ದ.ಕ. ಜಿಲ್ಲೆಯಲ್ಲಿ ಕಮ್ಮಿಯಾಗದ ಪಾಸಿಟಿವ್ ರೇಟ್ ; ದಿನಕ್ಕೆ ಆರು ಸಾವಿರ ಕೋವಿಡ್ ಪರೀಕ್ಷೆಗೆ ಜಿಲ್ಲಾಡಳಿತ ಸೂಚನೆ

11-06-21 03:03 pm       Mangalore Correspondent   ಕರಾವಳಿ

ಪಾಸಿಟಿವ್ ಪ್ರಮಾಣ ಇಳಿಕೆಯಾಗದ ಹಿನ್ನೆಲೆಯಲ್ಲಿ ದ.ಕ‌. ಜಿಲ್ಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮತ್ತು ಜಿಲ್ಲೆಯಾದ್ಯಂತ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲು ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.

ಮಂಗಳೂರು, ಜೂನ್ 11; ಪಕ್ಕದ ಉಡುಪಿ ಜಿಲ್ಲೆಯಲ್ಲಿ ಲಾಕ್ಡೌನ್ ತೆರವಾಗುತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ಇನ್ನೂ ಕಡಿಮೆಯಾಗಿಲ್ಲ. ಪಾಸಿಟಿವ್ ಪ್ರಮಾಣ ಇಳಿಕೆಯಾಗದ ಹಿನ್ನೆಲೆಯಲ್ಲಿ ದ.ಕ‌. ಜಿಲ್ಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮತ್ತು ಜಿಲ್ಲೆಯಾದ್ಯಂತ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲು ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.

ಇದಲ್ಲದೆ ನಗರ ಭಾಗದಲ್ಲೂ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರಲ್ಲಿ ಪಾಸಿಟಿವ್ ಪತ್ತೆಯಾದರೂ ಮೂರು ಮಹಡಿಗಳ ನಿವಾಸಿಗಳ ಟೆಸ್ಟಿಂಗ್ ಮಾಡುವಂತೆ ಸೂಚಿಸಲಾಗಿದೆ. ಸೋಂಕಿತರು ವಾಸಿಸುವ ಮಹಡಿ, ಅದರ ಮೇಲಿನ ಮತ್ತು ಕೆಳಗಿನ ಮಹಡಿಗಳಲ್ಲಿ ವಾಸವಾಗಿರುವ ಎಲ್ಲರಿಗೂ ಟೆಸ್ಟ್ ಮಾಡಬೇಕು.

ಇದರ ಜೊತೆಗೆ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳ ಸುತ್ತ ಕಣ್ಗಾವಲು ಕ್ರಮಕ್ಕೆ ಜಿಲ್ಲಾಧಿಕಾರಿ ಗಳು ಸೂಚನೆ ನೀಡಿದ್ದಾರೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆರು ಮೊಬೈಲ್ ಕೋವಿಡ್ ಟೆಸ್ಟಿಂಗ್ ತಂಡಗಳನ್ನು ರಚಿಸಲಾಗಿದೆ. ಒಂದರಲ್ಲಿ ಇಬ್ಬರು ಲ್ಯಾಬ್ ಟೆಕ್ನಿಶಿಯನ್‌ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಮನೆ ಮತ್ತು ಖಾಸಗಿ ಕ್ಲಿನಿಕ್‌ಗಳಿಗೆ ತೆರಳಿ ಪರೀಕ್ಷೆ ಮಾಡಲಾಗುತ್ತದೆ. ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲೂ ಮೊಬೈಲ್ ಟೆಸ್ಟಿಂಗ್ ಲ್ಯಾಬ್‌ಗಳನ್ನು ತೆರೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿದೆ. ಸದ್ಯ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 3,500 ಮಾದರಿಗಳ ಪರೀಕ್ಷೆ ಆಗುತ್ತಿದೆ.

ಇನ್ನು ಮುಂದೆ ನಿತ್ಯ 6 ಸಾವಿರ ಪರೀಕ್ಷೆಗಳನ್ನು ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ, ಎಲ್ಲಾ ಸೋಂಕಿತರ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಮಾಡಿ ಪರೀಕ್ಷೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Spike in Covid Cases in Mangaluru daily six thousand tests to be conducted states Dc Dr. Rajendra Kumar.