ವಿದ್ಯುತ್ ಚಿತಾಗಾರ ; ಶಾಸಕರೇ ವಿವಾದ ಬಗೆಹರಿಸಲಿ, ಧರ್ಮ ಎಳೆಯದಿರಿ, ಏಕವ್ಯಕ್ತಿ ತೀರ್ಮಾನ ಬೇಡ, ಸ್ಥಳೀಯರನ್ನು ಪರಿಗಣಿಸಿ 

05-07-21 09:50 pm       Mangaluru Correspondent   ಕರಾವಳಿ

ವಿದ್ಯುತ್ ಚಿತಾಗಾರ ನಿರ್ಮಿಸಲು ಒಂದೂವರೆ ಕೋಟಿ ಅನುದಾನ ಒದಗಿಸಿದ್ದಾರೆ. ಆದರೆ ನಿರ್ವಹಣಾ ಸಮಿತಿಯ ಅಧ್ಯಕ್ಷರ ಏಕವ್ಯಕ್ತಿ ನಿರ್ಣಯದಿಂದ ಗೊಂದಲ ಮೂಡಿದ್ದು, ಶಾಸಕರೇ ಈ ಗೊಂದಲವನ್ನು ಬಗೆಹರಿಸಬೇಕೆಂದು ಸ್ಥಳೀಯ ಹಿಂದೂ ಬಾಂಧವರು ಆಗ್ರಹಿಸಿದ್ದಾರೆ.

ಉಳ್ಳಾಲ, ಜು.5: ಶಾಸಕ ಯು.ಟಿ.ಖಾದರ್ ಅವರು ಮುತುವರ್ಜಿ ವಹಿಸಿ ಇನ್ಫೋಸಿಸ್ ಸಂಸ್ಥೆಯಿಂದ ಚೆಂಬುಗುಡ್ಡೆ ಹಿಂದು ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಒಂದೂವರೆ ಕೋಟಿ ಅನುದಾನ ಒದಗಿಸಿದ್ದಾರೆ. ಆದರೆ ನಿರ್ವಹಣಾ ಸಮಿತಿಯ ಅಧ್ಯಕ್ಷರ ಏಕವ್ಯಕ್ತಿ ನಿರ್ಣಯದಿಂದ ಗೊಂದಲ ಮೂಡಿದ್ದು, ಶಾಸಕರೇ ಈ ಗೊಂದಲವನ್ನು ಬಗೆಹರಿಸಬೇಕೆಂದು ಸ್ಥಳೀಯ ಹಿಂದೂ ಬಾಂಧವರು ಆಗ್ರಹಿಸಿದ್ದಾರೆ.

ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ಇನ್ಫೋಸಿಸ್ ಸಂಸ್ಥೆಯಿಂದ ಒಂದೂವರೆ ಕೋಟಿ ರೂಪಾಯಿ ಅನುದಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ನಡೆಯಬೇಕಿದ್ದ ಶಿಲಾನ್ಯಾಸ ಸ್ಥಳೀಯರ ತೀವ್ರ ವಿರೋಧದಿಂದ ರದ್ದಾಗಿತ್ತು. ಉದ್ದೇಶಿತ ಪ್ರದೇಶವನ್ನು ಬಿಟ್ಟು ಈಗಿರುವ ಕಟ್ಟಿಗೆ ಚಿತಾಗಾರದ ಪಕ್ಕದಲ್ಲೇ ಅಸಮರ್ಪಕ ವಿದ್ಯುತ್ ಚಿತಾಗಾರ ನಿರ್ಮಿಸುವುದಕ್ಕೆ ಸ್ಥಳೀಯರು ತೀವ್ರ ಆಕ್ಷೇಪ, ವಿರೋಧ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಶಿಲಾನ್ಯಾಸ ರದ್ದುಗೊಂಡಿತ್ತು. ಈ ಬಗ್ಗೆ ಸ್ಥಳೀಯರು ಇಂದು ಚೆಂಬುಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಪತ್ರಿಕಾಗೋಷ್ಟಿ ಕರೆದು ಮಾತನಾಡಿದ್ದಾರೆ. 

