ಬೆಳ್ತಂಗಡಿಯಲ್ಲೊಬ್ಬರು ಹತ್ರೂಪಾಯಿ ಡಾಕ್ಟ್ರು! ಇವರು ಚಿಕಿತ್ಸೆಗೆ ಇಂತಿಷ್ಟು ದರ ವಿಧಿಸಿದ್ದೇ ಇಲ್ವಂತೆ !!

27-05-21 09:19 pm       Mangaluru Correspondent   ಕರಾವಳಿ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ವೇಣುಗೋಪಾಲ ಶರ್ಮ ಎಂಬ ಒಬ್ಬ ವೈದ್ಯರಿದ್ದಾರೆ. ಅವರು ಸ್ಥಳೀಯವಾಗಿ ಹತ್ತು ರೂಪಾಯಿ ಡಾಕ್ಟರ್ ಅಂತಲೇ ಹೆಸರಾಗಿದ್ದಾರೆ. ಯಾಕಂದ್ರೆ, ಹಣ ಅಂದ್ರೆ ಬಾಯ್ಬಿಡುವ ಈಗಿನ ಕಾಲದಲ್ಲೂ ಶರ್ಮರ ಚಿಕಿತ್ಸೆಯ ಶುಲ್ಕ ಬರೀ ಹತ್ತು ರೂಪಾಯಿ!

Photo credits : TOI, Mangaluru

ಬೆಳ್ತಂಗಡಿ, ಮೇ 27: ಈಗೆಲ್ಲಾ ನಗರ ಪ್ರದೇಶಗಳಲ್ಲಿ ವೈದ್ಯರು ಅಂದ್ರೆ, ಪ್ರಾಣ ಹಿಂಡುವವರು, ಹೆಣವನ್ನೇ ಮುಂದಿಟ್ಟು ಹಣ ಕೀಳುವವರು ಅಂತಲೇ ಜನ ಟೀಕಿಸುತ್ತಾರೆ. ಆದರೆ, ಅದಕ್ಕೆ ಹೊರತಾದವರೂ ಬಹಳಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ವೇಣುಗೋಪಾಲ ಶರ್ಮ ಎಂಬ ಒಬ್ಬ ವೈದ್ಯರಿದ್ದಾರೆ. ಅವರು ಸ್ಥಳೀಯವಾಗಿ ಹತ್ತು ರೂಪಾಯಿ ಡಾಕ್ಟರ್ ಅಂತಲೇ ಹೆಸರಾಗಿದ್ದಾರೆ. ಯಾಕಂದ್ರೆ, ಹಣ ಅಂದ್ರೆ ಬಾಯ್ಬಿಡುವ ಈಗಿನ ಕಾಲದಲ್ಲೂ ಶರ್ಮರ ಚಿಕಿತ್ಸೆಯ ಶುಲ್ಕ ಬರೀ ಹತ್ತು ರೂಪಾಯಿ! 

ಹೌದು.. ಗುರುವಾಯನಕೆರೆಯಲ್ಲಿ ಕ್ಲಿನಿಕ್ ಹೊಂದಿರುವ ಡಾ.ವೇಣುಗೋಪಾಲ ಶರ್ಮಾ ಈವತ್ತಿಗೂ ರೋಗಿಯ ತಪಾಸಣೆಗೆ ಇಂತಿಷ್ಟು ಎಂದು ಶುಲ್ಕ ಪಡೆದದ್ದಿಲ್ಲ. 30 ವರ್ಷಗಳಿಂದ ಗುರುವಾಯನಕೆರೆಯಲ್ಲಿ ವೈದ್ಯರಾಗಿರುವ ಶರ್ಮಾ ಅವರು ತಪಾಸಣೆ ಮಾಡಿದ್ದಕ್ಕೆಂದು ಶುಲ್ಕ ಪಡೆದೇ ಇಲ್ವಂತೆ. ಈಗಲೂ ಬಡ ಕೋವಿಡ್ ಸೋಂಕಿತರಿಗೂ ಹತ್ತು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

