ಬ್ಲಾಕ್ ಮನಿ ಇರುತ್ತಿದ್ದ ಒಂಟಿ ಮನೆಗಳೇ ಟಾರ್ಗೆಟ್ ; ಸಂಭಾವಿತರ ಸೋಗಿನಲ್ಲಿದ್ದ ಹೈಕ್ಲಾಸ್ ದರೋಡೆ ತಂಡ ಬಲೆಗೆ

03-04-21 04:59 pm       Mangalore Correspondent   ಕರಾವಳಿ

ಅಂತರ್ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿದ್ದ ಖತರ್ನಾಕ್ ದರೋಡೆ ಗ್ಯಾಂಗ್ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದೆ.

ಮಂಗಳೂರು, ಎ.3: ಅವರದ್ದು ಭಾರೀ ಖತರ್ನಾಕ್ ಮತ್ತು ಅಷ್ಟೇ ಕರಾರುವಾಕ್ಕಾದ ಕೃತ್ಯಗಳು. ಒಂಟಿ ಮನೆಗಳಲ್ಲಿ ಕಳವು, ಕ್ಯತ್ಯಕ್ಕೆ ಅಡ್ಡಬಂದರೆ ದರೋಡೆ, ಡಕಾಯಿತಿ ಇತ್ಯಾದಿ. ಬೆಳ್ತಂಗಡಿ, ಮೂಡುಬಿದ್ರೆ, ಉಳ್ಳಾಲದವರೇ ಸೇರಿಕೊಂಡು ಪ್ರತ್ಯೇಕ ತಂಡಗಳಲ್ಲಾಗಿ ಕೃತ್ಯ ಎಸಗುತ್ತಿದ್ದರು. ಆದರೆ, ಎಷ್ಟೇ ಚಾಣಾಕ್ಷ ಆಗಿದ್ದರೂ, ಎಲ್ಲಾದ್ರೂ ಒಂದ್ಕಡೆ ಸಿಕ್ಕಿಬಿದ್ದೇ ಬೀಳುತ್ತಾನೆ ಎನ್ನುವ ಪೊಲೀಸ್ ನಿಯಮದಂತೆ ಅಂತರ್ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿದ್ದ ಖತರ್ನಾಕ್ ದರೋಡೆ ಗ್ಯಾಂಗ್ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದೆ.

ನಾಲ್ಕು ದಿನಗಳ ಹಿಂದೆ ಮೂಡುಬಿದ್ರೆ ಆಸುಪಾಸಿನಲ್ಲಿ ಒಂದೇ ರಾತ್ರಿಯಲ್ಲಿ ನಾಲ್ಕು ಕಡೆ ದರೋಡೆ ಕೃತ್ಯಗಳು ನಡೆದಿದ್ದವು. ಎರಡು ಮನೆ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ಕಾರು ಮತ್ತು ಬೈಕ್ ಅಡ್ಡಗಟ್ಟಿ ಪ್ರಯಾಣಿಕರನ್ನು ದರೋಡೆ ನಡೆಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಅಷ್ಟೇ ಕರಾರುವಾಕ್ಕಾಗಿ ಕಾರ್ಯಾಚರಣೆಗೆ ಸೂಚನೆ ನೀಡಿದ್ದರು. ಮೂಡುಬಿದ್ರೆ ಇನ್ ಸ್ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದಲ್ಲಿ ಐದು ತಂಡಗಳನ್ನು ಕಾರ್ಯಾಚರಣೆಗೆ ಇಳಿಸಿದ್ದರು. ಈ ವೇಳೆ ಚೆಕ್ ಪೋಸ್ಟ್ ಹಾಕಿ, ತಪಾಸಣೆ ನಡೆಸುತ್ತಿದ್ದಾಗ ಇಬ್ಬರು ಸಿಕ್ಕಿಬಿದ್ದಿದ್ದು, ಇಡೀ ದರೋಡೆ ಜಾಲದ ಬುಡವನ್ನೇ ಸಿಕ್ಕಿಸಿಹಾಕಿದ್ದಾರೆ.

ಸದ್ಯಕ್ಕೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ, ಬೆಂಗಳೂರು, ಚಿಕ್ಕಮಗಳೂರು, ಹಾಸನದಲ್ಲಿ 12ಕ್ಕೂ ಹೆಚ್ಚು ದರೋಡೆ, ಮನೆಗಳ್ಳತನ ಕೃತ್ಯ ಎಸಗಿರುವುದು ಕಂಡುಬಂದಿದೆ. ಇನ್ನೂ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇವರ ಭಾಗೀದಾರಿಕೆ ಇರುವ ಸಾಧ್ಯತೆಯಿದೆ. ಪ್ರತ್ಯೇಕವಾಗಿ ನಾಲ್ಕು ಗ್ಯಾಂಗ್ ಕಟ್ಟಿಕೊಂಡು ದರೋಡೆ ಕೃತ್ಯ ಎಸಗುತ್ತಿದ್ದರು. ಇದರಲ್ಲಿ ಏನಿಲ್ಲ ಅಂದ್ರೂ ಇನ್ನೂ 50ಕ್ಕೂ ಹೆಚ್ಚು ಮಂದಿ ಇರುವ ಸಾಧ್ಯತೆಯಿದೆ, ಮಂಗಳೂರು ಮತ್ತು ಬೆಳ್ತಂಗಡಿ ಭಾಗದ ನಾಲ್ಕು ಮಂದಿ ಕಿಂಗ್ ಪಿನ್ ಗಳಿದ್ದಾರೆ. ಅವರನ್ನು ಸದ್ಯದಲ್ಲೇ ಬಂಧಿಸುತ್ತೇವೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಕೊಕ್ಕಡದಲ್ಲಿ ದಂಪತಿ ಕಟ್ಟಿಹಾಕಿ ದರೋಡೆ

ಮೂಲ್ಕಿಯ ಅಬ್ದುಲ್ ರವೂಫ್, ಬೆಂಗಳೂರಿನ ವಿಜಯನಗರದ ರಾಮಮೂರ್ತಿ, ಅಶ್ರಫ್ ಪೆರಾಡಿ, ಸಂತೋಷ್, ನವೀದ್, ಮೂಡುಬಿದ್ರೆಯ ರಮಾನಂದ ಎನ್. ಶೆಟ್ಟಿ, ಸುಮನ್, ಸಿದ್ದಿಕ್, ಭದ್ರಾವತಿ ಮೂಲದ ಆಲಿಕೋಯ ಬಂಧಿತರು. ಇವರೆಲ್ಲರ ವಿರುದ್ಧವೂ ಮಂಗಳೂರು, ಬೆಂಗಳೂರು, ಶಿವಮೊಗ್ಗ ಸೇರಿ ಸರಾಸರಿ ಏಳೆಂಟು ಪ್ರಕರಣಗಳು ದಾಖಲಾಗಿವೆ. ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಧರ್ಮಸ್ಥಳ ಬಳಿಯ ಕೊಕ್ಕಡದಲ್ಲಿ ದಂಪತಿಯನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣ ಸೇರಿದಂತೆ ಉಪ್ಪಿನಂಗಡಿ, ಹಾಸನದ ಅರೆಹಳ್ಳಿ, ಪುಂಜಾಲಕಟ್ಟೆ ಠಾಣೆಯಲ್ಲಿ ಎರಡು ಪ್ರಕರಣ ಬೆಂಗಳೂರಿನ ವಿಜಯನಗರ, ಮೂಡುಬಿದ್ರೆ ಮತ್ತು ಬಜ್ಪೆ ಠಾಣೆಯಲ್ಲಿ ಮೂರು ಪ್ರಕರಣಗಳಲ್ಲಿ ಆರೋಪಿಗಳು ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.  

ಐಷಾರಾಮಿ ಕಾರಲ್ಲಿ ತಿರುಗಾಡುತ್ತಿದ್ದ ಕಳ್ಳರು

ಆರೋಪಿಗಳಿಂದ ಒಂದು ಇನ್ನೋವಾ, ಟಾಟಾ ಜೆಸ್ಟ್ ಮತ್ತು ಮಾರುತಿ ಸ್ವಿಫ್ಟ್ ಕಾರು, ಒಂಟು ಆಟೋ ರಿಕ್ಷಾ, 11 ಮೊಬೈಲ್ ಫೋನ್, ನಾಲ್ಕು ದ್ವಿಚಕ್ರ ವಾಹನಗಳು, ಒಂದು ಏರ್ ಗನ್, 250 ಗ್ರಾಮ್ ಚಿನ್ನಾಭರಣ ಸೇರಿ 33 ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಎರಡು ತಲವಾರು, ಒಂದು ಏರ್ ಗನ್, ಕಬ್ಬಿಣದ ರಾಡ್, ಲಿವರ್. ಉದ್ದನೆಯ ಚಾಕು, ಖಾರದ ಹುಡಿ, ಮರದ ದೊಣ್ಣೆಗಳನ್ನು ವಶಕ್ಕೆ ಪಡೆಯಲಾಗಿದೆ.

ಬ್ಲಾಕ್ ಮನಿ ಇರುವ ಮನೆಗಳೇ ಟಾರ್ಗೆಟ್ !

ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಕಾಫಿ ಎಸ್ಟೇಟ್ ಮಧ್ಯೆ ಇರುತ್ತಿದ್ದ ಒಂಟಿ ಮನೆಗಳು, ಫಾರ್ಮ್ ಹೌಸ್ಗಳು, ಬೆಳ್ತಂಗಡಿ ಭಾಗದಲ್ಲಿ ಅಡಿಕೆ ತೋಟಗಳ ಮಧ್ಯೆ ಇರುತ್ತಿದ್ದ ಒಂಟಿ ಮನೆಗಳು, ಅಲ್ಲಿ ತೋಟದ ಹಣದಲ್ಲಿ ಶೇಖರಿಸಿಡುತ್ತಿದ್ದ ಚಿನ್ನಾಭರಣಗಳು ಹೀಗೆ ಎಲ್ಲೆಲ್ಲಿ ಬ್ಲಾಕ್ ಮನಿಯಿಂದ ಸಂಪತ್ತು ಕ್ರೋಡೀಕರಿಸಿರುತ್ತಾರೆಂದು ಸಾಕಷ್ಟು ಅಧ್ಯಯನ ಮಾಡ್ಕೊಂಡು ಅಲ್ಲಿಗೆ ತಂಡದೊಂದಿಗೆ ತೆರಳಿ ದರೋಡೆ ನಡೆಸುತ್ತಿದ್ದರು. ಎರಡು ಕಾರುಗಳಲ್ಲಿ ಒಮ್ಮೆಲೇ ಮುಗಿಬಿದ್ದು ಮನೆಯವರು ಅಡ್ಡಬಂದರೆ, ಅವರನ್ನು ಕಟ್ಟಿಹಾಕಿ ದೋಚುತ್ತಿದ್ದರು.

ಮೊಬೈಲ್ ಬಳಸುತ್ತಿರಲಿಲ್ಲ! ನಂಬರ್ ಪ್ಲೇಟ್ ಬದಲಿಸಿ ಕೃತ್ಯ  

ಕೃತ್ಯದ ಸಂದರ್ಭಗಳಲ್ಲಿ ಯಾವುದೇ ಸುಳಿವು ಸಿಗದಂತೆ ನೋಡಿಕೊಳ್ಳುತ್ತಿದ್ದರು. ದರೋಡೆಗೆ ತೆರಳುವಾಗ ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಒಂಟಿ ಮನೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿಕೊಂಡು ನುಗ್ಗುತ್ತಿದ್ದರು. ಸಾಕಷ್ಟು ಮನೆಗಳ್ಳತನ, ದರೋಡೆ, ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ತೊಡಗಿಸಿದ್ದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ. ಇನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ದರೋಡೆ ತಂಡದಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಸಂಪೂರ್ಣ ಚಿತ್ರಣ ಲಭಿಸಿದೆ. ವಾಹನಗಳನ್ನು ಕದ್ದು ಅದನ್ನೇ ನಂಬರ್ ಪ್ಲೇಟ್ ಬದಲಿಸಿಕೊಂಡು ಕಳವು ಕೃತ್ಯಗಳಿಗೆ ಬಳಸುತ್ತಿದ್ದರು. ರಾತ್ರಿ ವೇಳೆ ಪೊಲೀಸರ ಕಣ್ಣು ತಪ್ಪಿಸಿಕೊಂಡು ಕೃತ್ಯ ಎಸಗುತ್ತಿದ್ದರು, ಪ್ರತೀ ಕೃತ್ಯದ ಬಳಿ ಅಲ್ಲಿ ಸಿಕ್ಕ ಸಂಪತ್ತನ್ನು ಪಾಲು ಮಾಡಿಕೊಂಡು ಶೋಕಿ ಮಾಡುತ್ತಿದ್ದರು. ಗೋವಾಕ್ಕೆ ಹೋಗಿ ಅಲ್ಲೇ ಒಂದಷ್ಟು ಸಮಯ ಇದ್ದು ಬರುತ್ತಿದ್ದರು.

ಈ ರೀತಿ ಅತ್ಯಂತ ವ್ಯವಸ್ಥಿತವಾಗಿ ಜಾಲ ಬೀಸಿಕೊಂಡು ದರೋಡೆ ನಡೆಸುತ್ತಿರುವ ಪ್ರಕರಣ ಪತ್ತೆ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಉಸ್ತುವಾರಿಯಲ್ಲಿ ಪೊಲೀಸರ ತಂಡ ಅಷ್ಟೇ ಕರಾರುವಾಕ್ಕಾಗಿ ಕಾರ್ಯಾಚರಣೆ ನಡೆಸಿ, ದರೋಡೆ ತಂಡವನ್ನು ಬಲೆಗೆ ಬೀಳಿಸಿದೆ. ಮೂಡುಬಿದ್ರೆ ಇನ್ ಸ್ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದ ತಂಡದಲ್ಲಿ ಪಿಎಸ್ಐ ಸುದೀಪ್, ಸಿಬಂದಿಗಳಾದ ಮೊಹ್ಮದ್ ಹುಸೇನ್, ಅಕಿಲ್ ಅಹ್ಮದ್, ಸುಜನ್, ಸಂತೋಷ್, ಬಸವರಾಜ್ ಪಾಟೀಲ್, ಯಶವಂತ ಕುಮಾರ್, ಶಿವರಾಜ್, ನರಸಿಂಹ, ಪ್ರದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Read: ಮೂಡುಬಿದ್ರೆಯಲ್ಲಿ ದರೋಡೆಕೋರರು ; ಒಂದೇ ರಾತ್ರಿ ನಾಲ್ಕು ಕಡೆ ಕೃತ್ಯ ! ಕಾರು ಅಡ್ಡಗಟ್ಟಿ ದರೋಡೆ, ಎರಡು ಮನೆಗೆ ಹಾನಿ

Video: 

Most wanted Notorious daicoty robbery gang arrested by Mangalore city police. This was the same gang in involved at the robbery at Moodbidri and many more in Dakshina Kannada.