Headline Karnataka ವರದಿ ಇಂಪ್ಯಾಕ್ಟ್ ; ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಬಗ್ಗೆ ಪ್ರಕರಣ ದಾಖಲು ; ಒಬ್ಬ ವಶಕ್ಕೆ

22-04-21 11:05 pm       Mangaluru Crime correspondent   ಕರಾವಳಿ

ನಾಯಿಯನ್ನು ಬೈಕಿಗೆ ಕಟ್ಟಿ ಎಳ್ಕೊಂಡು ಹೋಗಿರುವ ದೃಶ್ಯ ಸಹಿತ ಸುದ್ದಿ ಮಾಡಿದ್ದ ಹೆಡ್ ಲೈನ್ ಕರ್ನಾಟಕ ವರದಿ ಭಾರೀ ಇಂಪ್ಯಾಕ್ಟ್ ಆಗಿದೆ.

ಮಂಗಳೂರು, ಎ.22:  ನಾಯಿಯನ್ನು ಬೈಕಿಗೆ ಕಟ್ಟಿ ಎಳ್ಕೊಂಡು ಹೋಗಿರುವ ದೃಶ್ಯ ಸಹಿತ ಸುದ್ದಿ ಮಾಡಿದ್ದ ಹೆಡ್ ಲೈನ್ ಕರ್ನಾಟಕ ವರದಿ ಭಾರೀ ಇಂಪ್ಯಾಕ್ಟ್ ಆಗಿದೆ. ಮಂಗಳೂರು ಕಮಿಷನರ್ ಮತ್ತು ಡಿಸಿಪಿಯ ಸೂಚನೆಯಂತೆ ಸುರತ್ಕಲ್ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 

ಹೆಡ್ ಲೈನಲ್ಲಿ ಸುದ್ದಿ ಪ್ರಕಟಗೊಂಡು ವೈರಲ್ ಆಗುತ್ತಿದ್ದಂತೆ ಅದನ್ನು ವಿಡಿಯೋ ಮಾಡಿದ್ದ ಸುರತ್ಕಲ್ ನಿವಾಸಿ ಜೀವನ್ ಘಟನೆಯ ವಿಡಿಯೋವನ್ನು ಮುಂಬೈನ ಅನಿಮಲ್ ಕೇರ್ ಎನ್ ಜಿಓ ಒಂದಕ್ಕೆ ಕಳುಹಿಸಿದ್ದರು. ಅದರ ಪ್ರತಿನಿಧಿಗಳು ಕರೆ ಮಾಡಿ, ಪೊಲೀಸರಿಗೆ ದೂರು ನೀಡಲು ತಿಳಿಸಿದ್ದಾರೆ. ಅದರಂತೆ, ಜೀವನ್ ಸುರತ್ಕಲ್ ಠಾಣೆಗೆ ತೆರಳಿದ್ದು ಅಲ್ಲಿನ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಏನಪ್ಪಾ.. ನಾಯಿ ವಿಚಾರ ಹಿಡ್ಕೊಂಡು ಕಂಪ್ಲೇಂಟ್ ಮಾಡಲು ಬಂದಿದ್ದೀಯಲ್ಲಾ.. ಬೇರೇನು ಕೆಲ್ಸ ಇಲ್ವಾ ನಿಂಗೆ ಎಂದು ದಬಾಯಿಸಿ ಕಳಿಸಿದ್ದಾರೆ. 

ಈ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಸುಹಾನ್ ಆಳ್ವ, ಡಿಸಿಪಿ ಹರಿರಾಂಗೆ ವಿಷಯ ತಿಳಿಸಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ‌. ಡಿಸಿಪಿ ಹಾಕಿದ್ದ ಮೆಸೇಜನ್ನು ಸುರತ್ಕಲ್ ಪೊಲೀಸರಿಗೆ ತಿಳಿಸಿದಾಗ, ಅಲ್ಲಿನವರು ಎಲರ್ಟ್ ಆಗಿದ್ದಾರೆ. ಕೂಡಲೇ ಎಫ್ಐಆರ್ ಮಾಡಿದ್ದಾರೆ. ಜೀವನ್ ದೂರುದಾರನಾದರೆ, ಸುಹಾನ್ ಸಾಕ್ಷಿಯಾಗಿ ಸಹಿ ಹಾಕಿದ್ದು ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿದ್ದಾರೆ. 

ಆರೋಪಿಗಳು ಕೊಪ್ಪಳ ಮೂಲದವರು ಎನ್ನಲಾಗುತ್ತಿದ್ದು ಒಬ್ಬನನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನನ್ನೂ ಬಂಧಿಸುವುದಾಗಿ ಡಿಸಿಪಿ ಭರವಸೆ ವ್ಯಕ್ತಪಡಿಸಿದ್ದಾರೆ. 

ಎ.15 ರಂದು ರಾತ್ರಿ 8.30 ರ ಸುಮಾರಿಗೆ ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದಿದ್ದ ಘಟನೆ ನಡೆದಿತ್ತು. ಎನ್ಐಟಿಕೆ ಫ್ಲೈ ಓವರ್ ಬಳಿ ಘಟನೆ ನಡೆದಿದ್ದು ಇದನ್ನು ಇನ್ನೊಂದು ಬೈಕಿನಲ್ಲಿ ತೆರಳುತ್ತಿದ್ದ ಮಂದಿ ವಿಡಿಯೋ ಮಾಡಿದ್ದರು.

ನಾಯಿಯನ್ನು ಬೈಕಿಗೆ ಕಟ್ಟಿ ದರ ದರನೆ ಎಳೆದೊಯ್ದ  ಪಾಪಿಗಳು ! ಮಂಗಳೂರಿನಲ್ಲೇ ಮನಕಲಕುವ ಘಟನೆ !

The Surathkal Police have succeeded in arresting one Person in connection to a per dog being tied to a two-wheeler and dragged along a road at NITk, Surathkal in Mangalore.