1989ರಲ್ಲಿ ನಾನು ಉಡುಪಿಯಲ್ಲಿ ಆಯುರ್ವೇದ ಕಾಲೇಜಿನಲ್ಲಿ ಸರ್ಜರಿ ಪದವಿ ಮುಗಿಸಿ ಕ್ಲಿನಿಕ್ ಆರಂಭಿಸಿದ್ದೆ. ನಾನು ಯಾವತ್ತಿಗೂ ರೋಗಿಗೆ ಇಂತಿಷ್ಟು ಎಂದು ದರ ವಿಧಿಸಿದ್ದು ಇಲ್ಲ. ಹಿಂದೆಲ್ಲಾ ಎರಡು ರೂಪಾಯಿ ಕೊಡುತ್ತಿದ್ದರು. ಆನಂತರ ಐದು ರೂಪಾಯಿ ಕೊಡಲು ಆರಂಭಿಸಿದ್ದರು. ಆಗ ಐದು ರೂಪಾಯಿ ಡಾಕ್ಟರ್ ಅಂತ ಜನ ಹೇಳುತ್ತಿದ್ದರು. ಈಗ ಹತ್ತು ರೂಪಾಯಿ ಕೊಡುತ್ತಿದ್ದಾರೆ, ಹತ್ರೂಪಾಯಿ ಡಾಕ್ಟರ್ ಆಗಿದ್ದೇನೆ ಎನ್ನುತ್ತಾರೆ.    

ಬಿಪಿ, ಇನ್ನಿತರ ಬೇಸಿಕ್ ಟೆಸ್ಟ್ ಮಾಡಿದ್ದಕ್ಕೆ ಚಾರ್ಜ್ ಪಡೆದೇ ಇಲ್ಲ. ಆದರೆ, ಜನರು ಸಲಹೆ ನೀಡಿದ್ದಕ್ಕೆಂದು ಶುಲ್ಕ ನೀಡುತ್ತಾರೆ. ನನಗೆ ದೊಡ್ಡ ಪ್ರೇರಣೆ ಆಗಿದ್ದು ನಾನು ಬಾಲ್ಯದಲ್ಲಿದ್ದಾಗ ಕಾಸರಗೋಡಿನಲ್ಲಿ ನಮ್ಮ ಕುಟುಂಬದ ಡಾಕ್ಟರ್ ಆಗಿದ್ದ ಡಾ.ಪಿ.ಎಸ್.ಶಾಸ್ತ್ರಿಯವರು. ಅವರ ಸರಳ ಜೀವನ ಮತ್ತು ಸರಳ ಶೈಲಿಯಿಂದ ನನಗೆ ಆಪ್ತವಾಗಿದ್ದರು. ಹಿಂದೆ ಸಚಿವರಾಗಿದ್ದ ಡಾ.ವಿ.ಎಸ್. ಆಚಾರ್ಯ ಕೂಡ ನನಗೆ ಪ್ರೇರಣೆಯಾಗಿದ್ದರು.

ಈಗಲೂ ವೇಣುಗೋಪಾಲ ಶರ್ಮಾ ದಿನದಲ್ಲಿ ನೂರರಷ್ಟು ರೋಗಿಗಳನ್ನು ತಪಾಸಣೆ ಮಾಡುತ್ತಾರೆ. ಹಿಂದೆಲ್ಲಾ ದಿನಕ್ಕೆ 250ಕ್ಕಿಂತಲೂ ಹೆಚ್ಚು ಮಂದಿಯನ್ನು ತಪಾಸಣೆ ಮಾಡಿ ದಾಖಲೆ ಸೇರಿದ್ದು ಇದೆ. ಹಾಗೆಂದು, ಇವರು ಯಾರೊಬ್ಬರನ್ನೂ ಅಸಿಸ್ಟೆಂಟ್ ಆಗಿ ಇಟ್ಟುಕೊಂಡಿಲ್ಲ. ಬೆಳಗ್ಗಿನಿಂದಲೇ ಚಿಕಿತ್ಸೆ ಆರಂಭಿಸುವ ಶರ್ಮಾ, ಮಧ್ಯಾಹ್ನ 3 ಗಂಟೆ ಸುಮಾರಿಗೆ ರೋಗಿಗಳ ಸರತಿ ಖಾಲಿಯಾದ ಮೇಲೆ ಊಟಕ್ಕೆ ತೆರಳುತ್ತಾರೆ. ಬಳಿಕ ಸಂಜೆ ಮತ್ತೆ ಕರ್ತವ್ಯದಲ್ಲಿ ತೊಡಗುತ್ತಾರೆ. ಕ್ಲಿನಿಕ್ ಮುಂದೆ ಇಂತಿಷ್ಟು ಟೈಮಿಂಗ್ ಎಂದು ಯಾವುದೇ ಬೋರ್ಡನ್ನೂ ಹಾಕ್ಕೊಂಡಿಲ್ಲ.

