ಭೀಕರ ರಸ್ತೆ ಅಪಘಾತ , ಬೈಕ್ ಸವಾರರಿಬ್ಬರ ಸಾವು

31-08-20 09:24 am       Mangalore Reporter   ಕರಾವಳಿ

ನಿನ್ನೆ ತಡ ರಾತ್ರಿ ಪುತ್ತೂರು ತಾಲ್ಲೂಕಿನ ಹೊರವಲಯದ ನರಿಮೊಗರು ಗ್ರಾಮದ ಶಾಲಾ ಬಳಿ ಬೈಕ್, ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುತ್ತೂರು ಆಗಸ್ಟ್ 31: ಮೆಹೆಂದಿ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ಪುತ್ತೂರು ತಾಲ್ಲೂಕಿನ ಹೊರವಲಯದ ನರಿಮೊಗರು ಗ್ರಾಮದ ಶಾಲಾ ಬಳಿ ಬೈಕ್, ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುರಿಯ ಗ್ರಾಮದ ಇಡಬೆಟ್ಟು ಸಮೀಪದ ಕಟ್ಟದಬೈಲು ನಿವಾಸಿ ಐತ್ತಪ್ಪ ಎಂಬವರ ಮಗ ಮಿಥುನ್(18 ) ಹಾಗೂ ಐತ್ತಪ್ಪ ಅವರ ಸಹೋದರ, ಮೆಸ್ಕಾಂ ಪವರ್‌ಮ್ಯಾನ್ ಉಮೇಶ್ ಎಂಬವರ ಮಗ ಭವಿತ್ (19) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ವೀರಮಂಗಲ ಸಮೀಪ ನಡೆದ ಮದುವೆ ಮೆಹಂದಿ ಕಾರ್ಯಕ್ರಮವೊಂದಕ್ಕೆ ಮಿಥುನ್, ಭವಿತ್ ಸಹೋದರರು ಬೈಕ್‌ನಲ್ಲಿ ಹೋಗಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ.

ಮೃತ ಮಿಥುನ್ ಅವರು ನರಿಮೊಗ್ರು ಐಟಿಐ ವಿದ್ಯಾರ್ಥಿಯಾಗಿದ್ದರೆ, ಭವಿತ್ ಅವರು ಸೆಂಟ್ರಿಂಗ್, ಬಾವಿಗೆ ರಿಂಗ್ ಅಳವಡಿಸುವ ವೃತ್ತಿ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.