ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏಳು ಪರಿಷತ್ ಸ್ಥಾನಗಳಿಗೆ ಚುನಾವಣೆ ಹಿನ್ನೆಲೆ, ನಾಯಕತ್ವ ಬದಲಾವಣೆ ಮತ್ತೆ ಮುಂದಕ್ಕೆ !

29-04-26 10:36 am       HK News Staffer   ಕರ್ನಾಟಕ

ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ, ಸಿಎಂ ಬದಲಾಗುತ್ತಾರೆ ಎಂಬ ವದಂತಿ ಹರಡಿರುವಾಗಲೇ ಮತ್ತೊಂದು ವಾದವೂ ಹರಡಿದೆ. ಮೇ- ಜೂನ್ ವೇಳೆಗೆ ರಾಜ್ಯಸಭೆ ಚುನಾವಣೆಯಿದ್ದು ಹೈಕಮಾಂಡ್ ಡಿಕೆಶಿಗೆ ಮತ್ತೆ ಕಾರಣ ಕೊಟ್ಟು ಅಧಿಕಾರ ಹಸ್ತಾಂತರ ಮುಂದಕ್ಕೆ ಹಾಕಲಿದೆ ಎಂದು ಸುದ್ದಿ ಹಬ್ಬಿದೆ.

ಬೆಂಗಳೂರು, ಎಪ್ರಿಲ್ 29: ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ, ಸಿಎಂ ಬದಲಾಗುತ್ತಾರೆ ಎಂಬ ವದಂತಿ ಹರಡಿರುವಾಗಲೇ ಮತ್ತೊಂದು ವಾದವೂ ಹರಡಿದೆ. ಮೇ- ಜೂನ್ ವೇಳೆಗೆ ರಾಜ್ಯಸಭೆ ಚುನಾವಣೆಯಿದ್ದು ಹೈಕಮಾಂಡ್ ಡಿಕೆಶಿಗೆ ಮತ್ತೆ ಕಾರಣ ಕೊಟ್ಟು ಅಧಿಕಾರ ಹಸ್ತಾಂತರ ಮುಂದಕ್ಕೆ ಹಾಕಲಿದೆ ಎಂದು ಸುದ್ದಿ ಹಬ್ಬಿದೆ. 

ಅಸೆಂಬ್ಲಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸಂಪುಟ ಪುನರ್ರಚನೆ ಮತ್ತು ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಲಿದೆ ಎಂದು ಹೇಳಲಾಗುತ್ತಿದ್ದರೂ ಮೇ, ಜೂನ್‌ನಲ್ಲಿ ಕರ್ನಾಟಕದ ನಾಲ್ಕು ರಾಜ್ಯಸಭೆ ಮತ್ತು ಏಳು ಪರಿಷತ್ ಸ್ಥಾನಗಳಿಗೆ ಚುನಾವಣೆ ಇರುವುದರಿಂದ ಹೈಕಮಾಂಡ್ ನಾಯಕತ್ವ ಬದಲಾವಣೆ ವಿಚಾರವನ್ನು ಮತ್ತಷ್ಟು ಮುಂದೂಡಬಹುದು ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಜೂನ್ 25ರಂದು ಕೊನೆಗೊಳ್ಳಲಿದ್ದು, ದ್ವೈವಾರ್ಷಿಕ ಚುನಾವಣೆಗೆ ಜೂನ್ ಮೊದಲ ವಾರದಲ್ಲಿ ಅಧಿಸೂಚನೆ ಪ್ರಕಟಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆಲ್ಲಬಹುದಾದ್ದರಿಂದ ಈ ಚುನಾವಣೆ ನಿರ್ಣಾಯಕ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಪರಿಷತ್ತಿನ ಕಾಂಗ್ರೆಸ್ ಮುಖ್ಯ ಸಚೇತಕ, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಸಲೀಂ ಅಹ್ಮದ್, ಮೇ 20ರ ಮೊದಲು ಸಚಿವ ಸಂಪುಟ ಪುನರ್ರಚನೆ ಮಾಡಲಾಗುವುದು ಎಂದು ಹೇಳಿದರೆ, ಕಲಬುರಗಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರುವ ಜೇವರ್ಗಿ ಶಾಸಕ ಅಜಯ್ ಸಿಂಗ್ ಜೂನ್‌ನಲ್ಲಿ ಪುನರ್ರಚನೆ ಆಗಬಹುದು ಎಂದು ಹೇಳಿದ್ದಾರೆ. ಡಿಕೆಶಿ ಸಂಬಂಧಿಯೂ ಆಗಿರುವ ಕುಣಿಗಲ್ ಶಾಸಕ ಎಚ್‌.ಡಿ ರಂಗನಾಥ್, ಹೈಕಮಾಂಡ್ ಮೇ 15ರಂದು ಡಿಕೆ ಶಿವಕುಮಾರ್ ಜನ್ಮದಿನದಂದು ಶುಭಸುದ್ದಿ ನೀಡಲಿದೆ ಎಂದು ಹೇಳಿದ್ದಾರೆ. ಆದರೆ ಹೈಕಮಾಂಡ್ ಸೇಫ್ ಝೋನ್ ಆಟವನ್ನೇ ನೆಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ.