ಲಸಿಕೆಗಾಗಿ ಹಾಹಾಕಾರ ; ಕೋಟೆಕಾರಿನಲ್ಲಿ ಜನರ ನೂಕುನುಗ್ಗಲು, ತಳ್ಳಾಟ ! ಹೈರಾಣಾದ ಸಿಬಂದಿ

28-05-21 08:30 pm       Mangaluru Correspondent   ಕರಾವಳಿ

ರೊನಾ ಸೋಂಕಿನ ಮತ್ತೊಂದು ಅಲೆ ಬರಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಗೆ ಈಗ ಜನ ಮುಗಿಬೀಳುತ್ತಿದ್ದಾರೆ.

ಮಂಗಳೂರು, ಮೇ 28: ಕೊರೊನಾ ಸೋಂಕಿನ ಮತ್ತೊಂದು ಅಲೆ ಬರಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಗೆ ಈಗ ಜನ ಮುಗಿಬೀಳುತ್ತಿದ್ದಾರೆ. ಆದರೆ, ಲಸಿಕೆ ಮಾತ್ರ ಸೀಮಿತ ಸಂಖ್ಯೆಯಲ್ಲಿ ಪೂರೈಕೆಯಾಗುತ್ತಿರುವುದು ಕಂಟಕವಾಗಿ ಪರಿಣಮಿಸಿದೆ. ಜನರು ಲಸಿಕೆ ಬಂತು ಎಂಬ ಮಾಹಿತಿ ಕೇಳಿದೊಡನೆ ಆರೋಗ್ಯ ಕೇಂದ್ರಗಳಿಗೆ ಮುಗಿಬೀಳುತ್ತಿದ್ದು ನೂಕುನುಗ್ಗಲಿಗೆ ಕಾರಣವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಗುರುವಾರ ಒಂಬತ್ತು ಸಾವಿರ ಲಸಿಕೆಗಳು ಬಂದಿದ್ದವು. ಕೇಂದ್ರದಿಂದ ಆರು ಸಾವಿರ ಮತ್ತು ರಾಜ್ಯ ಸರಕಾರದಿಂದ ಮೂರು ಸಾವಿರ ಲಸಿಕೆ ಪೂರೈಕೆ ಆಗಿರುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿತ್ತು. ಅದರಂತೆ, ಆಯಾ ಭಾಗದ ಆರೋಗ್ಯ ಕೇಂದ್ರಗಳಿಗೆ ಲಸಿಕೆಯನ್ನೂ ವಿತರಿಸಲಾಗಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಪ್ರಕಟಣೆ ನೀಡಿ, ಮತ್ತೆ ಲಸಿಕೆ ಬಂದಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಜನರು ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ದೌಡಾಯಿಸಿದ್ದಾರೆ. ಆದರೆ, ಅಲ್ಲಿ ಜನರನ್ನು ನಿಯಂತ್ರಣ ಮಾಡುವುದಕ್ಕಾಗಲೀ, ಲಸಿಕೆ ನೀಡುವುದಕ್ಕಾಗಲೀ ಪ್ರತ್ಯೇಕ ಸಿಬಂದಿ ಇರಲಿಲ್ಲ. ಮಂಗಳೂರು ಹೊರವಲಯದ ಉಳ್ಳಾಲದ ಕೋಟೆಕಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗಿನಿಂದಲೇ ಜನರು ಮುಗಿಬಿದ್ದು ನೂಕುನುಗ್ಗಲು ಆರಂಭಿಸಿದ್ದರು. ಅಲ್ಲಿ ಪೊಲೀಸರು ಕೂಡ ಇಲ್ಲದೇ ಇದ್ದುದರಿಂದ ಜನರು ಸರತಿ ಸಾಲು ನಿಲ್ಲದೇ ನಾ ಮುಂದೆ ನೀ ಮುಂದೆ ಎಂದು ತಳ್ಳಾಟ ನಡೆಸಿದ್ದಾರೆ.

ಕೋಟೆಕಾರಿನ ಕೇಂದ್ರಕ್ಕೆ ಉಳ್ಳಾಲ, ತೊಕ್ಕೊಟ್ಟಿನಿಂದಲೂ ಜನರು ಲಸಿಕೆಗೆ ಬರುತ್ತಿದ್ದರು. ಕೋಟೆಕಾರು ಹೊರಭಾಗದಿಂದ ಬಂದವರನ್ನು ನಿಮಗೆ ಆಯಾ ಕೇಂದ್ರಗಳಲ್ಲೇ ಲಸಿಕೆ ನೀಡುತ್ತಾರೆ. ಇಲ್ಲಿ ಈ ಭಾಗದವರಿಗೆ ಮಾತ್ರ ಎಂದು ಆಧಾರ್ ಕಾರ್ಡ್ ನೋಡಿ ಹಿಂದಕ್ಕೆ ಕಳಿಸುತ್ತಿದ್ದರು. ಕೋಟೆಕಾರಿನ ಸುನಿಲ್ ಅನ್ನುವ ವ್ಯಕ್ತಿಯೊಬ್ಬರು ಲಸಿಕೆ ಪಡೆಯುವುದಕ್ಕಾಗಿ ಐದನೇ ಬಾರಿಗೆ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಆದರೆ, ಅಲ್ಲಿ ಹನ್ನೆರಡು ಗಂಟೆ ಹೊತ್ತಿಗೆ ಲಸಿಕೆ ಮುಗಿದಿದ್ದು ಹೆಚ್ಚಿನ ಜನರು ಹಿಂದೆ ತೆರಳುತ್ತಿದ್ದರು. ಕೋಟೆಕಾರು ಒಂದರಲ್ಲೇ ಮಧ್ಯಾಹ್ನ ಹೊತ್ತಿಗೆ 350 ಕ್ಕೂ ಹೆಚ್ಚು ಜನ ಸರತಿ ನಿಂತಿದ್ದರು. ಅಲ್ಲಿಗೆ ಹೋದರೆ ಕೊರೊನಾ ಬರಬಹುದು ಎನ್ನುವ ಸ್ಥಿತಿ ಇತ್ತು ಎಂದು ಸ್ಥಳೀಯರು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯಿಂದ ಮೂರ್ನಾಲ್ಕು ದಿನಕ್ಕೊಮ್ಮೆ ಲಸಿಕೆ ಬಂದಿದೆ, ಲಸಿಕೆ ಮುಗಿದಿದೆ ಎಂದು ಪ್ರಕಟಣೆ ನೀಡುವ ಕಾರಣದಿಂದಲೇ ಜನರು ಮುಗಿಬೀಳುತ್ತಿದ್ದಾರೆ. ಇಡೀ ಜಿಲ್ಲೆಗೆ ಐದಾರು ಸಾವಿರ ಪೂರೈಕೆಯಾದರೆ, ಒಂದು ಕೇಂದ್ರಕ್ಕೆ 150-200 ಲಸಿಕೆ ಪೂರೈಕೆ ಆಗಬಹುದು. ಜನರು ಮುಗಿಬಿದ್ದರೆ ಸಹಜವಾಗಿ ನೂಕುನುಗ್ಗಲಿಗೆ ಕಾರಣವಾಗುತ್ತದೆ. ಅಲ್ಲದೆ, ಜನರು ಅಂತರ ಕಾಯ್ದುಕೊಳ್ಳದೆ ವರ್ತಿಸುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯೇ ಹೆಚ್ಚಿರುತ್ತದೆ.

People forget social distancing as long que seen outside vaccine center in Kotekar, Mangalore. An employee of a software firm, was witness to the chaos as people fought with each other and clashed with the hospital staff.