ಪ್ರಮುಖರಾದ ಸಂತೋಷ್ ಕುಮಾರ್ ಮಾತನಾಡಿ ರುದ್ರಭೂಮಿಗೆ ಕಾದಿರಿಸಿದ 36 ಸೆಂಟ್ಸ್ ಜಮೀನಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬೃಹತ್ ಟ್ಯಾಂಕನ್ನು ನಿರ್ಮಿಸಲಾಗಿದೆ. ಈ ವೇಳೆ ಶಾಸಕ ಯು.ಟಿ.ಖಾದರ್ ರುದ್ರಭೂಮಿ ನಿರ್ವಹಣಾ ಸಮಿತಿ ನಡುವೆ ನಡೆದ ಸಭೆಯಲ್ಲಿ ರುದ್ರಭೂಮಿಯ ಎಡ ಭಾಗದಲ್ಲಿರುವ ಶವ ಹೂಳುವ 45 ಸೆಂಟ್ಸ್ ಪ್ರದೇಶದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದೀಗ ಹಠಾತ್ತಾಗಿ ನಿರ್ಣಯದ ವಿರುದ್ಧವಾಗಿ ಸ್ಮಶಾನದ ಕಟ್ಟಿಗೆ ಚಿತಾಗಾರ ಇರುವಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಲು ಮುಂದಾಗಿರುವುದು ಸಂಶಯ ಮೂಡಿಸಿದೆ. ಶಾಸಕ ಯು.ಟಿ.ಖಾದರ್ ಅವರು ಸ್ಮಶಾನದ ಅಭಿವೃದ್ಧಿ ದೃಷ್ಟಿಯಿಂದ ಇನ್ಫೋಸಿಸ್ ಕಂಪನಿಯಿಂದ ಬೃಹತ್ ಮೊತ್ತದ ಅನುದಾನ ತಂದದ್ದು ನಮಗೆಲ್ಲರಿಗೂ ಸಂತಸ ತಂದಿತ್ತು. ಆದರೆ ಇದೀಗ ನಿಗದಿತ ಸ್ಥಳ ಬದಲಿಸಿ ಅಸಮರ್ಪಕವಾಗಿ ಚಿತಾಗಾರ ನಿರ್ಮಿಸಲು ಮುಂದಾಗಿರುವುದೇ ಗೊಂದಲಕ್ಕೆ ಕಾರಣವಾಗಿದೆ. ಇದೀಗ ಉದ್ದೇಶಿತ ಪ್ರದೇಶದಲ್ಲಿ ಚಿತಾಗಾರ ನಿರ್ಮಿಸಲು ಹೆಚ್ಚುವರಿ 60 ಲಕ್ಷ ರೂಪಾಯಿ ಬೇಕೆಂದು ಸಬೂಬು ಹೇಳಿ ಅನುದಾನ ಹಿಂದೆ ಹೋಗಲು ಷಡ್ಯಂತರ ನಡೆಸುತ್ತಿದ್ದಾರೆ. ಸ್ಥಳೀಯರಿಗೆ ಇನ್ಫೋಸಿಸ್ ಸಂಸ್ಥೆ ಪ್ರಮುಖರು ಅಥವಾ ಶಾಸಕ ಖಾದರ್ ಅವರಲ್ಲಿ ಚರ್ಚಿಸಲು ಯಾರೂ ಅವಕಾಶ ನೀಡಿಲ್ಲ. ಕೇವಲ ರುದ್ರಭೂಮಿ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್ ಅವರ ಏಕವ್ಯಕ್ತಿಯ ನಿರ್ಣಯ ಇಲ್ಲಿ ಗೊಂದಲಕ್ಕೆ ಕಾರಣವಾಗಿದೆ. ರುದ್ರಭೂಮಿ ಸಾರ್ವಜನಿಕ ಸೊತ್ತು. ಆದುದರಿಂದ ಸ್ಥಳೀಯರ ಅಭಿಪ್ರಾಯಗಳನ್ನ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಶಾಸಕ ಖಾದರ್ ಅವರೇ ಸ್ಥಳೀಯರನ್ನು ಗಣನೆಗೆ ತೆಗೆದು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ. ಭವಿಷ್ಯದಲ್ಲಿ ರುದ್ರಭೂಮಿಗೆ ವಿದ್ಯುತ್ ಚಿತಾಗಾರದ ಯೋಜನೆ ಬೇಕೇ ಬೇಕು. ಅದು ಬಿಟ್ಟು ಊರಿನ ಸಮಸ್ತರನ್ನು ಧಿಕ್ಕರಿಸಿ ಮೂರು ಬಾರಿ ಅಸಮರ್ಪಕ ಚಿತಾಗಾರ ಶಂಕುಸ್ಥಾಪನೆಗೆ ಪ್ರಯತ್ನಿಸಲಾಗಿದೆ. ಈ ರೀತಿ ಏಕವ್ಯಕ್ತಿ ಅಧಿಕಾರ ಚಲಾಯಿಸಿದರೆ ಹೋರಾಟ ಅನಿವಾರ್ಯ ಎಂದರು.

