳ ನಡೆದಿದೆ. ಬೈಕ್ ನಿಲ್ಲಿಸಿ, ಕೈಯಿಂದ ಹೊಡೆದಾಡಿದ್ದು, ಬಳಿಕ ಪೊಲೀಸರು ಬಂದು ಎರಡೂ ಕಡೆಯ ಹುಡುಗರನ್ನು ವಶಕ್ಕೆ ಪಡೆದು ಉಳ್ಳಾಲ ಠಾಣೆಗೆ ಒಯ್ದು ಕೂರಿಸಿದ್ದರು.

ಗಾಂಜಾ ಮತ್ತು ಮದ್ಯದ ನಶೆಯಲ್ಲಿ ಹೊಡೆದಾಟ ನಡೆದಿತ್ತೆಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿತ್ತು. ಪೊಲೀಸರು ಬಳಿಕ ಎರಡೂ ಕಡೆಯ ಯುವಕರನ್ನು ಸೆಕ್ಷನ್ 323 ಮತ್ತು 279 ಪ್ರಕಾರ ಕೇಸು ಬರೆಸಿಕೊಂಡು ಸ್ಟೇಶನ್ ಜಾಮೀನಲ್ಲೇ ಬಿಡುಗುಡೆ ಮಾಡಿದ್ದರು. ಬೆಳಗ್ಗಿನ ವರೆಗೆ ಠಾಣೆಯಲ್ಲಿ ಇರಿಸಿಕೊಂಡು ಗಾಂಜಾ ಮತ್ತು ಮದ್ಯದ ನಶೆಯ ಬಗ್ಗೆ ಮೆಡಿಕಲ್ ಮಾಡಿಸಿ, ಕಳಿಸಿದ್ದರು. ಗಾಂಜಾ ಸೇವಿಸಿದ್ದ ಬಗ್ಗೆ ವರದಿಯಲ್ಲಿ ಪಾಸಿಟಿವ್ ಆಗಿಲ್ಲ. ಮದ್ಯದ ಸೇವಿಸಿದ್ದುದು ಪತ್ತೆಯಾಗಿತ್ತು.

ಪೊಲೀಸರ ವಿರುದ್ಧ ಪಿಎಫ್ಐ ಪ್ರತಿಭಟನೆ

ಆದರೆ, ಠಾಣೆಯಿಂದ ಬಿಡುಗಡೆಯಾಗಿದ್ದ ಮೂವರು ಯುವಕರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಉಳ್ಳಾಲ ಪೊಲೀಸರು ಠಾಣೆಯಲ್ಲಿ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ. ಸಿರಾಜ್, ಹಸನ್ ಮತ್ತು ಹಿನಾಯತ್ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿದ್ದು, ಸಂಘಟನೆ ವತಿಯಿಂದ ಮಂಗಳೂರಿನ ಜ್ಯೋತಿ ವೃತ್ತದಲ್ಲಿ ವಿದ್ಯಾರ್ಥಿಗಳು ಸೇರಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಇನ್ನೊಂದು ತಂಡದ ಒಬ್ಬಾತ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ತಾವೇ ಹೊಡೆದಾಡಿ ಪೊಲೀಸರಿಗೆ ಆರೋಪ

ಈ ಬಗ್ಗೆ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್ ಬಳಿ ಕೇಳಿದಾಗ, ಎರಡೂ ತಂಡಗಳು ತಾವೇ ಹೊಡೆದಾಡಿಕೊಂಡು ಅದರಿಂದ ಕೈ ಮತ್ತು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅದರಿಂದ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅದನ್ನೇ ಮುಂದಿಟ್ಟು ಈಗ ಪೊಲೀಸರು ಹಲ್ಲೆ ನಡೆಸಿದ್ದಾಗಿ ಆರೋಪ ಮಾಡುತ್ತಿದ್ದಾರೆ. ಹಿಂದು- ಮುಸ್ಲಿಂ ಯುವಕರಾಗಿದ್ದರಿಂದ ಅದು ಕೋಮು ದ್ವೇಷಕ್ಕೆ ತಿರುಗಬಾರದು ಎಂದು ಸಣ್ಣ ಮಟ್ಟಿನ ಕೇಸು ದಾಖಲಿಸಿ, ಹಿಂದಕ್ಕೆ ಕಳಿಸಿದ್ದೆವು. ಯುವಕರ ಭವಿಷ್ಯ ಹಾಳಾಗಬಾರದೆಂಬ ಕಾಳಜಿಯಿಂದ 307 ಕೇಸ್ ಬುಕ್ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. 

After a bike accident there was a clash between two groups and also the arrested youths have alleged of brutal assault by the Ullal police.