ಕಳೆದ ಬಾರಿ ದೇಶಾದ್ಯಂತ ಲಾಕ್ಡೌನ್ ಆದಾಗ 41 ದಿನಗಳ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ನೀಡಿದ್ದೆ. ಬಳಿಕ ನಾವು ಯಾಕೆ ಈ ಜ್ವರಕ್ಕೆ ಭಯಪಟ್ಟು ಮನೆಯೊಳಗೆ ಕೂತಿರಬೇಕು ಅನಿಸ್ತು. ಗಡಿಯಲ್ಲಿ ಯೋಧರು ಜೀವ ಭಯವಿಲ್ಲದೆ ಹೋರಾಡುತ್ತಿರುವ ಸಂದರ್ಭದಲ್ಲಿ ವೈದ್ಯರು ಜೀವಕ್ಕೆ ಭಯ ಪಟ್ಟು ಯಾಕೆ ಮನೆಯಲ್ಲಿ ಅವಿತಿರಬೇಕು ಎಂದುಕೊಂಡು ಕ್ಲಿನಿಕ್ ತೆರೆದಿದ್ದೆ. ಆ ಸಂದರ್ಭದಲ್ಲಿ ನನಗೆ ಮತ್ತು ನನ್ನ ಮನೆಯವರಿಗೂ ಕೊರೊನಾ ಬಂದಿತ್ತು. ಮನೆಯಲ್ಲೇ ಐಸೋಲೇಶನ್ ಆಗಿ ಚಿಕಿತ್ಸೆ ಪಡೆದಿದ್ದೆವು. ತಾಯಿಯನ್ನು ಮಾತ್ರ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೆವು. ಈ ಬಾರಿ ಮಾತ್ರ ಕೊರೊನಾ ತುಂಬ ಸೀರಿಯಸ್ಸಾಗಿ ಕಾಣುತ್ತಿದೆ ಎಂದು ಹೇಳುತ್ತಾರೆ, ಶರ್ಮಾ.

ಈಗಲೂ ತುಂಬ ಮಂದಿ ಚಿಕಿತ್ಸೆಗೆ ಬರುತ್ತಾರೆ. ಫ್ಲೂ ರೀತಿಯ ಜ್ವರ ಮತ್ತು ಕೆಮ್ಮು, ಕಫದ ಲಕ್ಷಣ ಇದ್ದರೆ, ಆರ್ ಟಿ ಪಿಸಿಆರ್ ಪರೀಕ್ಷೆ ಮಾಡಿಕೊಳ್ಳಲು ಸೂಚಿಸುತ್ತೇನೆ. ಪಾಸಿಟಿವ್ ಆದರೆ, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಲಹೆ ನೀಡುತ್ತೇನೆ. ಬೇರೆ ಲಕ್ಷಣಗಳಿದ್ದರೂ, ಅಗತ್ಯ ಬಿದ್ದರೆ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತೇನೆ. ಇಲ್ಲದಿದ್ದರೆ, ಸಾಧಾರಣ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುತ್ತೇನೆ ಎನ್ನುತ್ತಾರೆ, ಹತ್ರೂಪಾಯಿ ಡಾಕ್ಟ್ರು. 

An ayurvedic doctor in Guruvayankere in Belthangady taluk, who provides free consultation, sees about 100 patients a day and has been referring people with Covid-like symptoms to the district hospital for tests and treatment.