ಜೋತು ಬಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು !

18-05-21 05:17 pm       Udupi Correspondent   ಕರಾವಳಿ

ರಸ್ತೆಗೆ ಅಡಲಾಗಿ ಜೋತು ಬಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಹೇರೂರು ಬಳಿ ನಡೆದಿದೆ.

ಬೈಂದೂರು, ಮೇ 18 : ವಿದ್ಯುತ್ ಕಂಬದ ದುರಸ್ತಿ ವೇಳೆ ರಸ್ತೆಗೆ ಅಡಲಾಗಿ ಜೋತು ಬಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಹೇರೂರು ಬಳಿ ನಡೆದಿದೆ.

ಮೃತರನ್ನು ಹೇರೂರು ಗ್ರಾಮದ ಯರುಕೋಣೆ ನಿವಾಸಿ ಶೇಖರ ಶೆಟ್ಟಿ ಎಂದು ಗುರುತಿಸಲಾಗಿದೆ. ಮೇ 15ರಂದು ರಾತ್ರಿ ಗಾಳಿ ಮಳೆಯಿಂದಾಗಿ ರಸ್ತೆ ಬದಿಯ ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿದ್ದವು. ಮೇ 17ರಂದು ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ತಂತಿ ಅಳವಡಿಸುವ ಕಾರ್ಯ ನಡೆಯುತ್ತಿತ್ತು.

ಆದರೆ ಗುತ್ತಿಗೆದಾರರು ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಸೂಚನಾ ಫಲಕ, ಸಿಬ್ಬಂದಿಯನ್ನು ನೇಮಿಸದೆ ದುರಸ್ತಿ ಕಾರ್ಯ ಮಾಡುತ್ತಿದ್ದರು ಎನ್ನಲಾಗಿದ್ದು, ಕಂಬಕ್ಕೆ ವಿದ್ಯುತ್ ತಂತಿ ಜೋಡಿಸುತ್ತಿದ್ದ ಸಂದರ್ಭ ತಂತಿಯೊಂದು ತುಂಡಾಗಿ ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿತ್ತು. ಇದೇ ವೇಳೆ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಶೇಖರ ಶೆಟ್ಟಿ ತಂತಿಯನ್ನು ಗಮನಿಸದೆ ತೆರಳಿದ್ದು ತಂತಿ ಅವರ ಕುತ್ತಿಗೆ ಭಾಗಕ್ಕೆ ಸಿಲುಕಿತ್ತು. ಇದರಿಂದ ಅವರು ರಸ್ತೆಗೆ ಬಿದ್ದು ಕುತ್ತಿಗೆ ಮುರಿದಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Motorcyclist dies after getting tangled in wire in byndoor. The deceased has been identified as Shekar Shetty.