 

ಕಾಂಗ್ರೆಸ್ ಮುಖಂಡರೇ ಧರ್ಮವನ್ನು ಎಳೆಯಬೇಡಿ 

ಚಿತಾಗಾರ ನಿರ್ಮಾಣದ ಗೊಂದಲದ ನಡುವೆ ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ್ ಉಳ್ಳಾಲ್ ಪತ್ರಿಕಾಗೋಷ್ಟಿ ಕರೆದು ಮುಸ್ಲಿಂ ಶಾಸಕನಾದರೂ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಕೋಟಿ ಅನುದಾನ ಒದಗಿಸಿದ್ದರೂ ಸ್ಥಳೀಯರು ರಾಜಕೀಯ ನಡೆಸಿದ್ದಾರೆಂದು ಅರೋಪಿಸಿದ್ದಾರೆ. ಈಶ್ವರ್ ಉಳ್ಳಾಲ್ ಅವರೇ, ಸ್ಮಶಾನದ ವಿಚಾರದಲ್ಲಿ ಧರ್ಮವನ್ನು ಎಳೆಯಬೇಡಿ. ಶಾಸಕರ ಮುತುವರ್ಜಿಯ ಬಗ್ಗೆ ನಮಗೂ ಗೌರವವಿದೆ. ಅವರ ಸಮಕ್ಷಮದಲ್ಲೇ ನಡೆದ ನಿರ್ಣಯವನ್ನು ಧಿಕ್ಕರಿಸಿ ಅಸಮರ್ಪಕ ಚಿತಾಗಾರ ನಿರ್ಮಿಸಲು ಹೊರಟಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟವಷ್ಟೆ. ಧರ್ಮಗಳ ನಡುವೆ ದ್ವೇಷ ತರಿಸುವ ಹೇಳಿಕೆಗಳನ್ನು ತಾವು ಹಿಂಪಡೆಯಿರಿ. ನಾವು ಸ್ಮಶಾನಕ್ಕೆ ಕಾದಿರಿಸಿದ ಭೂಮಿಯನ್ನ ಹಿಂದೂ ರುದ್ರಭೂಮಿ ಅಲ್ಲ ಎಂದು ಎಲ್ಲೂ ಹೇಳಲಿಲ್ಲ. ಕಾದಿರಿಸಿದ ಪ್ರದೇಶದ ದಾಖಲೆಗಳು ರುದ್ರಭೂಮಿಯ ಹೆಸರಿಗೆ ನೋಂದಣಿ ಆಗಿಲ್ಲ ಅಂತ ಹೇಳಿದ್ದೇವೆ. ಶಾಸಕ ಖಾದರ್ ಅವರು ನಿಮ್ಮ ಕಾಂಗ್ರೆಸಿಗೆ ಮಾತ್ರವಲ್ಲ ಸಮಸ್ತ ಉಳ್ಳಾಲದ ಆಸ್ತಿ ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.

ಚೆಂಬುಗುಡ್ಡೆ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಕೋಶಾಧಿಕಾರಿ ರಮೇಶ್ ಮೆಂಡನ್, ಸ್ಥಳೀಯರಾದ ಶೇಖರ್ ಪೂಜಾರಿ, ಸೋಮಸುಂದರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Ullal Chembugudde electric cremation takes controversy each day residents hold press meet