ಜೂನ್ 1ರಿಂದ ಮೀನುಗಾರಿಕೆ ನಿಷೇಧ ; ದಡ ಸೇರಲೇಬೇಕು ಕಡಲ ಮಕ್ಕಳು !

25-05-21 12:39 pm       Mangalore Correspondent   ಕರಾವಳಿ

ಮೀನುಗಾರಿಕೆ ಋತುವಿನ ಅಂತಿಮ ಘಟ್ಟದಲ್ಲಿ ಹೊಡೆತ ಬಿದ್ದಿರುವಾಗಲೇ ಇದೀಗ ಜೂನ್ ಒಂದರಿಂದ ಎರಡು ತಿಂಗಳ ಕಾಲ ಮೀನುಗಾರಿಕೆ ನಿಷೇಧ ಎದುರಾಗಿದೆ. 

ಮಂಗಳೂರು, ಮೇ 25: ಕೊರೊನಾ ಲಾಕ್ಡೌನ್ ಮತ್ತು ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಈ ಬಾರಿಯೂ ಮೀನುಗಾರಿಕೆಯ ಉದ್ಯಮ ನಲುಗಿದೆ. ಮೀನುಗಾರಿಕೆ ಋತುವಿನ ಅಂತಿಮ ಘಟ್ಟದಲ್ಲಿ ಹೊಡೆತ ಬಿದ್ದಿರುವಾಗಲೇ ಇದೀಗ ಜೂನ್ ಒಂದರಿಂದ ಎರಡು ತಿಂಗಳ ಕಾಲ ಮೀನುಗಾರಿಕೆ ನಿಷೇಧ ಎದುರಾಗಿದೆ. 

ಜೂನ್ 1 ರಿಂದ ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧ ಇರಲಿದ್ದು ಕಡಲ ಮಕ್ಕಳು ಎಲ್ಲ ರೀತಿಯ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಮೂಲೆ ಸೇರಬೇಕಿದೆ. ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಕಡಲ ಮೀನುಗಾರಿಕಾ ನಿಯಂತ್ರಣ ಕಾಯಿದೆಯಂತೆ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆ/ಸಾಧನಗಳನ್ನು ಉಪಯೋಗಿಸಿ ಯಾಂತೀಕೃತ ಬೋಟ್ ಅಥವಾ ಯಾವುದೇ ಬೋಟ್‌ಗಳನ್ನು ಸಮುದ್ರಕ್ಕೆ ಇಳಿಸದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಜೂನ್ 1 ರಿಂದ ಜುಲೈ 31ರ ವರೆಗೆ ಒಟ್ಟು 61 ದಿನಗಳ ನಿಷೇಧ ಇರಲಿದ್ದು, ರಾಜ್ಯ ಸರ್ಕಾರದ ನಿಯಮ ಉಲ್ಲಂಘಿಸಿ ಮೀನುಗಾರಿಕೆ‌ ನಡೆಸಿದರೆ, ದಂಡ ಸೇರಿದಂತೆ ಒಂದು ವರ್ಷದ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ ಎಂದು ಮೀನುಗಾರಿಕಾ ಇಲಾಖೆ ಪ್ರಕಟಣೆ ಹೊರಡಿಸಿದೆ. 

ಪ್ರತಿ ವರ್ಷವೂ ಮಳೆಗಾಲದಲ್ಲಿ ಮೀನುಗಳ ಸಂತಾನ ಅಭಿವೃದ್ಧಿಯ ಸಮಯ ಎಂಬ ನೆಲೆಯಲ್ಲಿ ಎರಡು ತಿಂಗಳ ಕಾಲ ಮೀನುಗಾರಿಕೆ ನಿಷೇಧಿಸಿ ರಾಜ್ಯ ಸರಕಾರ ಆದೇಶ ಮಾಡುತ್ತದೆ. ಇದರಿಂದ ಮೀನುಗಳ ಸಂತತಿ ಹೆಚ್ಚುತ್ತದೆ ಅನ್ನುವ ನಂಬಿಕೆಯೂ ಇದೆ.

The Karnataka government has announced the 61-day annual deep-sea fishing ban from June 1 to July 31.