ದ.ಕ. ಜಿಲ್ಲೆಯಲ್ಲಿ ಯಾವುದೇ ಹೆಚ್ಚುವರಿ ನಿರ್ಬಂಧ ಇರಲ್ಲ ; ಗೊಂದಲಕ್ಕೆ ಒಳಗಾಗದಿರಿ : ಜಿಲ್ಲಾಧಿಕಾರಿ ಸ್ಪಷ್ಟನೆ

20-05-21 03:24 pm       Mangalore Correspondent   ಕರಾವಳಿ

ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋ‌ಂಕು ಹತ್ತಿಕ್ಕಲು ಹೆಚ್ಚುವರಿ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವದಂತಿಗಳು ಹರಡುತ್ತಿದ್ದು ಆ ಬಗ್ಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು, ಮೇ 20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋ‌ಂಕು ಹತ್ತಿಕ್ಕಲು ಹೆಚ್ಚುವರಿ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಾಲತಾಣ, ಸುದ್ದಿ ಮಾಧ್ಯಮಗಳಲ್ಲಿ ವದಂತಿಗಳು ಹರಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟನೆ ನೀಡಿದ್ದಾರೆ. ಆ ರೀತಿಯ ಯಾವುದೇ ಹೆಚ್ವುವರಿ ನಿರ್ಬಂಧ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಈಗಾಗ್ಲೇ ಮೇ 10ರಿಂದ 24 ರ ವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು ಅದು ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ‌. ಅದನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ನಂಬಿ ಜನರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ‌

ಮೇ 24ರ ನಂತರದ ಲಾಕ್ಡೌನ್ ಬಗ್ಗೆ ರಾಜ್ಯ ಸರಕಾರದ ನಿರ್ದೇಶನವನ್ನು ಪಾಲಿಸಲಾಗುವುದು. ಈ ಕುರಿತು ಬರುತ್ತಿರುವ ಅನಧಿಕೃತ ಸುದ್ದಿಗಳ ಬಗ್ಗೆ ಜನರು ನಂಬಿ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಕೆಲವು ಜಾಲತಾಣ ಹಾಗೂ ವೆಬ್ ಪೋರ್ಟಲ್ ಗಳಲ್ಲಿ ದ.ಕ. ಜಿಲ್ಲೆಯಲ್ಲೂ ಪೂರ್ತಿ ಲಾಕ್ಡೌನ್ ವಿಧಿಸಲಾಗಿದ್ದು ವಾರದಲ್ಲಿ ಎರಡು ದಿನ ಮಾತ್ರ ದಿನಸಿ ಸಾಮಗ್ರಿ ಖರೀದಿಸಲು ಅವಕಾಶ ಇರುತ್ತದೆ. ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಪೂರ್ತಿ ನಿರ್ಬಂಧ ಇರಲಿದೆ ಎಂದು ಪ್ರಸಾರವಾಗಿತ್ತು. ಜಿಲ್ಲಾಧಿಕಾರಿ ಅಥವಾ ಜಿಲ್ಲಾಡಳಿತದ ಅಧಿಕೃತ ಮಾಹಿತಿ ಇಲ್ಲದೆ ಜನರನ್ನು ದಾರಿ ತಪ್ಪಿಸುವ ರೀತಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಈ ಬಗ್ಗೆ ತಪ್ಪು ಸುದ್ದಿ ಪ್ರಸಾರ ಮಾಡಿದ ವೆಬ್ ಪೋರ್ಟಲ್ ವಿರುದ್ಧ ಜಿಲ್ಲಾಡಳಿತದಿಂದ ಪೊಲೀಸ್ ದೂರು ನೀಡಲಾಗುವುದು ಎಂದು ವಾರ್ತಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Mangalore Lockdown to Continue till May 24 in Dakshina Kannada. A web portal has published news stating that the people in the Dakshina Kannada (DK) district will be allowed to buy groceries only two days a week. And there will be no marriages after May 24.