ಆಶಾ ಕಾರ್ಯಕರ್ತೆಯರಿಂದ ಸರಕಾರಿ ವ್ಯವಸ್ಥೆ ಮನೆ ಬಾಗಿಲಿಗೆ ; ಪ್ರತಾಪಸಿಂಹ ನಾಯಕ್ ಮೆಚ್ಚುಗೆ

30-05-21 09:35 pm       Mangaluru Correspondent   ಕರಾವಳಿ

ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ಮುಂಚೂಣಿಯಲ್ಲಿದ್ದು ಸರಕಾರದ ವ್ಯವಸ್ಥೆಗಳನ್ನ ಪ್ರತಿ ಮನೆ ಬಾಗಿಲಿಗೂ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಉಳ್ಳಾಲ, ಮೇ 30: ಕೊರೊನಾದಿಂದಾಗಿ ಇಡೀ ಸಮಾಜಕ್ಕೆ ಕತ್ತಲೆ ಕವಿದಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ಮುಂಚೂಣಿಯಲ್ಲಿದ್ದು ಸರಕಾರದ ವ್ಯವಸ್ಥೆಗಳನ್ನ ಪ್ರತಿ ಮನೆ ಬಾಗಿಲಿಗೂ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಏಳು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಭಾನುವಾರ ಕುರ್ನಾಡು, ಇನೋಳಿ, ನಾಟೆಕಲ್, ಕೋಟೆಕಾರು ಪ್ರಾಥಮಿಕ‌ ಆರೋಗ್ಯ ಕೇಂದ್ರ ಹಾಗೂ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಭಿನಂದನೆ ಹಾಗೂ ಪ್ರೋತ್ಸಾಹ ಧನವನ್ನು ವಿತರಿಸಿ ಅವರು ಮಾತನಾಡಿದರು.

ಇಡೀ ವ್ಯವಸ್ಥೆಯನ್ನ ಮನೆ ಮನೆಗೆ ತಲುಪಿಸುವ ಕಾರ್ಯ ಆಶಾ ಕಾರ್ಯಕರ್ತೆಯರಿಂದಲೇ ಸಾಧ್ಯ. ಬೂತ್ ಮಟ್ಟದಲ್ಲೂ ಟಾಸ್ಕ್ ಫೋರ್ಸ್ ಅಗತ್ಯ. ಟಾಸ್ಕ್ ಪೋರ್ಸಿನ ಸದಸ್ಯರೆಲ್ಲರೂ ಎರಡು ದಿವಸಕ್ಕಾದರೂ ಒಟ್ಟು ಸೇರೋ ಅಗತ್ಯವಿದೆ ಎಂದು ಅವರು ಹೇಳಿದರು.

ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ನರೇಂದ್ರ ಮೋದಿಯವರು ಕೊರೊನಾದಂತಹ ಸಂದಿಗ್ಧತೆಯ ಕಾಲದಲ್ಲೂ ಉತ್ತಮ ಆಡಳಿತದೊಂದಿಗೆ, ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲದೆ ಕೊರೊನಾ ಸಂಕಷ್ಟ ಕಾಲದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾದದ್ದು. ಸಮಾಜದಲ್ಲಿ ಅವರನ್ನು ಗೌರವಿಸುವ ಕೆಲಸಗಳು ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ರಾಜ್ಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ , ಮುಖಂಡರಾದ ಯಶವಂತ್ ಅಮೀನ್, ಗಾಯತ್ರಿ ಕಿಶೋರ್, ರಾಮಕೃಷ್ಣ ಪಟ್ಟೋರಿ, ಕ್ಷೇತ್ರ ಪ್ರಧಾನ‌ ಕಾರ್ಯದರ್ಶಿ ನವೀನ್ ಪಾದಲ್ಪಾಡಿ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುಜಿತ್ ಶೆಟ್ಟಿ ಕಂಬ್ಲಪದವು, ಪ್ರಮುಖರಾದ ಪುರುಷೋತ್ತಮ ಕಲ್ಲಾಪು ಹಾಗೂ ಜೀವನ್ ಕುಮಾರ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.

Seven years of Modi sarkar Pratap Simha Nayak distributed Financial aid to Asha Workers in Ullal.